ಚಿತ್ರದುರ್ಗ. ಸೆ.11: ಇಲ್ಲಿನ ವೈದ್ಯರಿಗೆ ತಮ್ಮ ಸ್ವಂತ ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್ಗಳ ಮೇಲಿರುವಷ್ಟು ಕಾಳಜಿ ಜಿಲ್ಲಾಸ್ಪತ್ರೆಯ ಬಗ್ಗೆ ಇಲ್ಲ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಯದೇವ, ಕಿದ್ವಾಯಿ ಸೇರಿದಂತೆ ರಾಜ್ಯದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳು ಸಿಬ್ಬಂದಿ ಕೊರತೆ ನಡುವೆಯೂ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸುವ ರೋಗಿಗಳಿಗೆ ವಿಶ್ವ ದರ್ಜೆಯ ಚಿಕಿತ್ಸೆ ನೀಡುತ್ತಿವೆ. ಬೇರೆಡೆಗೆ ಹೊಲಿಸಿದರೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಸಿಬ್ಬಂದಿ ಸಂಖ್ಯೆ ಹೆಚ್ಚಿದೆ. ಆದರೆ ಜಿಲ್ಲಾ ಆಸ್ಪತ್ರೆಯ ವೈದ್ಯರಿಗೆ ತಮ್ಮ ಸ್ವಂತ ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್ಗಳ ಮೇಲೆ ಹೆಚ್ಚು ಎಂದು ಬೇಸರ ವ್ಯಕ್ತಪಡಿಸಿದರು.
ಸಿಬ್ಬಂದಿ ಕೊರತೆ ನಡುವೆಯೂ ವೈದ್ಯರ ಖಾಸಗಿ ಆಸ್ಪತ್ರೆಗಳು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತವೆ. ಆದರೆ ಜಿಲ್ಲಾಸ್ಪತ್ರೆಯಲ್ಲಿ ಮಾತ್ರ ಇದು ಸಾಧ್ಯವಿಲ್ಲ ಎಂದರೆ ಹೇಗೆ ? ಇದಕ್ಕೆಲ್ಲಾ ಇಚ್ಚಾಶಕ್ತಿ ಕೊರತೆಯೇ ಕಾರಣವಾಗಿದೆ. ಆಡಳಿತಾಧಿಕಾರಿಗಳು, ವೈದ್ಯರು, ಶುಶ್ರೂಷಕರು, ತಂತ್ರಜ್ಞರು, ಗ್ರೂಪ್ ಡಿ ಸಿಬ್ಬಂದಿಯ ಮೇಲೆ ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಹಿಡಿತ ಇಲ್ಲವೇ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಬೇಸರ ವ್ಯಕ್ತಪಡಿಸಿದರು.
ಎ.ಬಿ.ಆರ್.ಕೆ. ಅನುದಾನದ ಲೆಕ್ಕ ಪತ್ರ ನೀಡಲು ಸೂಚನೆ:
ಜಿಲ್ಲಾ ಆಸ್ಪತ್ರೆಯಲ್ಲಿ ಕಳೆದ 3 ವರ್ಷಗಳಲ್ಲಿ ಎ.ಬಿ.ಆರ್.ಕೆ (ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ) ಯೋಜನೆಯಡಿ ನೀಡಿದ ಶಸ್ತ್ರಚಿಕಿತ್ಸೆ ಹಾಗೂ ಯೋಜನೆಗೆ ಸರ್ಕಾರದಿಂದ ಬಿಡುಗಡೆ ಮಾಡಿದ ಅನುದಾನದ ಕುರಿತು ಲೆಕ್ಕ ಪತ್ರ ವಿವರಗಳನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಸೂಚಿಸಿದರು.
ಎ.ಬಿ.ಆರ್.ಕೆ ಅನುದಾನದಲ್ಲಿ ವೈದ್ಯರಿಗೆ ನೀಡಿದ ಭತ್ಯೆ, ಖರೀದಿಸಿದ ಔಷದೋಪಕರಣಗಳ ವೆಚ್ಚವನ್ನು ಪರಿಶೀಲನೆಗೆ ನೀಡಬೇಕು. ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಇರುವ ಆರ್ಥಿಕ ವೆಚ್ಚದ ಅಧಿಕಾರದಡಿ ಖರ್ಚು ಮಾಡಿದ ವೆಚ್ಚದ ಮಾಹಿತಿ ನೀಡಬೇಕು. ರಾಜ್ಯ ಔಷದೋಗ್ರಾಣದಿಂದ ಜಿಲ್ಲಾಸ್ಪತ್ರೆಗೆ ಸರಬರಾಜು ಮಾಡಿದ ಔಷಧಗಳ ವಿವರ ಹಾಗೂ ಖಾಸಗಿ ಸರಬರಾಜುದಾರರಿಂದ ಖರೀದಿಸಿದ ಔಷಧಗಳ ವಿವರವನ್ನು ಕಂಪನಿಗಳ ಹೆಸರು ಸಹಿತ ಪರಿಶೀಲನೆಗೆ ನೀಡುವಂತೆ ಹೇಳಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಪ್ರಸಾದ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಸ್.ಪಿ. ರವೀಂದ್ರ, ನಿವಾಸಿ ವೈದ್ಯಾಧಿಕಾರಿ ಆನಂದ್ ಪ್ರಕಾಶ್, ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ಸಿ.ಓ.ಸುಧಾ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಡಾ.ಶೀತಲ್ ಪ್ರಶಾಂತ, ಚಿದಾನಂದ ಸ್ವಾಮಿ, ಹಬೀಬುಲ್ಲಾ, ನಾಗರಾಜ ಸಕ್ಕರೆ, ಎಂ.ಆರ್.ಸಿ. ಮೂರ್ತಿ, ರೆಹಮತ್ ಸೇರಿದಂತೆ ಮತ್ತಿತರರು ಇದ್ದರು.


