ಮೊಬೈಲ್ ಎಲ್ಲರ ಮನಸ್ಸನ್ನು ಕದಡುತ್ತಿದೆ : ಬಿ.ಟಿ.ಕುಮಾರಸ್ವಾಮಿ

2 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜುಲೈ. 27 : ಮೊಬೈಲ್ ಯುಗದಲ್ಲಿ ಸಾಹಿತ್ಯವೆಂದರೆ ಮೂಗು ಮುರಿಯುವಂತಾಗಿರುವುದರಿಂದ ಸಾಹಿತ್ಯ ಎನ್ನುವುದು ಸವಾಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಚಿತ್ರದುರ್ಗ-ದಾವಣಗೆರೆ-ಚಿಕ್ಕಮಗಳೂರು ಜಿಲ್ಲೆಗಳ ಸಂಯುಕ್ತಾಶ್ರಯದಲ್ಲಿ ಪಿಳ್ಳೆಕೆರನಹಳ್ಳಿಯಲ್ಲಿರುವ ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ನಡೆದ ಮಧ್ಯ ಕರ್ನಾಟಕ-ಕಾವ್ಯ ಸಂಭ್ರಮ ಉದ್ಗಾಟಿಸಿ ಮಾತನಾಡಿದರು.

ಬರೆಯುವವರು ತುಂಬಾ ಇದ್ದಾರೆ. ಆದರೆ ಓದುವವರು ವಿರಳವಾಗಿರುವುದರಿಂದ ಅಧ್ಯಯನ, ಸೃಜನಶೀಲತೆ ಕೊರತೆಯಿದೆ. ವಿಶ್ವವಿದ್ಯಾನಿಲಯಗಳಲ್ಲಿ ಎಂ.ಎ.ಓದುವ ವಿದ್ಯಾರ್ಥಿಗಳು ಕಡಿಮೆಯಾಗುತ್ತಿದ್ದಾರೆ. ಸಾಹಿತ್ಯ ಬದುಕು ಕಟ್ಟಿಕೊಡಬೇಕು. ವಚನ ಸಾಹಿತ್ಯ ಪ್ರಸ್ತುತವೆನಿಸುತ್ತದೆ. ಪ್ರತಿಯೊಬ್ಬರಲ್ಲಿಯೂ ಕವಿ ಹೃದಯವಿರುತ್ತದೆ. ಕವನ ಸಮಾಜಕ್ಕೆ ಸಂದೇಶ ಕೊಡುವಂತಿರಬೇಕೆಂದು ತಿಳಿಸಿದರು.
ಕಾಲ್ಪನಿಕ ಜಗತ್ತು ಹೋಗಿ ಲೌಕಿಕ ಜಗತ್ತಿನಲ್ಲಿದ್ದೇವೆ. ಸಾಹಿತ್ಯದ ಮೇಲೆ ಬೆಳಕು ಚೆಲ್ಲುವ ಗಟ್ಟಿ ಬರಹಗಳು ಬೇಕಾಗಿದೆ. ಮೊಬೈಲ್ ಎಲ್ಲರ ಮನಸ್ಸನ್ನು ಕದಡುತ್ತಿದೆ. ಪುಸ್ತಕ ಓದುವ ಆಸ್ವಾದಿಸುವವರು ಜಾಸ್ತಿಯಾಗಬೇಕು. ಸೃಜನಶೀಲತೆಯಿಂದ ಮಾನವೀಯ ಮೌಲ್ಯಕ್ಕೆ ಸ್ಪರ್ಶ ಬರುತ್ತದೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಮಾತನಾಡಿ ಇಂತಹ ಕಾರ್ಯಕ್ರಮಗಳಿಂದ ಗಡಿಗಳ ನಡುವೆ ಇರುವ ಭಾಷಾ ಸಮಸ್ಯೆಗಳು ನಿವಾರಣೆಯಾಗುತ್ತವೆ. ಸಾಹಿತ್ಯವನ್ನು ಗಟ್ಟಿಗೊಳಿಸಬೇಕಿದೆ. ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಗಳ ಕವಿಗಳು ಒಂದೆಡೆ ಸೇರಿರುವುದು ನಿಜಕ್ಕೂ ಅರ್ಥಪೂರ್ಣ ಎಂದು ಗುಣಗಾನ ಮಾಡಿದರು.
ಕಾವ್ಯ ಸಂಭ್ರಮ-ಕವಿಗೋಷ್ಟಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ.ಕರಿಯಪ್ಪ ಮಾಳಿಗೆ ಕವಿಗಳಿಗೆ ಸಮಕಾಲೀನ ಪ್ರಜ್ಞೆ ಅಗತ್ಯ. ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಿಕೊಂಡು ಪರಿಣಾಮಕಾರಿಯಾಗಿ ಕಾವ್ಯ ಕಟ್ಟಬೇಕು. ಕವಿತೆ ವಿಷಯವನ್ನು ಹೇಳದೆ ಸೂಚಕವಾಗಿ ಧ್ವನಿಪೂರ್ಣವಾಗಿ ಕಟ್ಟಿದಾಗ ಸಾರ್ಥಕ ರಚನೆಯಾಗುತ್ತದೆ. ಪ್ರಸ್ತುತ ಸಂವಿಧಾನದ ಆಶಯಗಳ ನೆಲೆಯಲ್ಲಿ ಕಾವ್ಯವನ್ನು ಕಟ್ಟಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕಿದೆ ಎಂದರು.
ಸಹಭಾಳ್ವೆ, ಸೌಹಾರ್ಧತೆ, ಸಾಮರಸ್ಯ, ಮಾನವೀಯ ಮೌಲ್ಯಗಳ ಮೂಲಕ ಸಾಮಾಜಿಕ ನ್ಯಾಯದ ಅಡಿಯಲ್ಲಿ ಸಾಹಿತ್ಯ ರೂಪಿಸುವುದು ಬರಹಗಾರರ ಮೇಲಿರುವ ಬಹು ದೊಡ್ಡ ಜವಾಬ್ದಾರಿ. ಭಾಷೆ, ಪರಿಸರ, ಸಂಸ್ಕøತಿ, ಬದುಕಿನ ಸ್ಥಿತ್ಯಂತರ ಆಧುನಿಕತೆ ಮೊದಲಾದ ವಿಷಯಗಳ ಜೊತೆ ವೈಚಾರಿಕ ಚಿಂತನೆ ಅತಿ ಮುಖ್ಯ ಎಂದು ಹೇಳಿದರು.

ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ವಾಮದೇವಪ್ಪ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಅರ್ಥ ಪೂರ್ಣವಾಗಿ ಮುನ್ನಡೆಯುತ್ತಿದೆ. ಐತಿಹಾಸಿಕ ಚಿತ್ರದುರ್ಗ ಜಿಲ್ಲೆ ಬರದ ನಾಡಾಗಿರಬಹುದು. ಆದರೆ ಸಾಹಿತ್ಯ ಸಂಸ್ಕøತಿಯಲ್ಲಿ ಅತ್ಯಂತ ಶ್ರೀಮಂತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶರಣ ಸಾಹಿತ್ಯ ಪರಿಷತ್ತು ರಾಜ್ಯ ಉಪಾಧ್ಯಕ್ಷ ಕೆ.ಎಂ.ವೀರೇಶ್, ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸೂರಿ ಶ್ರೀನಿವಾಸ್, ಚಿಕ್ಕಮಗಳೂರು ಐ.ಡಿ.ಎಸ್.ಜಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಪುಷ್ಪ ಭಾರತಿ ಇವರುಗಳು ವೇದಿಕೆಯಲ್ಲಿದ್ದರು. ಸುನಿತಾ ಕಿರಣ್ ಪ್ರಾರ್ಥಿಸಿದರು. ಶ್ರೀನಿವಾಸ್ ಮಳಲಿ ಸ್ವಾಗತಿಸಿದರು. ಸಿ.ಲೋಕೇಶ ನಿರೂಪಿಸಿದರು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks