ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 26 :ಎತ್ತ ನೋಡಿದರೂ ಜನ ಜನಸಾಗರ, ಉಘೇ, ಉಘೇ ಮಾರಮ್ಮ ಎಂಬ ಘೋಷಣೆ, ಕಲ್ಲಿನಕಂಬ ಹತ್ತಿ ದೀಪ ಹಚ್ಚುತ್ತಿದ್ದಂತೆಯೇ ಮುಗಿಲುಮುಟ್ಟಿದ ಭಕ್ತರ ಜಯಘೋಷ. ಈರುಳ್ಳಿ,ಕೋಳಿ, ಶೇಂಗಾ ತೂರಿ ಹರಕೆ ತೀರಿಸಿದ ಭಕ್ತರು. ಇಂತಹ ದೃಶ್ಯ ಕಂಡು ಬಂದಿದ್ದು ಎಲ್ಲಿ ಗೊತ್ತೇ?
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಗಡಿಗ್ರಾಮವಾದ ಗೌರಸಮುದ್ರದ ತುಂಬಲು ಎನ್ನು ಪ್ರದೇಶದಲ್ಲಿ. ಇಂದು ಜರುಗಿದ ಗೌರಸಮುದ್ರಮಾರಮ್ಮದೇವಿ ಜಾತ್ರೆಗೆ ಲಕ್ಷಾಂತರ ಭಕ್ತರು ಸಾಕ್ಷಿಯಾಗಿದರು.
ಪ್ರತಿವರ್ಷ ಶ್ರಾವಣವಾಸದ ಕೊನೆಯ ಅಮವಾಸ್ಯೆ ನಂತರ ಬರುವ ಮಂಗಳವಾರ ನಡೆಸಿಕೊಂಡು ಬರುವ ಮಾರಮ್ಮದೇವಿ ಜಾತ್ರೆಗೆ ಈ ವರ್ಷ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸಿದ್ದರು. ಬೆಳಗಿನ ಜಾವದಿಂದಲೇ ಭಕ್ತರು ಬೇವಿನ ಸೊಪ್ಪು ಹಿಡಿದು ತುಂಬಲು ಕಟ್ಟೆಯನ್ನು ಪ್ರದಕ್ಷಿಣೆ ಹಾಕಿದರು.
ದೇವಸ್ಥಾನದಲ್ಲಿ ಬೆಳಿಗ್ಗೆ 10 ಗಂಟೆ ವೇಳೆಗೆ ಮಹಾಮಂಗಳಾರತಿ ಸಲ್ಲಿಸಿದ ನಂತರ ದೇವಿ ಮೂಲವಿಗ್ರಹವನ್ನು 4 ಕಿ.ಮೀ. ದೂರದ ತುಂಬಲು ಎಂಬಲ್ಲಿಗೆ ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಲು ಚಾಲನೆ ನೀಡಲಾಯಿತು. ದಾರಿಯುದ್ದಕ್ಕೂ ಹರಕೆಹೊತ್ತ ಭಕ್ತರು ಕೋಳಿ, ಮೆಣಸು, ವಿವಿಧ ಧಾನ್ಯ, ಈರುಳ್ಳಿಯನ್ನು ತೂರಿದರು. ಉರುಮೆ, ಚಾಮರ, ತಪ್ಪಡೆ, ಡೊಳ್ಳು ವಾದ್ಯಗಳು ಸೇರಿದಂತೆ ಹತ್ತಾರು ಬುಡಕಟ್ಟು ಸಂಸ್ಕೃತಿಗಳು ಗಮನ ಸೆಳೆದವು.
ಮಾರಮ್ಮ ದೇವಿ ತುಮಲಿಗೆ ಆಗಮಿಸಿದಾಗ ಇಲ್ಲಿ ನೆರೆದಿದ್ದ ಭಕ್ತರು ತಾವು ಬೆಳೆದ ಈರುಳ್ಳಿ,ಶೆಂಗಾ ಹಾಗೂ ಇತರೆ ಧಾನ್ಯ ಕೋಳಿ ಮೇಕೆಮರಿ ತೂರಿ ಹರಕೆ ತಿರುಸುತ್ತಾರೆ.ಭಕ್ತರು ತೂರಿದ ಮೆಣಸು ಆರಿಸಿಕೊಂಡು ಅನೇಕರು ಮನೆಗೆ ತೆಗೆದುಕೊಂಡು ಹೋದರು. ಅದನ್ನು ಬಳಸಿದರೆ ಚರ್ಮವ್ಯಾಧಿ, ರೋಗರುಜಿನ ಬರುವುದಿಲ್ಲ ಎಂಬ ನಂಬಿಕೆಯಿದೆ. ದೇವಿ ತುಂಬಲು ಪ್ರದೇಶ ಪ್ರವೇಶ ಮಾಡುತ್ತಿದ್ದಂತೆಯೇ ಭಕ್ತರ ಜಯಘೋಷ ಮುಗಿಲು ಮುಟ್ಟಿತು. ಜನಸಂದಣಿ ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾಯಿತು. ಆಂಧ್ರಪ್ರದೇಶ, ತೆಲಂಗಾಣ, ದಾವಣಗೆರೆ ,ಬಳ್ಳಾರಿ, ತುಮಕೂರು ವಿವಿಧ ರಾಜ್ಯಗಳಿಂದ ಈ ಜಾತ್ರೆಗೆ ಭಕ್ತರು ಸರತಿ ಸಾಲಿನಲ್ಲಿ ನಿಂತು ತಾಯಿ ಮಾರಮ್ಮ ದರ್ಶನ ಪಡೆದರು.
ವಾಡಿಕೆಯಂತೆ ಸಂಜೆಯಾಗುತ್ತಲೇ ತುಂಬಲಿನಲ್ಲಿ ಯಾರೂ ಉಳಿಯುವಂತಿಲ್ಲ. ಈ ಕಾರಣಕ್ಕೆ ಸಂಜೆ ವೇಳೆಗೆ ಕಾರು ಟಾಟಾ ಏಸು ಟ್ರ್ಯಾಕ್ಟರ್ ಗಾಡಿ ಇತರೆ ವಾಹನದಲ್ಲಿ ಬಂದಂತಹ ಭಕ್ತರು ಹಾಗೂ ವ್ಯಾಪಾರಸ್ಥರು ಜಾಗ ಖಾಲಿ ಮಾಡಿದರು. ಕಳೆದ ವರ್ಷಕ್ಕಿಂತ ಈ ವರ್ಷವೂ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಗ್ರಾಮದಲ್ಲಿ ರಾತ್ರಿ ದೇವಿ ಮೆರವಣಿಗೆ ನಡೆಯಿತು.
ಈ ಜಾತ್ರೆಗೆ ಚಳ್ಳಕೆರೆ ಶಾಸಕರಾದ ಟಿ ರಘುಮೂರ್ತಿ, ಕಾಂಗ್ರೆಸ್ ಮುಖಂಡ ಯೋಗೇಶ್ ಬಾಬು. ಜಿಲ್ಲಾ ಎಸ್ ಪಿ ರಂಜಿತ್ ಕುಮಾರ್ ಬಂಡುರು, ಗ್ರಾಮ ಪಂಚಾಯತಿ ಅಧ್ಯಕ್ಷ ಓಬಣ್ಣ, ಹಾಗೂ ಡಿ ವೈ ಎಸ್ ಪಿ ರಾಜಣ್ಣ ತಹಶೀಲ್ದಾರ್. ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಅಪಾರಭಕ್ತರು ದೇವಿಯ ದರ್ಶನ ಪಡೆದರು..
ಪೋಲಿಸು ಇಲಾಖೆ ವತಿಯಿಂದ ಪ್ರಾಣಿ ಬಲಿ ನಿಷೇಧ ಕುರಿತಂತೆ ಜಾಗೃತಿ ಮೂಡಿಸಲಾಗಿತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಜಾತ್ರೆಯಲ್ಲಿ ಬಾಲ್ಯ ವಿವಾಹ ಪೋಕ್ಸೋ ಕುರಿತಂತೆ ಜಾಗೃತಿ ಮೂಡಿಸಲಾಗಿತ್ತು..
ಸುಮಾರು ಮೂರು ನಾಲ್ಕು ದಿನಗಳಿಂದ ನಡೆದ ಈ ಜಾತ್ರೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು ಜಾತ್ರೆಗೆ ಜಿಲ್ಲಾ ಆಡಳಿತ ತಾಲೂಕು ಆಡಳಿತ ಹಾಗೂ ಗ್ರಾಮ ಪಂಚಾಯಿತಿ ಸೇರಿದಂತೆ ಅಧಿಕಾರಿಗಳು ಸಹಕಾರ ನೀಡಿದ್ದಾರೆ.. ಜಾತ್ರೆ ಯಶಸ್ವಿಯಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಡಗರ ಸಂಭ್ರಮದಿಂದ ಜರುಗಿದೆ. ಜಾತ್ರೆಗೆ ಆಗಮಿಸಿದ ಭಕ್ತರಿಗೆ ಮೂಲ ಸೌಕರ್ಯದ ವ್ಯವಸ್ಥೆ ಕಲ್ಪಿಸಲಾಗಿತ್ತು.. ಜಾತ್ರೆ ಯಶಸ್ವಿಗೆ ಎಲ್ಲರಿಗೂ ಅಭಿನಂದನೆ ತಿಳಿಸುತ್ತೇನೆ ಎಂದು ಗೌರಸಮುದ್ರ ಗ್ರಾಮ ಪಂಚಾಯತಿ ಅಧ್ಯಕ್ಷ ಓಬಣ್ಣ ತಿಳಿಸಿದ್ದಾರೆ.


