ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ಸಾವಿರಾರು ಕೋಟಿ ಆಸ್ತಿ‌ ಕಬಳಿಸಲು ಹೊರಟವರಿಗೆ ಅರಣ್ಯ ಇಲಾಖೆ ಶಾಕ್..!

ತುಮಕೂರು: ಎಷ್ಟೋ ಕಡೆ ಅರಣ್ಯ ಇಲಾಖೆಗೆ ಸಂಬಂಧಿಸಿದ ಜಮೀನನ್ನು ಗುಳುಂ ಮಾಡಿರುವ ಘಟನೆಗಳು ಬೆಳಕಿಗೆ ಬಂದಿದೆ. ಆದರೆ ತುಮಕೂರಿನಲ್ಲಿ ಅದಕ್ಕೆ ಅವಕಾಶ ನೀಡಿಲ್ಲ. ಅರಣ್ಯ ಇಲಾಖೆ ಎಚ್ಚೆತ್ತುಕೊಂಡ ಕಾರಣ ಸಾವಿರಾರು ಕೋಟಿ ಅರಣ್ಯ ಇಲಾಖೆಯ ಭೂಮಿ ಉಳಿದಿದೆ. ಅರಣ್ಯ ಭೂಮಿ ಅಕ್ರಮ ಒತ್ತುವರಿ ಕುರಿತು ಖುದ್ದು ರಾಜ್ಯ ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಅವರೇ ಮಾಹಿತಿ ನೀಡಿದ್ದಾರೆ.

ಇಂದು 300 ಎಕರೆ ಅರಣ್ಯ ಭೂಮಿ ಉಳಿವು ಬುಕ್ಕಾಪಟ್ಟಣ ವನ್ಯ ಜೀವಿಧಾಮದಲ್ಲಿ ಯಶಸ್ವಿ ತೆರವು ಕಾರ್ಯಾಚರಣೆಯನ್ನ ಮಾಡಲಾಗಿದೆ. ತುಮಕೂರು ಜಿಲ್ಲೆಯ ತಿಪಟೂರು ಉಪ ವಿಭಾವದ ಬುಕ್ಕಾಪಟ್ಟಣ ಚಿಂಕಾರಾ ವನ್ಯಜೀವಿಧಾಮ ವ್ಯಾಪ್ತಿಯ ಮುತ್ತಿಗದಹಳ್ಳಿ ಮೀಸಲು ಅರಣ್ಯದಲ್ಲಿ ಇಂದು 300 ಎಕರೆ ಅರಣ್ಯ ಭೂಮಿಯನ್ನು ಅಕ್ರಮ ಒತ್ತುವರಿಯಿಂದ ಮುಕ್ತಗೊಳಿಸಲಾಗಿದೆ. ಅಧಿಕಾರಿಗಳು ಹಾಗೂ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಅಕ್ರಮದ ವಿರುದ್ಧ ಸಮರ ಸಾರಲಾಗಿದೆ. ಈ ಭೂಮಿಯು ಮೈಸೂರು ಮಹಾರಾಜರಿಂದ 1926ರಲ್ಲಿ ಅರಣ್ಯ ಇಲಾಖೆಗೆ ನೀಡಲಾಗಿತ್ತು. ಆದರೆ ಈ ಭೂಮಿಯನ್ನ ಕೆಲವು ಮಂದಿ ಅಕ್ರಮವಾಗಿ ಮಂಜೂರು ಮಾಡಿಕೊಂಡು, ಒತ್ತುವರಿ ಮಾಡಿಕೊಂಡಿದ್ದರು. ಪ್ರಕರಣ ರಾಜ್ಯ ಹೈಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಈ ಭೂಮಿ ಅರಣ್ಯ ಇಲಾಖೆಯ ಹೆಸರಿಗೆ ನೋಂದಾಯಿತವಾಗಿದೆ.

ಹಾಸನ – ತುಮಕೂರು ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ, ಪೊಲೀಸ್ ಇಲಾಖೆಯ ಬೆಂಬಲದಿಂದ ಭೂಮಿಯನ್ನು ತೆರವುಗೊಳಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದು ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks