ಬೆಂಗಳೂರು: ಈ ಬಾರಿಯ ವಿಷ್ಣುವರ್ಧನ್ ಅವರ ಹುಟ್ಟುಹಬ್ಬವನ್ನ ಬಹಳ ಅದ್ದೂರಿಯಾಗಿ ಮಾಡಬೇಕು ಅಂತ ಅಭಿಮಾನಿಗಳೆಲ್ಲಾ ಆಸೆ ಪಟ್ಟಿದ್ದರು. ಆದ್ರೆ ಅದೇ ಸಮಯಕ್ಕೆ ವಿಷ್ಣು ದಾದಾ ಅವರ ಸಮಾಧಿಯನ್ನೇ ನೆಲಸಮ ಮಾಡಿ ಎಲ್ಲಾ ಆಸೆಗಳನ್ನ ಮಣ್ಣು ಪಾಲು ಮಾಡಿ ಹಾಕಿದ್ರು. ಬಳಿಕ ರಾಜ್ಯ ಸರ್ಕಾರ ಆ ಜಾಗವನ್ನ ಮುಟ್ಟುಗೋಲು ಹಾಕಿಕೊಂಡ ಮೇಲೆ ಅಭಿಮಾನಿಗಳು ಮತ್ತಷ್ಟು ಖುಷಿ ಪಟ್ಟರು. ಆದ್ರೆ ಇದೀಗ ಅಭಿಮಾನ್ ಸ್ಟುಡಿಯೋದಲ್ಲಿ ಆ ಸಂಭ್ರಮಕ್ಕೆ ಕೋರ್ಟ್ ಬ್ರೇಕ್ ಹಾಕಿದೆ.
ವಿಷ್ಣುದಾದಾ ಅವರ 75ನೇ ವರ್ಷದ ಸಂಭ್ರಮಾಚರಣೆಯನ್ನು ಉತ್ತರಹಳ್ಳಿ ಮೇನ್ ರೋಡ್ ನಲ್ಲಿರುವ ಅಭಿಮಾನ್ ಸ್ಟುಡಿಯೋದಲ್ಲಿ ಆಚರಣೆ ಮಾಡಲು ಅವರ ಅಭಿಮಾನಿಗಳು ತಯಾರಿಯಲ್ಲಿದ್ದರು. ಇದಕ್ಕಾಗಿ ಅವರ ಅಭಿಮಾನಿಗಳ ಸಂಘ, ಹೈಕೋರ್ಟ್ ಗೆ ಅರ್ಜಿಯನ್ನು ಸಲ್ಲಿಕೆ ಮಾಡಿದ್ದರು. ಆ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ಅನುಮತಿಯನ್ನು ನಿರಾಕರಣೆ ಮಾಡಿದೆ. ಸಮಾಧಿ ಜಾಗ್ ವಿವಾದ ವಿಚಾರಣೆ ಇನ್ನೂ ಬಾಕಿ ಇದೆ. ಹೀಗಾಗಿ ಆ ಜಾಗದಲ್ಲಿ ಸಂಭ್ರಮಾಚರಣೆ ಬೇಡ ಎಂದಿದೆ.
ಅಭಿಮಾನ್ ಸ್ಟುಡಿಯೋದಲ್ಲಿಯೇ ಅದ್ದೂರಿಯಾಗಿ ಹುಟ್ಟುಹಬ್ಬವನ್ನ ಆಚರಣೆ ಮಾಡುವುದಕ್ಕೆ ಅಭಿಮಾನಿಗಳು ಕಾಯ್ತಾ ಇದ್ದರು. ಹೀಗಿರುವಾಗ ಹೈಕೋರ್ಟ್ ಈ ರೀತಿಯ ನಿರ್ಧಾರ ತೆಗೆದುಕೊಂಡಿದೆ. ಈಗ ಅಭಿಮಾನಿಗಳು ಹೇಗೆ..? ಎಲ್ಲಿ ಸಂಭ್ರಮಾಚರಣೆ ಮಾಡ್ತಾರೆ ಎಂಬುದನ್ನ ನೋಡಬೇಕಿದೆ. ಇನ್ನು ಮೈಸೂರಿನಲ್ಲಿ ಅದ್ದೂರಿಯಾಗಿಯೇ ಸಂಭ್ರಮಾಚರಣೆ ನಡೆಯಲಿದೆ. ಕುಟುಂಬಸ್ಥರೆಲ್ಲಾ ಮೈಸೂರಿಗೆ ತೆರಳಿ, ಅಲ್ಲಿರುವ ವಿಷ್ಣುವರ್ಧನ್ ಸ್ಮಾರಕಕ್ಕೆ ಪೂಜೆ ಸಲ್ಲಿಸಿ ಬರುತ್ತಾರೆ. ಅದನ್ನು ಬಿಟ್ಟರೆ ಅಭಿಮಾನಿಗಳೆಲ್ಲಾ ಸಾಮಾಜಿಕ ಸೇವೆಯನ್ನು ಮುಂದುವರೆಸಲಿದ್ದಾರೆ. ಅನ್ನದಾನ ಮಾಡುವ ಮೂಲಕವೂ ವಿಷ್ಣುದಾದಾರನ್ನ ನೆನೆಯಲಿದ್ದಾರೆ.


