ಒಳಮೀಸಲಾತಿ ಜಾರಿಗೆ ದಿನಗಣನೆ ಆರಂಭ : ಮಾಜಿ ಸಚಿವ ಎಚ್. ಆಂಜನೇಯ

2 Min Read

 

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್ . 04 : ನ್ಯಾ.ನಾಗಮೋಹನ್ ದಾಸ್ ನೇತೃತ್ವದ ಏಕಸದಸ್ಯತ್ವ ಆಯೋಗ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೋಮವಾರ ವರದಿ ಸಲ್ಲಿಸಿದ್ದು, ಈ ಮೂಲಕ ಒಳಮೀಸಲಾತಿ ಜಾರಿಗೆ ದಿನಗಣನೆ ಆರಂಭವಾಗಿದೆ ಎಂದು ಮಾಜಿ ಸಚಿವ
ಎಚ್.ಆಂಜನೇಯ ತಿಳಿಸಿದರು.

ಬೆಂಗಳೂರಿನ ವಿಧಾನಸೌಧದ ಸಿಎಂ ಕಚೇರಿ ಕೊಠಡಿಯಲ್ಲಿ ವರದಿ ಸಲ್ಲಿಕೆ ಬಳಿಕ ನ್ಯಾ.ನಾಗಮೋಹನ್ ದಾಸ್ ಅವರನ್ನು ಅಭಿನಂದಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ
ಅವರೊಂದಿಗೆ ಚರ್ಚಿಸಿದ ವೇಳೆ ಮಾತನಾಡಿದರು.

ಒಳಮೀಸಲಾತಿ ಜಾರಿಗೆ ಇದ್ದ ಅಡ್ಡಿ ಆತಂಕಗಳನ್ನು ಆಗಸ್ಟ್ 1, 2024ರ ಸುಪ್ರೀಂ ಕೋರ್ಟ್ ತೆರೆ ಎಳೆದಿತ್ತು, ಬಳಿಕ ರಾಜ್ಯದಲ್ಲಿ ಆದಿದ್ರಾವಿಡ, ಆದಿಆಂಧ್ರ, ಆದಿಕರ್ನಾಟಕ ಹೆಸರಲ್ಲಿ ಮಾದಿಗ, ಛಲವಾದಿಗಳು ಗುರುತಿಸಿಕೊಂಡಿದ್ದಕ್ಕೆ ನಾಗಮೋಹನ್ ದಾಸ್
ಆಯೋಗ ಜಾತಿಗಣತಿ ಸಮೀಕ್ಷೆ ಮೂಲಕ ತೆರೆ ಎಳೆದಿದೆ. ಅತ್ಯಂತ ವೈಜ್ಞಾನಿಕವಾಗಿ ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ವಿಳಂಬ ಮಾಡದೆ ಸಲ್ಲಿಸಿರುವುದು ಶ್ಲಾಘನೀಯ ಎಂದರು.

ವರದಿ ಕೈ ಸೇರಿದ 20 ದಿನದೊಳಗೆ ಜಾರಿಗೊಳಿಸುವುದಾಗಿ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಮುಖ್ಯವಾಗಿ ನೀವು ಬೇಡ ಎಂದು ಹೇಳಿದರೂ ನಾವು
ಒಳಮೀಸಲಾತಿ ಜಾರಿಗೊಳಿಸಿಯೇ ಸಿದ್ದ. ಈ ಮೂಲಕ ಎಲ್ಲ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ಕೊಡಲಾಗುವುದೆಂಬ ಸಿದ್ದರಾಮಯ್ಯ ಮಾತು ಪರಿಶಿಷ್ಟ
ಗುಂಪಿನಲ್ಲಿರುವ 101 ಜಾತಿಗಳಲ್ಲಿ ನಂಬಿಕೆ ಹೆಚ್ಚಿಸಿದೆ. ಈಗ ವರದಿ ಸರ್ಕಾರಕ್ಕೆ ಸಲ್ಲಿಕೆ ಆಗಿರುವುದು ಅತ್ಯಂತ ಅತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ತಿಳಿಸಿದರು.

ಈ ತಿಂಗಳಲ್ಲಿಯೇ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರಿಗೊಳಿಸುವ ಮೂಲಕ ಮಾದಿಗ ಸಮುದಾಯದ ಹೋರಾಟಕ್ಕೆ ನ್ಯಾಯ ಕೊಡಲಿದ್ದು, ಜೊತೆಗೆ
ಛಲವಾದಿ, ಭೋವಿ, ಲಂಬಾಣಿ, ಕೊರಚ, ಕೊರಮ, ಅಲೆಮಾರಿ ಸಮುದಾಯಗಳನ್ನು ವೈಜ್ಞಾನಿಕವಾಗಿ ಮುಖ್ಯವಾಹಿನಿಗೆ ತರಲು ಮುನ್ನುಡಿ ಬರೆಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರ್ಕಾರ, ಸಿದ್ದರಾಮಯ್ಯ ಅವರು ಒಳಮೀಸಲಾತಿ ಜಾರಿಯನ್ನೇ ಮಾಡುವುದಿಲ್ಲ, ವರದಿ ಸಲ್ಲಿಸಲು ಇನ್ನೂ ಬಹಳಷ್ಟು ವಿಳಂಬ ಮಾಡಲಾಗುತ್ತದೆ ಎಂಬ ಕೆಲವರ ಆರೋಪಗಳಿಗೆ ಆಯೋಗ ವರದಿ ಸಲ್ಲಿಸುವ ಮೂಲಕ ಪ್ರಥಮ ಉತ್ತರ ನೀಡಿದೆ. ಇನ್ನೂ ಆಗಸ್ಟ್ 7ರ ಸಚಿವ ಸಂಪುಟದಲ್ಲಿ ಚರ್ಚೆ, ಒಪ್ಪಿಗೆ ಬಳಿಕ ಜಾರಿಗೆ ಅಂತಿಮ ತೀರ್ಪು ಬರೆಯಲಾಗುತ್ತದೆ. ಬಳಿಕ ಅಧಿವೇಶನದಲ್ಲಿ ಚರ್ಚೆಗೆ
ಮುಂದಿಟ್ಟು ಜಾರಿಗೆ ಅಧಿಕೃತ ಮುದ್ರೆ ಒತ್ತಲಾಗುತ್ತದೆ. ಈ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹಾಗೂ ಸಿದ್ದರಾಮಯ್ಯನ ಮೇಲೆ ಅನಗತ್ಯ ಆರೋಪ
ಮಾಡುತ್ತಿದ್ದವರ ಬಾಯಿಗೆ ಬೀಗ ಬೀಳಲಿದೆ ಎಂದರು.

ಈ ಮೂಲಕ ಒಳಮೀಸಲಾತಿ ಜಾರಿಗಾಗಿ 35 ವರ್ಷ ಹೋರಾಟ ನಡೆಸಿದ, ಬೆಂಬಲಿಸಿದ ಎಲ್ಲ
ರಾಜಕಾರಣಿಗಳಿಗೂ ಅದರಲ್ಲೂ ಪರಿಶಿಷ್ಟ ಗುಂಪಿನಲ್ಲಿನ ಎಲ್ಲ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ಸುವರ್ಣಾವಕಾಶ ಪಡೆದ ಸಿದ್ದರಾಮಯ್ಯ ಮತ್ತು ಸರ್ಕಾರಕ್ಕೆ ಜಾರಿಯ ಕಿರೀಟ ಸಲ್ಲಲಿದೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks