ಬೆಂಗಳೂರು: ಎಸ್ಟಿ ಸಮುದಾಯಕ್ಕೆ ಕುರುಬರನ್ನು ಸೇರಿಸುವ ಪ್ರಯತ್ನ, ಮಾತುಕತೆ ನಡೆಯುತ್ತಲೇ ಇದೆ. ಈ ಸಂಬಂಧ ಎಸ್ಟಿ ಸಮುದಾಯದವರಿಂದ ವಿರೋಧವೂ ಇದೆ. ಇಂದು ವಿ.ಎಸ್.ಉಗ್ರಪ್ಪ ಅವರು ಕೂಡ ಆಕ್ರೋಶ ಹೊರ ಹಾಕಿದ್ದಾರೆ. ಎಸ್ಟಿ ಸಮುದಾಯಕ್ಕೆ ಕುರುಬರನ್ನ ಸೇರಿಸುವ ಮೂಲಕ ನಮ್ಮ ತಟ್ಟೆಗೆ ಸಿದ್ದರಾಮಯ್ಯ ಅವರು ಕೈ ಹಾಕಬಾರದು. ಕುರುಬರನ್ನ ಎಸ್ಟಿ ಸಮುದಾಯಕ್ಕೆ ಸೇರಿಸಬೇಕಾದರೆ ಮೀಸಲಾತಿಯ ಪ್ರಮಾಣವನ್ನು ಹೆಚ್ಚಳ ಮಾಡಬೇಕು. ಹಾಗೇ ಸೆರ್ಪಡೆಯಾದರೆ ಉಗ್ರ ಹೋರಾಟ ಮಾಡ್ತೇವೆ ಎಂಬ ಎಚ್ಚರಿಕೆಯನ್ನ ನೀಡಿದ್ದರು. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಎಸ್ಟಿ ಸಮುದಾಯಕ್ಕೆ ಕುರುಬರನ್ನು ಸೇರಿಸುವ ಬಗ್ಗೆ ಮಾತನಾಡಿದ್ದಾರೆ.
ವಾಲ್ಮೀಕಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಕುರುಬರನ್ನು ಎಸ್ಟಿಗೆ ಸೇರಿಸಿದರೆ ಎದ್ಟಿ ಮೀಸಲಾತಿಯ ಪ್ರಮಾಣ ಹೆಚ್ಚಾಗಬೇಕು. ಯಾರೂ ಯಾರ ಅನ್ನದ ತಟ್ಟೆಗೆ ಕೈ ಹಾಕಬಾರದು ಅಂತ ಮೊದಲ ಬಾರಿಗೆ ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವ ಬಗ್ಗೆ ಸಿದ್ದರಾಮಯ್ಯ ಅವರು ಮಾತನಾಡಿದ್ದಾರೆ.
ಕುರುಬರನ್ನು ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಾಗಬೇಕು ಎನ್ನುವುದಕ್ಕೆ ನನ್ನ ಬೆಂಬಲ, ಸಹಮತವೂ ಇದೆ. ಯಾರೂ ಯಾರ ಅನ್ನದ ತಟ್ಟೆಗೆ ಕೈ ಹಾಕಬಾರದು. ಯಾರು ಯಾರ ಅವಕಾಶಗಳನ್ನೂ ಕಿತ್ತುಕೊಳ್ಳಬಾರದು ಎನ್ನುವುದು ನನ್ನ ಬದ್ಧತೆ ಎಂದು ಉಗ್ರಪ್ಪ ಅವರ ಗೊಂದಲಕ್ಕೆ ಸ್ಪಷ್ಟನೆ ನೀಡಿದ್ದಾರೆ. ಕುರುಬರನ್ನು STಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದು ಬೊಮ್ಮಾಯಿ ಸರ್ಕಾರ. ಆ ಶಿಫಾರಸ್ಸಿನ ಬಗ್ಗೆ ಕೆಲವು ಸ್ಪಷ್ಟನೆಗಳನ್ನು ಕೇಂದ್ರ ಕೇಳಿದೆ. ಅದಷ್ಟೇ ನಮ್ಮೆದುರಿಗಿದೆ ಎಂದು ಅವರು ಸ್ಪಷ್ಟಪಡಿಸಿದರು.






