ಉಪ ಸಮಿತಿಯ ರಚನೆಗೆ ನಮ್ಮ ಬೆಂಬಲವಿಲ್ಲ : ಮಾದಾರ ಚನ್ನಯ್ಯ ಸ್ವಾಮೀಜಿ

2 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಆ.14 : ಸರ್ಕಾರ ಆಗಸ್ಟ್ 16 ರ ಸಚಿವ ಸಂಪುಟ ಸಭೆಯಲ್ಲಿಯೇ ಈ ಹಂಚಿಕೆಯ ಸೂತ್ರ ಅಂತಿಮಗೊಳಿಸಿ, ಒಳಮೀಸಲಾತಿ ಜಾರಿ ಮಾಡಬೇಕೆಂಬುದು ನಮ್ಮ ಆಗ್ರಹವಾಗಿದ್ದು ಸಚಿವ ಸಂಪುಟ ಉಪ ಸಮಿತಿಯ ರಚನೆಗೆ ನಮ್ಮ ಬೆಂಬಲವಿಲ್ಲ. ಆಯೋಗ ರಚನೆಯೂ ನಮ್ಮ ಬೇಡಿಕೆಯಾಗಿರಲಿಲ್ಲ . ಈಗ ಇನ್ನೊಂದು ಸಮಿತಿ ರಚನೆಗೆ ಒಪ್ಪುವುದು ಸಾಧ್ಯವಿಲ್ಲದ ಮಾತು ಎಂದು ಶಿವ ಶರಣ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮಿಗಳು ತಿಳಿಸಿದ್ದಾರೆ.
ನಗರದ ಹೊರ ವಲಯದ ಶಿವ ಶರಣ ಮಾದಾರ ಚನ್ನಯ್ಯ ಗುರುಪೀಠದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶ್ರೀಗಳು, ನ್ಯಾ ನಾಗಮೋಹನ ದಾಸ್ ಆಯೋಗ ಒಳಮೀಸಲಾತಿಯ ಬಗ್ಗೆ ತಮ್ಮ ಶಿಫಾರಸ್ಸುಗಳನ್ನು ಸಲ್ಲಿಸಿದೆ . ನಮ್ಮ ಸಮುದಾಯಕ್ಕೆ ಆಯೋಗ ಶೇ 6 ರಷ್ಟು ಮೀಸಲಾತಿಯನ್ನು ನಿಗದಿ ಮಾಡಿದೆ. ಸದಾಶಿವ ಆಯೋಗ, ಮಾಧುಸ್ವಾಮಿ ಆಯೋಗವೂ ನಮಗೆ ಶೇ 6ರ ಮೀಸಲಾತಿ ನಿಗದಿ ಪಡಿಸಿತ್ತು . ನಮ್ಮ ಸೋದರ ಸಮಾಜಗಳು ಮಾಧುಸ್ವಾಮಿ ವರದಿಯಲ್ಲಿ ಶೇ 5.5 ಮತ್ತು ಶೇ 4.5 ಪಡೆದಿದ್ದವು . ಈಗ ಅದು ಶೇ 5 ಮತ್ತು ಶೇ 4ಕ್ಕೆ ಕಡಿಮೆಯಾಗಿರುವುದು ವಿವಾದ , ಗೊಂದಲಕ್ಕೆ ಕಾರಣವಾಗಿದೆ . ಕರ್ನಾಟಕ ಸರ್ಕಾರ ಈ ಗೊಂದಲ ಸರಿಪಡಿಸಿ ಮೀಸಲಾತಿ ಹಂಚಿಕೆಯ ಸೂತ್ರ ಸಿದ್ಧಪಡಿಸುವ ಪ್ರಯತ್ನದಲ್ಲಿದೆ ಎಂದರು.

ಈ ಹಿಂದೆ ಒಳಮೀಸಲಾತಿಯೇ ಬೇಡ ಅನ್ನುವವರಿದ್ದರು. ಈಗ ಆ ಗುಂಪು ಕರಗಿಹೋಗಿದೆ. ಈಗ ಇರುವ ಚರ್ಚೆ-ಸಮುದಾಯಗಳಿಗೆ ತಮ್ಮ ಪಾಲು ಪಡೆಯುವುದಾಗಿದೆ. ಶ್ರೀ ಮಠ ಮೊದಲಿನಿಂದಲೂ ಮಾದಿಗ ಮತ್ತದರ ಉಪಜಾತಿಗಳೂ ಸೇರಿದಂತೆ, ಎಲ್ಲ 101ಜಾತಿಗಳ ಹಿತ ಕಾಯಲು ಬಯಸುತ್ತದೆಮಾದಿಗ ಸಮಾಜದ ಕೆಲ ಉಪಜಾತಿಗಳನ್ನು ಅನ್ಯ ಗುಂಪುಗಳಿಗೆ ಸೇರಿಸಿರುವುದರಿಂದ ನಮ್ಮ ಸಂಖ್ಯೆ ಕಡಿಮೆಯಾಗಿದೆ ಎನ್ನುವ ಭಾವನೆಯಿದೆ . ಕೊನೆಯ ಐದನೇ ಗುಂಪಿನಲ್ಲಿರುವ ಆದಿ ಕರ್ನಾಟಕ , ಆದಿ ದ್ರಾವಿಡ, ಆದಿ ಆಂಧ್ರ ಜಾತಿಗಳಲ್ಲೂ ನಮ್ಮ ಸಮುದಾಯದ ಪೌರಕಾರ್ಮಿಕರಿದ್ದಾರೆ. ಹಿಂದುಳಿದಿರುವಿಕೆಯಲ್ಲಿಯೂ ಮಾದಿಗ ಉಪಜಾತಿಗಳು ಸಂತ್ರಸ್ತರಾಗಿದ್ದಾರೆ ಎಂದು ಶ್ರೀಗಳು ತಿಳಿಸಿದರು.

ನಮ್ಮ ಉಪ ಜಾತಿಗಳನ್ನು ನಮ್ಮ ಗುಂಪಿನಲ್ಲಿಯೇ ಇಡಿ. ಆದಿ ದ್ರಾವಿಡ ಎಂದು ಗುರುತಿಸಿಕೊಂಡಿರುವ  ಪೌರಕಾರ್ಮಿಕರನ್ನು ನಮಗೆ ಸೇರಿಸಿ. ಆದರೂ ಹೆಚ್ಚಿನ ಮೀಸಲಾತಿ ಕೇಳದೆ ಮಾದಿಗ ಸಮಾಜ , ಶ್ರೀ ಮಠ ಎಲ್ಲರನ್ನು ಕರೆದೊಯ್ಯುವ ಆಶಯಕ್ಕೆ ಬದ್ಧವಾಗಿದೆ. ಕರಾವಳಿಯ ಭಾಗದಲ್ಲಿ ಮನ್ಸ , ಮೇರಾ ಇತ್ಯಾದಿ ಜಾತಿಗಳು ಎಸ್ಸಿ ಜಾತಿಪಟ್ಟಿಯಲ್ಲಿ ಇಲ್ಲ . ಹೀಗಾಗಿ ಅವರೂ ಅನೇಕ ವರ್ಷಗಳಿಂದ ಆದಿದ್ರಾವಿಡ ಎಂದೇ ಗುರುತಿಸಿ ಕೊಂಡಿದ್ದಾರೆ. ಮಠಾಧೀಶರಾಗಿ ಈ ರೀತಿಯ ತಬ್ಬಲಿ ಜಾತಿಗಳಿಗೂ , ಸಣ್ಣ ಅಲೆಮಾರಿ ಜಾತಿಗಳಿಗೂ  ಧ್ವನಿಯಾ ಗಲು ಶ್ರೀ ಮಠ ಬದ್ಧವಾಗಿದೆ  ಅನಿವಾರ್ಯ ಪರಿಸ್ಥಿತಿಯಲ್ಲಿ ಎಲ್ಲ ಆಯೋಗಗಳು ಒಪ್ಪಿರುವಂತೆ  ನಮ್ಮ ಪಾಲಿನ ಶೇ 6 ರ ಮೀಸಲಾತಿಯನ್ನು ಪ್ರತ್ಯೇಕಿಸಿ ಕೊಡಿ . ಉಳಿದಿದ್ದನ್ನು ಸಮಯಾವಕಾಶ ಪಡೆದು ಬಗೆಹರಿಸಿ ಎಂಬುದು ನಮ್ಮ ಬೇಡಿಕೆಯಾಗಿದೆ ಎಂದ ಶ್ರೀಗಳು ಈ ಹಿನ್ನೆಲೆಯಲ್ಲಿ ನಿನ್ನೆ ಸಮಸ್ತ 101ಜಾತಿಗಳಿಗೆ ನ್ಯಾಯ ಸಿಗಬೇಕೆಂಬ ಆಶಯದಿಂದ ಉಪಮುಖ್ಯ ಮಂತ್ರಿಗಳಾದ ಡಿ ಕೆ ಶಿವಕುಮಾರ ಮತ್ತು ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನ ವರನ್ನು ಭೇಟಿಯಾಗಿ ಚರ್ಚಿಸಲಾಯಿತು. ಇಬ್ಬರೂ ನಾಯಕರು ಸಕಾರಾತ್ಮಕವಾದಿ ಸ್ಪಂದಿಸಿದ್ದಾರೆ ಎಂದು ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮಿಗಳು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks