ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಗಾಗಿ, ಶಾಲಾ ಸಮಯ ಧಿಡೀರ್ ಬದಲಾವಣೆ : ಎಐಡಿಎಸ್ಓ ಆಕ್ಷೇಪ

1 Min Read

 

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 07 : ರಾಜ್ಯ ಸರ್ಕಾರವು ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಗಾಗಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಸಮಯವನ್ನು ಬೆಳಗ್ಗೆ 8 ಗಂಟೆಯಿಂದ 1 ಗಂಟೆಯವರೆಗೆ ಮಾತ್ರ ಎಂದು ಬದಲಾಯಿಸಿದೆ. ಈ ಕ್ರಮವು ಅತ್ಯಂತ ಅಪ್ರಜಾತಾಂತ್ರಿಕವಾಗಿದ್ದು, ಇದರಿಂದ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಅಡ್ಡಿ ಎದುರಾಗುವುದರಲ್ಲಿ ಸಂಶಯವಿಲ್ಲ. ಇದರಿಂದಾಗಿ ಖಾಸಗಿ ಶಾಲಾ ಮತ್ತು ಸರ್ಕಾರಿ ಶಾಲಾ ಮಕ್ಕಳ ನಡುವೆ ಭೀಕರ ತಾರತಮ್ಯ ಉಂಟಾಗುವ ಆತಂಕ ಎದುರಾಗಿದೆ.

 

ಈಗಾಗಲೇ ಶಾಲಾ ಶಿಕ್ಷಕರು ಭೋದನೆ ಮಾಡುವ ಜೊತೆಗೆ ಭೋದಕೇತರ ಚಟುವಟಿಕೆಗಳ ಜವಾಬ್ದಾರಿಗಳನ್ನು ನಿರ್ವಹಿಸುವ ದುಸ್ಥಿತಿ ಇದ್ದು, ಈ ಸಮೀಕ್ಷೆಯ ಜವಾಬ್ದಾರಿಯು ಹೊರೆಯಾಗಲಿದೆ ಎಂದು ಶಿಕ್ಷಕರಿಂದಲೂ ಕೇಳಿಬರುತ್ತಿದೆ. ಅಲ್ಲದೇ ಈ ಕ್ರಮವು ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಸ್ಥಿರತೆ ಮತ್ತು ದೈನಂದಿನ ದಿನಚರಿಯನ್ನು ಹಾಳು ಮಾಡುತ್ತದೆ. ಬೋಧನೆ ಮತ್ತು ಕಲಿಕೆಯ ಶಾಲಾ ಪ್ರಮುಖ ಕಾರ್ಯಕ್ಕೆ ತೊಂದರೆಯಾಗದಂತೆ ಪೂರಕ ಯೋಜನೆಯಿಲ್ಲದೆ, ಚರ್ಚೆಯು ಮಾಡದೇ ಶಾಲಾ ಸಮಯವನ್ನು ಏಕಾಏಕಿ ಬದಲಾಯಿಸಿರುವುದು ಶೋಚನೀಯ ಸಂಗತಿಯಾಗಿದೆ. ಜೊತೆಗೆ ಸರ್ಕಾರಿ ಶಾಲಾ ಮಕ್ಕಳ ಫಲಿತಾಂಶ ಕುಸಿಯುವ ಭೀತಿ ಉಂಟಾಗಿದೆ. ಈ ಬಾರಿ, ದಸರಾ ರಜೆ ಸೌಲಭ್ಯವನ್ನು ಪಡೆಯದ ಸರ್ಕಾರಿ ಶಾಲಾ ಶಿಕ್ಷಕರು, ಇದೀಗ ಒಂದೇ ದಿನ, ಬೋಧನೆ ಮತ್ತು ಸಮೀಕ್ಷೆ ಎರಡನ್ನೂ ನಡೆಸುವ ಹೊರೆ ಹೇರುವುದು ಸಮಂಜಸವಲ್ಲ.

ಸಮೀಕ್ಷೆಯ ಕೆಲಸಕ್ಕೆ ಸರ್ಕಾರಿ ಶಾಲಾ ಸಮಯವನ್ನು ಬಲಿಕೊಡದೆ, ಮಕ್ಕಳ ಶೈಕ್ಷಣಿಕ ಭವಿಷ್ಯ ಹಿತದೃಷ್ಟಿಯಿಂದ ತನ್ನ ಆದೇಶವನ್ನು ಹಿಂಪಡೆದು, ಸಮೀಕ್ಷೆಯ ಕೆಲಸಕ್ಕೆ ಪರ್ಯಾಯ ವ್ಯವಸ್ಥೆಗೆ ಸರ್ಕಾರವು ಕ್ರಮ ಕೈಗೊಳ್ಳಬೇಕೆಂದು ಎಐಡಿಎಸ್ಓ ಆಗ್ರಹಿಸಿದೆ.

Share This Article
Enable Notifications OK No thanks