ಚಿತ್ರದುರ್ಗ | ಪ್ರೀತಿಸಿ ಮದುವೆಯಾದವನ ಬದುಕು ಕೊಲೆಯಲ್ಲಿ ಅಂತ್ಯ..!

1 Min Read

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 28 : ಈಗಷ್ಟೇ ಜೈಲಿನಿಂದ ಬಂದವನಿಗೆ ಬದುಕಿನ ಅರ್ಥ ತಿಳಿಯಬೇಕಿತ್ತು. ಮೊದಲ ಹೆಂಡತಿಯ ಸಾವಿನ ವಿಚಾರಕ್ಕೆ ಜೈಲು ಸೇರಿದ್ದವ, ಈಗ ಮತ್ತೆ ಮದುವೆ ವಿಚಾರಕ್ಕೇನೆ ಕೊಲೆಯಾಗಿದ್ದಾನೆ. ಈ ಘಟನೆ ತಾಲ್ಲೂಕಿನ‌ ಕೊಣನೂರು ಗ್ರಾಮದಲ್ಲಿ ನಡೆದಿದೆ.

40 ವರ್ಷದ ಮಂಜುನಾಥ್ ಕೊಲೆಯಾದ ವ್ಯಕ್ತಿ. ನಿನ್ನೆ (ಬುಧವಾರ) ಈತನ ಕೊಲೆಯಾಗಿದೆ. ಮೃತ ಮಂಜುನಾಥ್ ಕಳೆದ ಐದು ವರ್ಷದ ಹಿಂದೆ ಶಿಲ್ಪಾ ಎಂಬ ಯುವತಿಯನ್ನು ಪ್ರೀತಿಸಿ, ವಿವಾಹವಾಗಿದ್ದ. ಆದರೆ ಶಿಲ್ಪಾಗೆ ಅದೇನಾಯ್ತೋ ಏನೋ ಆಕೆ ನೇಣಿಗೆ ಶರಣಾಗಿದ್ದಳು. ಹೆಂಡತಿ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆ ಮಂಜುನಾಥ್ ಅಂದು ಜೈಲು ಪಾಲಾಗಿದ್ದ. ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ಮಂಜುನಾಥ, ಮತ್ತೊಂದು ಮದುವೆಗೆ ತಯಾರಿ ನಡೆಸಿದ್ದ.

ತನಗಿಂತಲೂ ಅತ್ಯಂತ ಚಿಕ್ಕ ವಯಸ್ಸಿನ ಹುಡುಗಿಯನ್ನು‌ ಮದುವೆಯಾಗಬೇಕೆಂದುಕೊಂಡ. ಆ ಹುಡುಗಿಯನ್ನು ನಾಯಕನಹಟ್ಡಿ ಸಮೀಪದ ಹೊಸಗುಡ್ಡಕ್ಕೆ ಕರೆದೊಯ್ದು ಮದುವೆ ಕೂಡ ಆಗಿದ್ದನು. ಆದರೆ ಈ ಮದುವೆಯನ್ನು ಒಪ್ಪದ ಮನೆಯವರು ಪಂಚಾಯ್ತಿ ಸೇರಿಸಿದರು. ಪಂಚಾಯ್ತಿಯಲ್ಲಿ ಎಲ್ಲರು ಸೇರಿದಾಗ, ಹುಡುಗಿಯ ಮನೆ ಕಡೆಯವರು, ಆಗಿದ್ದು ಆಗಿ ಹೋಯ್ತು. ಎಲ್ಲರ ಸಮ್ಮುಖದಲ್ಲಿ, ಅದ್ದೂರಿಯಾಗಿ ಮದುವೆ ಮಾಡಿಕೊಡುತ್ತೇವೆ ಎಂದು ಹೇಳಿದ್ದಾರೆ. ಅಲ್ಲಿಯವರೆಗೂ ಮಗಳ ನಮ್ಮ ಮನೆಯೆಲ್ಲಿಯೇ ಇರಲಿ ಎಂದು ಕರೆದೊಯ್ದರು.

ಆದರೆ 20 ದಿನವಾದರೂ ಮದುವೆ ಬಗ್ಗೆಯಾಗಲಿ, ಹುಡುಗಿಯನ್ನು ಮನೆಗೆ ಕಳುಹಿಸಿಕೊಡುವ ಯಾವ ಸುಳಿವು ಕಾಣಲಿಲ್ಲ. ಹೀಗಾಗಿ ಮಂಜುನಾಥ್ ನೇರವಾಗಿ ಯುವತಿಯ ಮನೆ ಬಳಿ ಹೋಗಿದ್ದನು. ಆಗ ಗಲಾಟೆ ಶುರುವಾಗಿದೆ, ಗಲಾಟೆ ಅತಿರೇಕಕ್ಕೆ ಹೋಗಿದ್ದು ಸಂಬಂಧಿಕರು, ಕಲ್ಲು, ಕೋಲುಗಳಿಂದ ಹಲ್ಲೆ ನಡೆಸಿ ಕೊಂದಿದ್ದಾರೆ. ಕೊಲೆ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ. ಈ ಸಂಬಂಧ ಭರಮಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *