ತುಮಕೂರು: ಸಾವು ಯಾವಾಗ, ಯಾರನ್ನ, ಹೇಗೆ ಕರೆಯುತ್ತೇ ಅನ್ನೋದು ಗೊತ್ತಾಗಲ್ಲ. ಅದರಲ್ಲೂ ನೀರಿನ ಜೊತೆಗೆ ಆಡುವಾಗ ಬಹಳ ಕಾಳಜಿಯಿಂದ ಇರಬೇಕು. ಸ್ವಲ್ಪ ಯಾಮಾರಿದರು ಪ್ರಾಣಕ್ಕೆ ಕುತ್ತು ಬರಲಿದೆ. ಅಂಥದ್ದೊಂದು ಘಟನೆ ಕುಣಿಗಲ್ ನ ಮಾರ್ಕೋನಳ್ಳಿ ಡ್ಯಾಂನಲ್ಲಿ ನಡೆದಿದೆ.
ಮಾರ್ಕೋನಳ್ಳಿಯ ಜಲಾಶಯದ ಹಿನ್ನೀರಿನಲ್ಲಿ ಆರು ಮಂದಿ ಕೊಚ್ಚಿಕೊಂಡು ಹೋಗಿದ್ದಾರೆ. ಮಂಗಳವಾರ ಈ ಘಟನೆ ನಡೆದಿದ್ದು, ಇಬ್ಬರ ಮೃತದೇಹ ಇಂದು ಸಿಕ್ಕಿದೆ ಉಳಿದವರ ಮೃತದೇಹಗಳ ಹುಡುಕಾಟ ನಡೆದಿದೆ. ತುಮಕೂರು ನಗರದ ಬಿಜಿ ಪಾಳ್ಯದ ಸಾಜಿಯಾ ಹಾಗೂ ಅರ್ಬಿನ್ ಎಂಬುವವರ ಮೃತದೇಹ ಸಿಕ್ಕಿದೆ.
ಉಳಿದಂತೆ 45 ವರ್ಷದ ತಬಾಸುಮ್, 44 ವರ್ಷದ ಶಬಾನ, 4 ವರ್ಷದ ಮಿಫ್ರಾ, 1 ವರ್ಷದ ಮಹಿಬ್ ದೇಹಕ್ಕಾಗಿ ಹುಡುಕಾಟ ನಡೆಯುತ್ತಿದೆ. ಮೇಲ್ನೋಟಕ್ಕೆ ಇವರೆಲ್ಲಾ ಕುಟುಂಬಸ್ಥರೇ ಆಗಿರಬಹುದಾ ಎಂದು ಅಂದಾಜಿಸಲಾಗುತ್ತಿದೆ. ಆದರೆ ಪುಟ್ಟ ಪುಟ್ಟ ಮಕ್ಕಳು ಕೂಡ ಹೀಗೆ ನೀರಿನಲ್ಲಿ ಕೊಚ್ಚಿಕೊಂಡು ಹೋದರೆ ಆ ಸಂಕಟ ತಡೆದುಕೊಳ್ಳುವುದಕ್ಕೆ ಪೋಷಕರಿಂದ ಎಷ್ಟು ಕಷ್ಟ ಹೇಳಿ.
ಇವರ ಜೊತೆಗೇನೆ ಇದ್ದಂತ ನವಾಜ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದೇಹಕ್ಕೆ ಸಣ್ಣ ಪುಟ್ಟ ನೋವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಲಾಶಯದ ಹಿನ್ನೀರು ಬಹಳ ರಭಸವಾಗಿ ಹರಿಯುತ್ತಿತ್ತು. ಆದರೆ ನೀರಿನ ಜೊತೆಗೆ ಆಟ ಆಡುವ ಬಯಕೆ ಇಂದು ಪ್ರಾಣವನ್ನೇ ತೆಗೆದಿದೆ. ಮೃತರೆಲ್ಲರು ಕುಣಿಗಲ್ ತಾಲೂಕಿನ ಮಾಗಡಿ ಪಾಳ್ಯದ ಗ್ರಾಮಕ್ಕೆ ಸಂಬಂಧಿಕರ ಮನೆಗೆಂದು ಹೋಗಿದ್ದರು. ಊಟ ಮುಗಿಸಿ, ಜಲಾಶಯ ನೋಡಿಕೊಂಡು ಬರಲು ಹೋಗಿದ್ದಾರೆ. ಹರಿಯುತ್ತಿದ್ದ ಹಿನ್ನೀರಿನಲ್ಲಿ ಆಟವಾಡುವುದಕ್ಕೆಂದು ನೀರಿಗೆ ಇಳಿದಾಗ ಈ ಘಟನೆ ನಡೆದಿದೆ.





