ಸುದ್ದಿಒನ್, ಚಿತ್ರದುರ್ಗ, ಜುಲೈ. 07 : ಸಿರಿಗೆರೆಯ ತರಳಬಾಳು ಬೃನ್ಮಠದಲ್ಲಿ ನವಂಬರ್ ತಿಂಗಳಲ್ಲಿ ರಾಜ್ಯಮಟ್ಟದ ನುಡಿಹಬ್ಬ ಆಯೋಜಿಸಲು ತರಳಬಾಳು ಶಿವಮೂರ್ತಿ ಸ್ವಾಮೀಜಿ ಒಪ್ಪಿಗೆ ಸೂಚಿಸಿದ್ದಾರೆ. ಸೋಮವಾರ ಮಧ್ಯಕರ್ನಾಟಕ ಮೂರು ಜಿಲ್ಲೆಗಳ ಕಸಾಪ ಅಧ್ಯಕ್ಷರುಗಳು ಸ್ವಾಮೀಜಿಯವರನ್ನು ಭೇಟಿ ಮಾಡಿ ಇದರ ಬಗ್ಗೆ ಶ್ರೀಗಳ ಜೊತೆ ಚರ್ಚೆ ನಡೆಸಿದರು.
ಚಿತ್ರದುರ್ಗ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ಮಾತನಾಡಿ, ಸಿರಿಗೆರೆ ಮಠದ ಆಶ್ರಯದಲ್ಲಿ ನಿರಂತರವಾಗಿ ಶೈಕ್ಷಣಿಕ,ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ಜರುಗುತ್ತಿವೆ. ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ಪ್ರತಿವರ್ಷ ತರಳಬಾಳು ನುಡಿಹಬ್ಬ ವನ್ನು ನವಂಬರ್ ನಲ್ಲಿ ಆಚರಿಸಲಾಗುತ್ತದೆ. ಈ ಬಾರಿ ಒಂದಷ್ಟು ವಿಭಿನ್ನವಾಗಿ ಆಚರಿಸಲು ಮಠದ ವತಿಯಿಂದ ಅವಕಾಶ ನೀಡಬೇಕೆಂದು ವಿನಂತಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶ್ರೀಗಳು ನುಡಿ ಹಬ್ಬದಲ್ಲಿ ಅರ್ಥಪೂರ್ಣ ಚರ್ಚೆ ಮತ್ತು ಕವಿಗೋಷ್ಠಿಗಳು ಆಯೋಜಿಸಬೇಕು. ಮಧ್ಯಕರ್ನಾಟಕಕ್ಕೆ ಬದಲಾಗಿ ರಾಜ್ಯಮಟ್ಟದಲ್ಲಿ ನುಡಿಹಬ್ಬ ಆಯೋಜಿಸಿ. ಈ ಬಾರಿ ಶಾಂತಿವನದಲ್ಲಿ ವಿಶೇಷ ಕವಿಗೋಷ್ಠಿಯನ್ನು ಆಯೋಜಿಸಿ. ಈ ಬಗ್ಗೆ ರಾಜ್ಯದ ಪ್ರಮುಖ ಸಾಹಿತಿಗಳು ಮತ್ತು ಕವಿಗಳನ್ನು ಆಹ್ವಾನಿಸಿ ಎಂದರು.
ಚಿಕ್ಕಮಗಳೂರು ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಮಧ್ಯಕರ್ನಾಟಕದ ಜಿಲ್ಲೆಗಳಾದ ಚಿತ್ರದುರ್ಗ, ದಾವಣಗೆರೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಸಾಹಿತಿಗಳು, ಕವಿಗಳನ್ನು ಈ ನುಡಿಹಬ್ಬದಲ್ಲಿ ವಿಶೇಷವಾಗಿ ಆಹ್ವಾನಿಸಲಾಗುವುದು ಎಂದರು.
ದಾವಣಗೆರೆ ಕಸಾಪ ಜಿಲ್ಲಾಧ್ಯಕ್ಷ ವಾಮದೇವಪ್ಪ ಮಾತನಾಡಿ, ಸಿರಿಗೆರೆ ಮಠದ ವತಿಯಿಂದ ತರಳಬಾಳು ನುಡಿಹಬ್ಬವನ್ನು ಪ್ರತಿವರ್ಷ ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ಈ ಬಾರಿ ಮೂರು ಜಿಲ್ಲೆಗಳ ವತಿಯಿಂದ ಜು. 27 ರಂದು ಅಂತರ ಜಿಲ್ಲಾ ಕವಿಗೋಷ್ಠಿ ಏರ್ಪಡಿಸಲಾಗುವುದು ಎಂದರು. ಕಸಾಪ ಜಿಲ್ಲಾ ಕಾರ್ಯದರ್ಶಿ ಮಳಲಿ ಶ್ರೀನಿವಾಸ್, ಮತ್ತಿತರರಿದ್ದರು.



