ಬೆಂಗಳೂರು: ಅಭಿನಯ ಸರಸ್ವತಿ ಬಿ.ಸರೋಜಾದೇವಿ ಇಂದು ಎಲ್ಲರನ್ನು ಬಿಟ್ಟು ಅಗಲಿದ್ದಾರೆ. ಬಹುಭಾಷಾ ನಟಿ ಸಾವಿಗೆ ಇಡೀ ಚಿತ್ರರಂಗವೇ ಕಂಬನಿ ಮಿಡಿದಿದೆ. ಚಿತ್ರರಂಗದ ನಟ-ನಟಿಯರು, ಹಿರಿಯರು, ಕಿರಿಯರೆಲ್ಲ ಸರೋಜಾ ದೇವಿ ಅವರ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಕೋರುತ್ತಿದ್ದಾರೆ. ಅವರ ಮಗ ಗೌತಮ್ ತಾಯಿಯ ಅಂತ್ಯಕ್ರಿಯೆಯ ಬಗ್ಗೆ ಮಾಹಿತಿಯನ್ನ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಗೌತಮ್, ಇಂದು ಬೆಳಗ್ಗೆ 8.30 ಗಂಟೆಗೆ ತಾಯಿ ಕೊನೆಯುಸಿರೆಳೆದರು. ನಾಳೆ 11.30ಕ್ಕೆ ಇಲ್ಲಿಂದ ಹೊರಡುತ್ತೇವೆ. ಚನ್ನಪಟ್ಟಣ ತಾಲೂಕು ರಾಮನಗರ ಜಿಲ್ಲೆಯ ಕಣ್ವ ಡ್ಯಾಮಿನಿ ಪಕ್ಕದಲ್ಲೇ ದಶಾವರದಲ್ಲಿ ಅಂತ್ಯಸಂಸ್ಕಾರ ಮಾಡಬೇಕೆಂದು ತೀರ್ಮಾನ ಮಾಡಿದ್ದೇವೆ. ಒಕ್ಕಲಿಗ ಸಂಪ್ರದಾಯದಂತೆ ಎಲ್ಲಾ ವಿಧಿ ವಿಧಾನಗಳು ನೆರವೇರುತ್ತವೆ ಎಂದಿದ್ದಾರೆ.
ಇನ್ನು ಮಗಳು ವಿದೇಶದಲ್ಲಿದ್ದು, ನಾಳೆ ಬರಲಿದ್ದಾರೆ. ಮಗಳು ಬಂದ ಮೇಲೆ ಸರೋಜಾ ದೇವಿ ಅವರ ಅಂತ್ಯಸಂಸ್ಕಾರ ನಡೆಯಲಿದೆ. ಸರೋಜಾ ದೇವಿ ಅವರು ಕನ್ನಡ ಮಾತ್ರವಲ್ಲ ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲೂ ನಟಿಸಿದ್ದರು. 1938ರ ಜನವರಿ 7ರಂದು ಬೆಂಗಳೂರಿನಲ್ಲಿ ಜನಿಸಿದರು. ಅಂದಿನ ಕಾಲದಲ್ಲೇ ಮೊದಲ ಲೇಡಿ ಸೂಪರ್ ಸ್ಟಾರ್ ಆಗಿದ್ದವರು. 1962ರಲ್ಲಿ ಪ್ರಸಾರವಾದ ಕಿತ್ತೂರು ರಾಣಿ ಚನ್ನಮ್ಮ ಸಿನಿಮಾದಲ್ಲಿ ಬಿ ಸರೋಜಾ ದೇವಿ ನಟಿಸಿದ್ದರು. ಇಂದು ಎಲ್ಲರನ್ನ ಬಿಟ್ಟು ಅಗಲಿದ್ದಾರೆ. ಸರೋಜಾ ದೇವಿ ಅವರೊಂದಿಗೆ ಕಳೆದ ನೆನಪುಗಳನ್ನು ಮೆಲುಕು ಹಾಕುತ್ತಿದ್ದಾರೆ. ಇಂಡಸ್ಟ್ರಿ ಲಯ ಕಲಾವಿದರನ್ನೆಲ್ಲ ಒಟ್ಟುಗೂಡಿಸುತ್ತಿದ್ದವರು ಸರೋಜಾ ದೇವಿ. ಆಗಾಗ ಮನೆಗೆ ಕರೆಸಿ, ಎಲ್ಲರಲ್ಲೂ ಆತ್ಮೀಯ ಒಡನಾಟವನ್ನ ಹೊಂದಿದ್ದವರು. ಹೀಗಾಗಿ ಎಲ್ಲರಲ್ಲೂ ಆ ದುಃಖ ಮಡುಗಟ್ಟಿದೆ.


