ಚಿತ್ರದುರ್ಗ. ಸೆ.30: ಜಿಲ್ಲೆಯಲ್ಲಿ ತಾಯಿ ಮರಣ ಮತ್ತು ಶಿರು ಮರಣ ಪ್ರಮಾಣ ತಗ್ಗಿಸುವ ನಿಟ್ಡಿನಲ್ಲಿ ನಾವೆಲ್ಲರೂ ಬಹುಮುಖ್ಯ ಪಾತ್ರವಹಿಸಬೇಕಿದೆ. ಏಳು ವಾರಗಳ ಗರ್ಭಿಣಿ ಎಂದು ತಿಳಿದ ಮೇಲೆ ನಾವು ಅತಿ ಜಾಗರೂಕತೆಯಿಂದ ಅವರನ್ನು ನೋಡಿಕೊಳ್ಳಬೇಕಿದೆ ಎಂದು ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್ ಹೇಳಿದರು.
ಇಲ್ಲಿನ ಬುದ್ಧ ನಗರ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ “ಗರ್ಭಿಣಿ ತಪಾಸಣೆ ಶಿಬಿರ” ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯವಂತ ಮಹಿಳೆಯಿಂದ ಆರೋಗ್ಯವಂತ ಮಗು ಜನಿಸಲು ಸಾಧ್ಯ. ಹಾಗಾಗಿ ಗರ್ಭಿಣಿಯನ್ನು ಸದೃಢರನ್ನಾಗಿ ಕಾಪಾಡಿದಲ್ಲಿ ಆರೋಗ್ಯವಂತ ಮಗು ಜನಿಸುತ್ತದೆ. ಇತ್ತೀಚೆಗೆ ಗರ್ಭಿಣಿಯಲ್ಲಿ ಹಿಮೊಗ್ಲೊಬಿನ್ ಅಂಶ ಕಡಿಮೆ ಇರುವುದನ್ನು ಕಾಣುತ್ತಿದ್ದೇವೆ. ಅತಿ ಹೆಚ್ಚು ಗರ್ಭಿಣಿಯರು ಹಿಮೊಗ್ಲೊಬಿನ್ ಅಂಶ ಅಬಿವೃದ್ಧಿ ಪಡಿಸಲು ಕಬ್ಬಿಣಾಂಶ ಮಾತ್ರೆಗಳು ಪೂರಕ ಇಂಜೆಕ್ಷನ್ಗಳನ್ನು ನೀಡಿ, ಅವರನ್ನು ಸರಿದೂಗಿಸುವ ಪ್ರಯತ್ನ ನಡೆಯುತ್ತಲೇ ಇದೆ. ವೈದ್ಯರಾದವರು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಟ್ಟದಲ್ಲಿ ತಮ್ಮ ವ್ಯಾಪ್ತಿಯ ಗರ್ಭಿಣಿಯರನ್ನು ತಿಂಗಳಿಗೊಮ್ಮೆ ಕರೆಸಿ, ಅವರ ಆರೋಗ್ಯ ತಪಾಸಣೆ ಮಾಡುವುದು ಕಡ್ಡಾಯವಾಗಿ ಅಭ್ಯಾಸ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮುಂದಿನ ದಿನಗಳಲ್ಲಿ ನಾವು ಮಗುವನ್ನು ಪಡೆಯಬೇಕು ಎಂದು ತೀರ್ಮಾನಿಸುವ ದಂಪತಿಗಳೇ ಸದೃಢ ಆರೋಗ್ಯ ಕಾಪಾಡಿಕೊಂಡು ಮಗು ಪಡೆಯುವ ಆಲೋಚನೆ ಮಾಡುವ ಬಗ್ಗೆ ಯೋಚಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಇಂತಹ ಶಿಬಿರಗಳು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಾಂತರ ಮಟ್ಟದಲ್ಲಿ ಏರ್ಪಡಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಆಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ. ಶಿವಕುಮಾರ್ ಮಾತನಾಡಿ ಸ್ವಸ್ಥ್ಯ ನಾರಿ ಸಶಕ್ತ ಪರಿವಾರ ಎಂಬಂತೆ ನಾರಿಯರನ್ನು ಚೆನ್ನಾಗಿ ನೋಡಿಕೊಂಡರೆ ಸಶಕ್ತ ಆರೋಗ್ಯವಂತ ಪರಿವಾರ ಆಗುವುದು ಎಂದು ತಿಳಿಸಿದರು. ಆಯುಷ್ ಇಲಾಖೆ ವತಿಯಿಂದ ಹಾಜರಿದ್ದ ಸುಮಾರು ನೂರು ಗರ್ಭಿಣಿಯರಿಗೆ ಉಚಿತ ಚ್ಯವನಪ್ರಾಶ್ ವಿತರಿಸಿದರು.
ಜಿಲ್ಲಾ ಆಸ್ಪತ್ರೆಯ ಹೆರಿಗೆ ಮತ್ತು ಸ್ತ್ರಿ ರೋಗ ತಜ್ಞರಾದ ಭಾಗ್ಯಜ್ಯೋತಿ, ಸರ್ಕಾರಿ ವೈದ್ಯಕೀಯ ಕಾಲೆಜಿನ ಡಾ.ಅಶ್ವಿನಿ, ಡಾ.ಶಾಂತ, ಡಾ.ಪ್ರಭುದೇವ ಬಣಕಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗಿರೀಶ್, ಬುದ್ದನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುರೇಂದ್ರಕುಮಾರ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ ನಾಗಸಮುದ್ರ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಯವರು, ಆಶಾ ಕಾರ್ಯಕರ್ತೆಯರು ಇದ್ದರು.




