Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಿವಾಹ ನೋಂದಣಿಗೆ ಆಧಾರ್ ಕಾರ್ಡ್ ವಯಸ್ಸಿನ ಪುರಾವೆ ಅಲ್ಲ, ಈ ದಾಖಲೆಗಳು ಕಡ್ಡಾಯ!

---Advertisement---

ಬೆಂಗಳೂರು.ಜುಲೈ.27: ರಾಜ್ಯದಲ್ಲಿ ಬಾಲ್ಯವಿವಾಹ ಎಂಬ ಸಾಮಾಜಿಕ ಪಿಡುಗನ್ನು ಬೇರುಸಹಿತ ಕಿತ್ತೊಗೆಯಲು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮಹತ್ವದ ಹೆಜ್ಜೆಯೊಂದನ್ನು ಇರಿಸಿದೆ.

ಇನ್ಮುಂದೆ ವಿವಾಹ ನೋಂದಣಿ ಮಾಡಿಸುವ ಸಂದರ್ಭದಲ್ಲಿ ಕೇವಲ ಆಧಾರ್ ಕಾರ್ಡ್ ಅನ್ನು ವಯಸ್ಸಿನ ಅಧಿಕೃತ ಪುರಾವೆಯಾಗಿ ಪರಿಗಣಿಸಬಾರದು ಎಂದು ಆಯೋಗವು ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕ ಆಯುಕ್ತರಿಗೆ ಪತ್ರದ ಮೂಲಕ ಸ್ಪಷ್ಟ ನಿರ್ದೇಶನ ನೀಡಿದೆ.

ಸಾಮಾನ್ಯವಾಗಿ ಆಧಾರ್ ಕಾರ್ಡ್ ನಲ್ಲಿ ನಮೂದಿಸಲಾಗುವ ಜನನ ದಿನಾಂಕವು ಸ್ವಯಂ ಘೋಷಿತ ದಾಖಲೆಗಳ ಮೇಲೆ ಆಧಾರಿತವಾಗಿರುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ, ಕೇವಲ ಆಧಾರ್ ನಂಬಿ ಮದುವೆ ನೋಂದಣಿ ಮಾಡಿದರೆ ಅಪ್ರಾಪ್ತರ ವಿವಾಹಕ್ಕೂ ಅಧಿಕೃತ ಮುದ್ರೆ ಬೀಳುವ ಅಪಾಯವಿದೆ. ಈ ಆತಂಕವನ್ನು ನಿವಾರಿಸಲು 2014ರ ಬಾಲ್ಯ ವಿವಾಹ ನಿಷೇಧ (ಕರ್ನಾಟಕ) ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಆಯೋಗ ಪ್ರತಿಪಾದಿಸಿದೆ. ವಧು-ವರರ ಸರಿಯಾದ ವಯಸ್ಸನ್ನು ದೃಢೀಕರಿಸಲು ಕಡ್ಡಾಯವಾಗಿ ಜನನ ಪ್ರಮಾಣಪತ್ರ, ಎಸ್ಎಸ್ಎಲ್ಸಿ ಅಂಕಪಟ್ಟಿ ಅಥವಾ ಶಾಲಾ ದಾಖಲಾತಿಗಳನ್ನು ಪರಿಶೀಲಿಸಬೇಕು. ಸಂದಿಗ್ಧ ಪರಿಸ್ಥಿತಿಗಳಲ್ಲಿ ಸರ್ಕಾರಿ ವೈದ್ಯರ ಪ್ರಮಾಣಪತ್ರವನ್ನಷ್ಟೇ ಪರಿಗಣಿಸಬೇಕು ಎಂದು ಕೋರಲಾಗಿದೆ.

ಬಾಲ್ಯವಿವಾಹ ತಡೆಯುವುದು ಇಡೀ ಸಮಾಜದ ಕರ್ತವ್ಯವಾಗಿದ್ದು, ನೋಂದಣಿ ಪ್ರಕ್ರಿಯೆಯಲ್ಲಿ ಸಣ್ಣ ಲೋಪವಾದರೂ ಅದು ಮಗುವಿನ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹಾಗಾಗಿ, ನಿಯಮಗಳನ್ನು ಗಾಳಿಗೆ ತೂರಿ ಆಧಾರ್ ಆಧಾರದ ಮೇಲೆ ಮದುವೆ ನೋಂದಾಯಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಜೊತೆಗೆ ನೋಂದಣಿ ಇಲಾಖೆಯ ಸಿಬ್ಬಂದಿಗೆ ಈ ಬಗ್ಗೆ ಸೂಕ್ತ ತರಬೇತಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ತಕ್ಷಣವೇ ಹಮ್ಮಿಕೊಳ್ಳಬೇಕು ಎಂದು ಆಯೋಗ ಆಗ್ರಹಿಸಿದೆ.

Join WhatsApp

Join Now

Join Telegram

Join Now