ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಕೇಸಲ್ಲಿ ಹೇಗೋ ಜಾಮೀನು ಪಡೆದು ಹೊರಗೆ ಬಂದಿದ್ದ ದರ್ಶನ್ ಮತ್ತೆ ಅದೇ ಜೈಲುಪಾಲಾಗಿದ್ದಾರೆ. ಆದರೆ ಮೊದಲೇ ಇದ್ದ ಬೆನ್ನು ನೋವಿಗೆ ಸರ್ಜರಿ ಮಾಡಿಸಿಕೊಳ್ಳದೆ, ಇಂದು ಅದರಿಂದ ಭಾರೀ ನೋವು ಅನುಭವಿಸುವಂತಾಗಿದೆ. ಕೂರಲು ಆಗ್ತಿಲ್ಲ, ಮಲಗಲು ಆಗ್ತಿಲ್ಲ ಎಂಬ ಸ್ಥಿತಿಗೆ ಬಂದಿದ್ದಾರೆ. ವೈದ್ಯರು ಕೂಡ ಒಂದಷ್ಟು ಸಲಹೆಯನ್ನ ನೀಡಿದ್ದಾರೆ.
ಸದ್ಯಕ್ಕೆ ಸಿವಿ ರಾಮನ್ ಆಸ್ಪತ್ರೆಯ ವೈದ್ಯರು ವಾರಕ್ಕೆ ಎರಡು ಬಾರಿ ಫಿಸಿಯೋಥೆರಪಿ ಚಿಕಿತ್ಸೆಯನ್ನ ನೀಡುತ್ತಿದ್ದಾರೆ. ಆದರೂ ಇನ್ನಷ್ಟು ಆರೋಗ್ಯದ ಕಾಳಜಿ ಬೇಕು ಎಂಬುದನ್ನ ವೈದ್ಯರು ತಿಳಿಸಿದ್ದಾರೆ. ನೆಲದ ಮೇಲೆ ಕೂರಬಾರದು, ಹೀಟಿಂಗ್ ಬೆಲ್ಟ್ ಕೊಡಿ ಎಂಬುದನ್ನ ತಿಳಿಸಿದ್ದಾರೆ. ಯಾಕಂದ್ರೆ ಈ ಮೊದಲೇ ದರ್ಶನ್ ಅವರಿಗೆ ಮೊಣಕೈ ಆಪರೇಷನ್ ಕೂಡ ಆಗಿದೆ. ಹೀಗಾಗಿ ಅಲ್ಲಿ ರಾಡ್ ಹಾಕಿರುವ ಕಾರಣ ಅದಕ್ಕೆ ಕೋಲ್ಡ್ ಆಗಬಾರದು. ಹೀಗಾಗಿ ಹೀಟಿಂಗ್ ಬೆಲ್ಟ್ ಅನ್ನು ನೀಡಿ ಎಂದಿದ್ದಾರೆ.
ಇನ್ನು ಜೈಲಿಗೆ ಭೇಟಿ ಕೊಟ್ಟು ಅಧಿಕಾರಿಗಳು ವರದಿ ರೆಡಿ ಮಾಡಿ ಕೋರ್ಟ್ ಗೆ ಸಲ್ಲಿಕೆ ಮಾಡಿದ್ದು, ಸೌಲಭ್ಯವನ್ನ ಕೊಡಬೇಕಿದೆ ಎಂದಿದ್ದಾರೆ. ಈ ವರದಿಯನ್ನು ತಿಳಿದ ನಟ ದರ್ಶನ್ ಜೈಲಿನಲ್ಲಿಯೇ ಕೂಗಾಡಿದ್ದಾರೆ ಎನ್ನಲಾಗಿದೆ. ನಾನು ಜೈಲಿನಲ್ಲಿ ಹೀಗೆ ಇರಬೇಕಾ..? ನನಗೆ ಯಾವುದೇ ಸೌಲಭ್ಯ ಕೊಡುವುದಿಲ್ಲವಾ ಎಂದು ರೇಗಿದ್ದಾರಂತೆ. ಜೊತೆಗೆ ಇದ್ದ ಸ್ನೇಹಿತ ನಾಗರಾಜ್ ಸಮಾಧಾನ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ನಟ ದರ್ಶನ್ ಜೈಲಿನಲ್ಲಿ ಹಾಸಿಗೆ, ದಿಂಬಿಗಾಗಿ ಅರ್ಜಿ ಮೇಲೆ ಅರ್ಜಿಯನ್ನ ಹಾಕುತ್ತಿದ್ದಾರೆ. ಆದರೂ ಯಾವುದೇ ರೀತಿಯ ಸೌಲಭ್ಯ ಸಿಗುತ್ತಿಲ್ಲ ಎಂದು ವರದಿಯಲ್ಲೂ ಉಲ್ಲೇಖವಾಗಿದೆ.

