ಸುದ್ದಿಒನ್, ಚಳ್ಳಕೆರೆ, ಜುಲೈ. 25 : ರಾಜ್ಯ ಸಂಶೋಧನಾ ಮತ್ತು ತರಬೇತಿ ಇಲಾಖೆ ಬೆಂಗಳೂರು ವತಿಯಿಂದ ಆನಲೈನ್ ವಿಧಾನದ ಮೂಲಕ ಆಯೋಜನೆ ಮಾಡಲಾಗಿದ್ದ ರಾಜ್ಯ ಮಟ್ಟದ ಸ್ತರೀಯ ಬಾಲ ವೈಜ್ಞಾನಿಕ ಪ್ರದರ್ಶಿನಿ ಕಾರ್ಯಕ್ರಮದಲ್ಲಿ ತಾಲ್ಲೂಕಿನ ರೇಖಲಗೆರೆ ಲಂಬಾಣಿ ಹಟ್ಟಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಎನ್. ಪಲ್ಲವಿ ಪ್ರಥಮ ಸ್ಥಾನ ಪಡೆದು ವಲಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ತ್ಯಾಜ್ಯ ನಿರ್ವಹಣೆ ಎಂಬ ವಿಷಯದಲ್ಲಿ ಪ್ಲಾಸ್ಟಿಕ್ ಕವರ್ ಗಳಿಂದ ಜೆಲ್ಲಿ ಕಲ್ಲು ತಯಾರಿಕೆ ಮಾದರಿಯನ್ನು ವಿನೂತನ ವಿಧಾನದಲ್ಲಿ ತಯಾರಿಸಿ ಪ್ಲಾಸ್ಟಿಕ್ ಪರಿಸರಕ್ಕೆ ಮಾಲಿನ್ಯಕಾರಕ ವಾಗದಂತೆ ಅದನ್ನು ಜೆಲ್ಲಿಕಲ್ಲಾಗಿ ನಿರ್ಮಾಣ ಮಾಡಿ ಮರುಬಳಕೆ ಮಾಡುವ ವಿಧಾನವನ್ನು ಪ್ರಾಯೋಗಿಕವಾಗಿ ಸಾಬೀತು ಮಾಡಿ ತೋರಿಸಿದ ಮಾದರಿ ಇದಾಗಿದೆ.ಪ್ಲಾಸ್ಟಿಕ್ ಜೆಲ್ಲಿಕಲ್ ಅನ್ನು ಸಿಮೆಂಟ್ ಕಾಂಕ್ರಿಟ್ ತಯಾರಿಕೆಯಲ್ಲಿ ಉಪಯೋಗಿಸಿ ಕಟ್ಟಡ, ರಸ್ತೆ ನಿರ್ಮಾಣದಲ್ಲಿ ಬಳಸಬಹುದಾಗಿದೆ. ರಾಜ್ಯ ಪ್ರಶಸ್ತಿ ಪುರಸ್ಕೃತ ವಿಜ್ಞಾನ ಶಿಕ್ಷಕ ನಾಗಭೂಷಣ್ ಮಾರ್ಗದರ್ಶನ ಮಾಡಿದ್ದಾರೆ.
ವಿದ್ಯಾರ್ಥಿನಿಯ ಈ ಸಾಧನೆಗೆ ಜಿಲ್ಲೆಯ ಉಪನಿರ್ದೇಶಕರಾದ ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆ.ಎಸ್ ಸುರೇಶ್, ಶಾಲೆಯ ಮುಖ್ಯ ಶಿಕ್ಷಕ ವೆಂಕಟೇಶ್, ಎಸ್.ಡಿ. ಎಂ.ಸಿ ಅಧ್ಯಕರಾದ ಕಾಟಯ್ಯ, ಶಾಲಾ ಸಿಬ್ಬಂದಿ ಹಾಗೂ ಊರಿನ ಗ್ರಾಮಸ್ಥರು, ಅಭಿನಂದಿಸಿದ್ದಾರೆ.









