ದೀಪಾವಳಿಗೆ ಹಸಿರು ಪಟಾಕಿಗೆ ಮಾತ್ರ ಅವಕಾಶ ನೀಡಿ : ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆಯ ಒತ್ತಾಯ

3 Min Read

 

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ. ಅಕ್ಟೋಬರ್. 25 : ದೀಪಾವಳಿಗೂ ಮೊದಲೇ ಪಟಾಕಿ ಸದ್ದು ಕೇಳಿಬರುತ್ತಿದೆ. ಪಟಾಕಿ ಮಾಲಿನ್ಯಕ್ಕೆ ಕಾರಣವಾಗಿದೆ. ಈ ಕಾರಣಕ್ಕೆ ಆನೇಕ ರಾಜ್ಯಗಳಲ್ಲಿ ಪಟಾಕಿ ಮೇಲೆ ನಿಷೇಧ ಹೇರಲಾಗಿದೆ. ರಾಜ್ಯದಲ್ಲಿ ಹಾಗೂ ಮಾಲಿನ್ಯಕಾರಕ ಪಟಾಕಿಗಳ ಬದಲು ಹಸಿರು ಪಟಾಕಿಗೆ ಅವಕಾಶ ನೀಡಲಾಗಿದ್ದು ಚಿತ್ರದುರ್ಗ ಜಿಲ್ಲಾದ್ಯಂತ ಮಾರಾಟ ಮಾಡುವ ಪಟಾಕಿ ಮಾರಾಟಗಾರಿಗೆ ಸೂಕ್ತವಾಗಿ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟಮಾಡುವಂತೆ ಜಿಲ್ಲಾಧಿಕಾರಿಗಳು ಆದೇಶಿಸಬೇಕು ಮತ್ತು ಆಪಾಯಕಾರಿ ಪಟಾಕಿಗಳನ್ನು ಸೀಜ್ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆಯ ಒತ್ತಾಯಿಸುತ್ತದೆ.

ಈ ಬಗ್ಗೆ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಎಸ್.ಟಿ.ನವೀನ್ ಕುಮಾರ್ ಕಳೆದ ಬಾರಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆಯಿಂದ ಮನವಿ ಸಲ್ಲಿಸಿದಂತೆ ನಗರಸಭೆ ಆಯುಕ್ತರು ಉತ್ತಮ ಕಾರ್ಯನಿರ್ವಹಣೆ ಮಾಡಿದ್ದಾರೆ. ಅಪಾಯಕಾರಿ ಪಟಾಕಿಗಳನ್ನು ತಡೆದಿದ್ದು ಇದೇ ರೀತಿ ಸರ್ಕಾರ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಲ್ಲಿ ಕಾನೂನು ಕ್ರಮ ಕೈಗೊಂಡು ಅಂತಹ ಮಳಿಗೆಯನ್ನು ಸೀಜ್ ಮಾಡಬೇಕಾಗಿ ವಿನಂತಿ ಅಲ್ಲದೆ ಹಸಿರು ಪಟಾಕಿ ಹೊರತು ಪಡಿಸಿ ಬೇರೆ ಪಟಾಕಿಗಳನ್ನು ಮಾರಾಟ ಮಾಡಿದರೆ ಅವುಗಳನ್ನು ವಶಪಡಿಸಿಕೊಳ್ಳಲು ಮನವಿ ಮಾಡುತ್ತಾ ಪೊಲೀಸ್ ಇಲಾಖೆ, ನಗರಸಭೆ, ಅಗ್ನಿಶಾಮಕ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆಯಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆಯ ಪದಾಧಿಕಾರಿಗಳೊಂದಿಗೆ ಸಭೆ ನಡೆಸಲು ನಿರ್ಧರಿಸಲಾಗಿದೆ.

ಪ್ರಧಾನ ಕಾರ್ಯದರ್ಶಿ ಮಾಲತೇಶ್ ಅರಸ್ ಮಾತನಾಡಿ, ಸಾಮಾನ್ಯ ಪಟಾಕಿಯಿಂದ ಮಾಲಿನ್ಯ ಹೆಚ್ಚಾಗುತ್ತದೆ. ಹಸಿರು ಪಟಾಕಿ ಮಾಲಿನ್ಯವನ್ನು ಕಡಿಮೆ ಮಾಡುತ್ತದೆ. ಸಾಮಾನ್ಯ ಪಟಾಕಿಗಿಂತ ಹಸಿರು ಪಟಾಕಿಗಳು ಭಿನ್ನವಾಗಿವೆ. ಹಸಿರು ಪಟಾಕಿಗಳನ್ನು, ನ್ಯಾಷನಲ್ ಎನ್ವಿರಾನ್ಮಂಟಲ್ ಇಂಜಿನಿಯರಿಂಗ್ ರಿಸರ್ಚ್ ಇನ್ಸಿಟ್ಯೂಟ್ ಅವಿಷ್ಕರಿಸಿದೆ. ಸಾಮಾನ್ಯ ಪಟಾಕಿಯಂತೆ ಇವು ಶಬ್ದ ಮಾಡುತ್ತವೆ. ಆದ್ರೆ ಮಾಲಿನ್ಯ ಕಡಿಮೆ. ಇದಲ್ಲದೆ ಸಾಮಾನ್ಯ ಪಟಾಕಿಗಳಿಗಿಂತ ಕಡಿಮೆ ಹಾನಿಕಾರಕ, ಪೊಟ್ಯಾಸಿಯಮ್ ನೈಟ್ರೇಟ್ ಮತ್ತು ಕಾರ್ಬನ್ ಬಳಸುವುದಿಲ್ಲ. ಹಸಿರು ಪಟಾಕಿಯಿಂದ ಬರುವ ಶಬ್ದ ಕೂಡ ಕಡಿಮೆಯಿರುತ್ತದೆ. ಪ್ರತಿ ಬಾರಿ ದೀಪಾವಳಿ ಬಂದಾಗಲೂ ಪಟಾಕಿ ಸಿಡಿಸುವ ವಿಚಾರದ ಚರ್ಚೆ ಸಾಮಾನ್ಯ ಪರ- ವಿರೋಧ ಚರ್ಚೆಯ ಬಳಿಕ ಪಟಾಕಿ ಸಿಡಿತ ಎಂದಿನಂತೆಯೇ ಸಾಗುತ್ತದೆ. ಪಟಾಕಿ ಸಿಡಿಸುವಾಗ ತೋರುವ ನಿರ್ಲಕ್ಷ್ಯದಿಂದ ಕಣ್ಣಿಗೆ ಹಾನಿಯಾಗಬಹುದು, ಕೈಸುಟ್ಟು ಹೋಗಬಹುದು, ಬೆಂಕಿ ಉಂಟಾಗಬಹುದು, ಕಿವಿಗೆ ಹಾನಿಯಾಗಬಹುದು. ಭಾರಿ ಸದ್ದಿನಿಂದ ಸಾಕುಪ್ರಾಣಿಗಳು ಪಕ್ಷಿಗಳಿಗೆ ತೊಂದರೆಯಾಗುತ್ತದೆ. ವಾಯು ಮಾಲಿನ್ಯವಾಗುತ್ತದೆ ಎಂಬುದು ನಮ್ಮ ವಾದ. ಪಟಾಕಿ ಸಿಡಿಸುವುದರಿಂದ ಉಸಿರಾಡುವುದಕ್ಕೇ ಹಿರಿಯರು ಮಕ್ಕಳು ಮತ್ತು ಸಾರ್ವಜನಿಕರು ಸಂಕಷ್ಟ ಅನುಭವಿಸ ಬೇಕಾಗುತ್ತದೆ.ಹೀಗಾಗಿಯೇ ಹಲವು ರಾಜ್ಯಗಳು ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧ ಮಾಡಿವೆ ಎಂದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ವೇದಮೂರ್ತಿ ಮಾತನಾಡಿ, ರಾಜ್ಯದಲ್ಲಿ ದೀಪಾವಳಿ ಹಬ್ಬದ ನೆಪದಲ್ಲಿ ಪಟಾಕಿಯನ್ನು ಸುಡಲಾಗುತ್ತಿದೆ ಇದರಿಂದ ಪರಿಸರ ಹಾನಿಯಾಗುತ್ತದೆ ಅಲ್ಲದೆ ಮಾನವ ಹಾಗೂ ಪ್ರಾಣಿ ಪಕ್ಷಿಗಳ ಮೇಲೂ ಸಹಾ ಹಾನಿಯಾಗುತ್ತದೆ ಇದರ ಬಗ್ಗೆ ಶ್ರೀಘ್ರವಾಗಿ ನ್ಯಾಯಾಲಯದ ಮೊರೆ ಹೋಗಿ ರಾಜ್ಯದಲ್ಲಿ ಪಟಾಕಿ ಸುಡುವುದನ್ನು ನಿಷೇಧ ಮಾಡುವಂತೆ ಮನವಿ ಮಾಡಲಾಗುವುದು ಎಂದರು.

ಬಸವರಾಜು ಮಾತನಾಡಿ, ಕರ್ನಾಟಕವೂ ಸೇರಿ ಕೆಲವು ರಾಜ್ಯಗಳು ಮಧ್ಯಮ ಮಾರ್ಗವೊಂದನ್ನು ಹುಡುಕುವ ಪ್ರಯತ್ನ ನಡೆಸಿವೆ. ಇಂಥಹ ರಾಜ್ಯಗಳು ಹಸಿರು ಪಟಾಕಿಗೆ ಅವಕಾಶ ನೀಡಿದ್ದು ಕೇಂದ್ರ ಆರೋಗ್ಯ ಸಚಿವರು ಹಸಿರು ಪಟಾಕಿ’ ಪರಿಸರಸ್ನೇಹಿ’ ಯಾಗಿದೆ ಎಂದಿದ್ದಾರೆ. ಇನ್ನೊಂದು ಕಡೆ ಹಸಿರು ಪಟಾಕಿಗಳಲ್ಲಿಯೂ ಅಪಾಯಕಾರಿಯಾದ ರಾಸಾಯನಿಕಗಳ ಬಳಕೆ ಎಗ್ಗಿಲ್ಲದೆ ಸಾಗಿದೆ ಎಂಬ ಆರೋಪ ಈಗ ಕೇಳಿ ಬಂದಿದೆ. ಬಳಕೆ ಆಗಿರುವ ರಾಸಾಯನಿಕಗಳು ಯಾವುವು ಎಂಬುದನ್ನು ಪಟಾಕಿಯ ಪೊಟ್ಟಣದಲ್ಲಿ ನಮೂದಿಸಬೇಕು ಎಂಬ ನಿಯಮ ಇದೆ. ಈ ಪಟಾಕಿಯ ಪೊಟ್ಟಣಗಳಲ್ಲಿ ಬೇರಿಯಂ ನೈಟ್ರೇಟ್ ಮತ್ತು ಸಲ್ಪರ್ ಬಳಸಲಾಗಿದೆ ಎಂದು ಬರೆಯಲಾಗಿದೆ. ಈ ಎಲ್ಲ ಪೊಟ್ಟಣಗಳಲ್ಲಿ ‘ಹಸಿರು ಪಟಾಕಿ’ ಎಂಬ ಮೊಹರು ಕೂಡ ಇದೆ ಈ ಹಿನ್ನೆಲೆಯಲ್ಲಿ ಪಟಾಕಿಯಿಂದ ಮಕ್ಕಳಿಗೆ ಅನಾಹುತವಾಗದಂತೆ ಎಲ್ಲಾ ಪೋಷಕರು ಜಾಗೃತರಾಗಿರಬೇಕು ಎಂಬುದು ಮನವಿ ಮಾಡಿದರು.

ಉಪಾಧ್ಯಕ್ಷರಾದ ಡಾ.ಎಂ.ಸಿ.ನರಹರಿ ಸಂಚಾಲಕರಾದ ಟಿ.ರುದ್ರಮುನಿ ಚೇತನ, ಅಜೇಯ್ ಮಧು ಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *