ಸುದ್ದಿಒನ್, ಚಿತ್ರದುರ್ಗ: ಸೆ.09 : ಮಾದಿಗರ ಧೀರ್ಘ ಕಾಲದ ಹೋರಾಟದ ಫಲ, ಸಿದ್ದರಾಮಯ್ಯ ಸರ್ಕಾರ ಒಳಮೀಸಲಾತಿ ನೀಡಿರುವುದು ನಮ್ಮೆಲ್ಲರಿಗೂ ತೃಪ್ತಿ ಇದೆ. ಆದರೆ, ಕೆಲ
ಗೊಂದಲದ ಮಾತುಗಳು ಸಮಾಜದಲ್ಲಿ ಹರಿದಾಡುತ್ತಿದ್ದು, ಅದಕ್ಕೆ ಅಂತ್ಯ ಹಾಡುವ ಕೆಲಸ ಮಾಡಬೇಕೆಂದು ಮಾಜಿ ಸಚಿವ ಹೆಚ್.ಆಂಜನೇಯ ಆಗ್ರಹಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುಪ್ರೀಂ ಕೋರ್ಟ್ ತೀರ್ಪು ತಕ್ಷಣವೇ ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೆ ಸಿದ್ದರಾಮಯ್ಯ ಸರ್ಕಾರ ಎಲ್ಲ ರೀತಿಯ ಕ್ರಮಕೈಗೊಂಡರು. ಎ.ಬಿ.ಸಿ. ಗುಂಪುಗಳನ್ನಾಗಿಸಿ ಮೀಸಲಾತಿ ಹಂಚಿಕೆ ಮಾಡಿದ್ದಾರೆ. ನಮಗೆ ಶೇ.7 ಸಿಗಬೇಕಿತ್ತು. ಆದರೆ, ಹಸಿವನಲ್ಲಿದ್ದ ನಮಗೆ ಅನ್ನ ಸಿಕ್ಕಷ್ಟೇ ಸಂತಸವಾಗಿದೆ. ಈ ಕಾರಣಕ್ಕೆ ವಿಜಯೋತ್ಸವ ಆಚರಿಸಿದ್ದೇವೆ, ಕೃತಜ್ಞತೆ ಸಲ್ಲಿಸಿದ್ದೇವೆ ಎಂದರು.
ಮುಖ್ಯವಾಗಿ ನೌಕರರ ಭಡ್ತಿ ನೀತಿಯಲ್ಲಿ ಒಳಮೀಸಲಾತಿ ಅನ್ವಯಿಸುವುದಿಲ್ಲವೆಂಬ ಗೊಂದಲದ ಮಾತುಗಳು ಹರಿದಾಡುತ್ತಿವೆ. ಇದನ್ನು ಸರ್ಕಾರ ಸರಿಪಡಿಸಬೇಕು. ಇಲ್ಲದಿದ್ದರೇ ಒಳಮೀಸಲಾತಿ ಅರ್ಥವೇ ಕಳೆದುಕೊಳ್ಳುತ್ತದೆ ಎಂದು ಹೇಳಿದರು.
ಎಕೆ, ಎಡಿ, ಎಎ ಗುಂಪನ್ನು ಎ ಮತ್ತು ಬಿ ಗುಂಪಿಗೆ ಹಂಚಿಕೆ
ಮಾಡಿರುವುದು ಕೂಡ ಬಹಳಷ್ಟು ಗೊಂದಲ ಆಗಿದೆ. ಜೊತೆಗೆ ವಿದ್ಯಾವಂತರು ಕೂಡ ಈ ವಿಷಯದಲ್ಲಿ ಗೊಂದಲದಲ್ಲಿ ಮುಳುಗಿದ್ದಾರೆ. ಮಾದಿಗ ಮತ್ತು ಛಲವಾದಿ ಎರಡು ಗುಂಪಿನಲ್ಲಿ ಜಾತಿ ಗುರುತಿಸಿಕೊಳ್ಳದ ಎಕೆ, ಎಡಿ, ಎಎ ಲಾಭ ಪಡೆಯಲಿದ್ದಾರೆ. ಎನ್ನಲಾಗುತ್ತಿದೆ. ಈ ರೀತಿ ಆಗದ ರೀತಿ ಜಾತಿಗುರುತಿಸಿಕೊಳ್ಳದ 4,74,954 ಮಂದಿ
ವಿವರನ್ನು ಸಾರ್ವನಿಕವಾಗಿ ಪ್ರಕಟಿಸಬೇಕು. ಜೊತೆಗೆ ಅವರು ಮೂಲ ಜಾತಿ ಗುರುತಿಸಿಕೊಂಡು ಎ ಅಥವಾ ಬಿ ಗುಂಪಿನಲ್ಲಿ ಮೀಸಲಾತಿ ಸೌಲಭ್ಯ ಪಡೆಯಬೇಕು. ಈ ಸಂಬಂಧ ಸುತ್ತೋಲೆ ಹೊರಡಿಸಬೇಕೆಂದು ಆಗ್ರಹಿಸಿದರು.
ಪರಿಶಿಷ್ಟ ಜಾತಿಯಲ್ಲಿನ ಆದಿಕರ್ನಾಟಕ, ಆದಿದ್ರಾವಿಡ ವರ್ಗಗಳಿಗೆ ಜಾತಿ ಪ್ರಮಾಣ ಪತ್ರ ನೀಡುವ ಸಂದರ್ಭ ಅವರ ವಂಶವೃಕ್ಷ ಜಾಲಾಟ ನಡೆಸಬೇಕು. ಇಲ್ಲದಿದ್ದರೆ ಮೀಸಲಾತಿಗೆ ಕನ್ನ ಹಾಕುವ ಗ್ಯಾಂಗ್ ತನ್ನ ಕೃತ್ಯವನ್ನು ಮುಂದುವರಿಸಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಈ ಸಂಬಂಧ ಡಿಸಿ, ತಹಸೀಲ್ದಾರ್ ಅವರಿಗೆ ಜಾತಿಪ್ರಮಾಣ ಪತ್ರ ವಿತರಣೆ ವೇಳೆ ವಂಶವೃಕ್ಷದ ಜೊತೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕೆಂದು ಸೂಚಿಸಬೇಕು. ಜೊತೆಗೆ ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳೆಷ್ಟು, ನೇಮಕಾತಿ ಪ್ರಕ್ರಿಯೆಯಲ್ಲಿರುವುದು ಎಷ್ಟೆಂದು ಕೂಲಂಕಷವಾಗಿ ಸಾರ್ವನಿಕವಾಗಿ ಪ್ರಕಟಿಸಬೇಕು ಎಂದು ಆಗ್ರಹಿಸಿದರು.
ನಮಗೆಲ್ಲ ಸಮಾಧಾನವಾಗಿದ್ದರೇ, ಅಲೆಮಾರಿ ಸಮುದಾಯಗಳಿಗೆ ಅನ್ಯಾಯವಾಗಿದೆ. ಇದು ಅತ್ಯಂತ ನೋವಿನ ವಿಷಯ. ಆದ್ದರಿಂದ ಅಲೆಮಾರಿಗಳ ವಿಷಯದಲ್ಲಿ ಲಂಬಾಣಿ, ಭೋವಿ, ಛಲವಾದಿ, ಮಾದಿಗ ಸಮುದಾಯ ತಾಯಿ ಹೃದಯದಲ್ಲಿ ಚಿಂತನೆ ನಡೆಸಬೇಕು. ಅವರಿಗೆ ಮಮಕಾರದ ಜೊತೆಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು. ಅವರಿಗೆ ಶೇ.1 ಮೀಸಲಾತಿ ಕಲ್ಪಿಸಲು ಸರ್ಕಾರ ಬದ್ಧತೆ ಪ್ರದರ್ಶಿಸಬೇಕೆಂದು ಒತ್ತಾಯಿಸಿದರು.
ಅಲೆಮಾರಿಗಳು ಮುಖ್ಯವಾಹಿನಿಗೆ ಬರಲು ವಿಶೇಷ ಪ್ಯಾಕೇಜ್, ನಿಗಮ ಸ್ಥಾಪನೆ, ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ತಕ್ಷಣವೇ ಸರ್ಕಾರ ಮುಂದಾಗಬೇಕು. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದು, ಸ್ಪಂದನೆ ದೊರೆತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಲಿಡ್ಕರ್ ಮಾಜಿ ಅಧ್ಯಕ್ಷ ಓ.ಶಂಕರ್, ವಕೀಲ ರವೀಂದ್ರ, ಕಾಂಗ್ರೆಸ್ ಎಸ್ಟಿ ಘಟಕದ ತಾಲೂಕು ಅಧ್ಯಕ್ಷ ಅನಿಲ್ಕೋಟಿ, ಎಲ್ಐಸಿ ಈರಣ್ಣಯ್ಯ, ದಾದಾಪೀರ್ ಇತರರಿದ್ದರು.


