ಹಿರಿಯೂರು, ಆಗಸ್ಟ್. 03 : ಕಾಂಗ್ರೆಸ್ ಸರ್ಕಾರ ಕೊಟ್ಟ ಯಾವ ಮಾತನ್ನೂ ಕರಾರುವಕ್ಕಾಗಿ ಈಡೇರಿಸಿಲ್ಲ. ಚಿತ್ರದುರ್ಗ ಜಿಲ್ಲೆ ಸಂಪೂರ್ಣ ನೀರಾವರಿ ಪ್ರದೇಶವಾಗಲು ಜೆಡಿಎಸ್ ಅಧಿಕಾರಕ್ಕೆ ಬರಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ತಾಲೂಕಿನ ಹರಿಯಬ್ಬೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಹಾಗೂ ಪಕ್ಷದ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.
ಎರಡು ರಾಷ್ಟ್ರೀಯ ಪಕ್ಷಗಳಿಗಿಂತ ಹೆಚ್ಚಿನ ಕಾರ್ಯಕರ್ತರು ಈ ತಾಲೂಕಿನಲ್ಲಿ ನಮಗಿದ್ದಾರೆ. ಗೊಂದಲ ಮಾಡಿಕೊಳ್ಳದೆ ಕಾರ್ಯಪ್ರವೃತ್ತರಾದರೆ ಇಲ್ಲಿ ನಮ್ಮನ್ನು ತಡೆಯುವುದು ಯಾರಿಂದಲೂ ಆಗುವುದಿಲ್ಲ. ಭದ್ರಾ ಯೋಜನೆ ಮೊದಲ ಹಂತದ ಕಾಮಗಾರಿಗೆ ಚಾಲನೆ ಕೊಟ್ಟದ್ದೇ ಕುಮಾರಸ್ವಾಮಿಯವರು. ಜಿಲ್ಲೆಯ ರೈತರು ಕಷ್ಟಜೀವಿಗಳು ಸ್ವಾಭಿಮಾನಿಗಳಿದ್ದು ಈಗಿನ ಸರ್ಕಾರ ನಿಮಗೇನು ಕೊಟ್ಟಿದೆ ಎಂಬುದನ್ನು ಅವಲೋಕನ ಮಾಡಿಕೊಳ್ಳಿ.ಇಷ್ಟು ಬೇಗ ರಾಜ್ಯದಲ್ಲಿ ಪ್ರವಾಸಗಳನ್ನು ಕೈ ಗೊಂಡಿರುವುದರಲ್ಲಿ ನನ್ನ ಸ್ವಾರ್ಥ ಏನೂ ಇಲ್ಲ. ಪಕ್ಷವನ್ನು ತಳಮಟ್ಟದಿಂದ ಸದೃಢವಾಗಿ ಕಟ್ಟಲು ತಯಾರಿ ನಡೆಸಲಾಗಿದೆ. ಅಲ್ಪ ಅಧಿಕಾರದ ಅವಧಿಯಲ್ಲಿ ಹೆಚ್ಚಿನ ಕಾರ್ಯಕ್ರಮ, ಯೋಜನೆಗಳನ್ನು ಕುಮಾರಸ್ವಾಮಿಯವರು ನೀಡಿದ್ದಾರೆ. ಬಿಜೆಪಿ ವರಿಷ್ಟರ ಆಸೆಯಂತೆ ಕುಮಾರಸ್ವಾಮಿ ಎಂಪಿ ಚುನಾವಣೆಗೆ ಸ್ಪರ್ಧಿಸಿ ಚುನಾವಣೆಯಲ್ಲಿ ಗೆದ್ದು ಮಂತ್ರಿಯಾಗಿದ್ದಾರೆ ಎಂದರು.
ಜೆಡಿಎಸ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ರವೀಂದ್ರಪ್ಪ ಮಾತನಾಡಿ ಪಕ್ಷವನ್ನು ಅಧಿಕಾರಕ್ಕೆ ತರುವ ಹುಮ್ಮಸ್ಸು ಕಾರ್ಯಕರ್ತರಲ್ಲಿದೆ. ನಾವು ನಾಲ್ಕು ಬಾರಿ ಚುನಾವಣೆ ಸೋತಿದ್ದೇವೆ. ಕಾರಣ ಹುಡುಕಬೇಕಿದೆ. ನಮ್ಮಲ್ಲಿ ಇರುವಷ್ಟು ಪ್ರಾಮಾಣಿಕ ಕಾರ್ಯಕರ್ತರು ಬೇರಾವ ಪಕ್ಷದಲ್ಲೂ ಇಲ್ಲ. ಬರುವ ಚುನಾವಣೆಯಲ್ಲಿ ನಾವು ಜೆಡಿಎಸ್ ಪಕ್ಷದ ಶಾಸಕರನ್ನು ನೋಡಲೇಬೇಕು. ಎಲ್ಲಾ ಕಾರ್ಯಕರ್ತರು ಸೈನಿಕರಂತೆ ಕೆಲಸ ಮಾಡಿ ಪಕ್ಷ ಕಟ್ಟಬೇಕು. ನಿಖಿಲ್ ಕುಮಾರಸ್ವಾಮಿಯವರ ಮಾರ್ಗದರ್ಶನದಲ್ಲಿ ಬರಲಿರುವ ಎಲ್ಲಾ ಚುನಾವಣೆ ಎದುರಿಸೋಣ ಎಂದರು.
ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಡಿ ಯಶೋಧರ್, ತಾಲೂಕು ಅಧ್ಯಕ್ಷ ಹನುಮಂತರಾಯಪ್ಪ, ಮಾಜಿ ಶಾಸಕ ತಿಮ್ಮರಾಯಪ್ಪ, ವಕೀಲ ಶಿವಶಂಕರ್ ಮುಂತಾದವರು ಮಾತನಾಡಿದರು.
ಈ ಸಂದರ್ಭದಲ್ಲಿ ವಿಪ ಮಾಜಿ ಸದಸ್ಯ ತಿಪ್ಪೇಸ್ವಾಮಿ,ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ರಶ್ಮಿ ರಾಮೇಗೌಡ, ಮಾಜಿ ಜಿಪಂ ಸದಸ್ಯ ಎಸ್ ಆರ್ ಗೌಡ, ಕಲ್ಲೇ ರುದ್ರೇಶ್,ಕನ್ಯಾಕುಮಾರಿ, ಬಸವರಾಜ್, ಜೆಜೆ ಹಳ್ಳಿ ಮಂಜಣ್ಣ, ಶಂಕರಮೂರ್ತಿ, ಉಗ್ರೇಶ್,ಸಿ ನಾಗರಾಜಪ್ಪ, ಶಿರಾ ಜೆಡಿಎಸ್ ಅಧ್ಯಕ್ಷ ಸತ್ಯಪ್ರಕಾಶ್ ಮುಂತಾದವರು ಹಾಜರಿದ್ದರು.


