ಸುದ್ದಿಒನ್, ಹಿರಿಯೂರು, ಜೂನ್. 28 : ತಾಲ್ಲೂಕಿನ ಜವನಗೊಂಡನಹಳ್ಳಿಯಲ್ಲಿ ಹೋಬಳಿ ಗ್ರಾಮಗಳ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸಭೆ ನಡೆಸಿದರು.
ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆಟಿ. ತಿಪ್ಪೇಸ್ವಾಮಿ ಮಾತನಾಡಿ ಕಲ್ಲುವಳ್ಳಿ ಭಾಗದಲ್ಲಿ ನೀರಿಲ್ಲದೆ ರೈತರ ಬದುಕು ಚಿಂತಾಜನಕವಾಗಿದೆ. ಇತ್ತ ಮಳೆ ಬಾರದೇ ಇರುವುದರಿಂದ ರೈತರ ಅಡಿಕೆ, ಬಾಳೆ, ತೆಂಗಿನ ತೋಟಗಳು ಒಣಗಿ ಹೋಗುತ್ತಿವೆ. ಜೊತೆಗೆ ಕುಡಿಯಲು ನೀರು ಇಲ್ಲದೆ ಜಾನುವಾರುಗಳಿಗೆ ತೀವ್ರತರವಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ನೀರಿಗಾಗಿ ಆಗ್ರಹಿಸಿ 255 ದಿನ ರೈತರು ಅನೇಕ ಚಳುವಳಿಗಳ ಮೂಲಕ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಕೈಗೊಂಡರೂ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗದಿದ್ದಕ್ಕೆ, ನಗರದ ತಾಲೂಕು ಕಚೇರಿ ಮುಂಭಾಗದಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಯಿತು. ಈ ಸಂದರ್ಭದಲ್ಲಿ ಸರ್ಕಾರದ ಪರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಅವರು ಸ್ಥಳಕ್ಕೆ ಭೇಟಿ ನೀಡಿ ಮೂರು ತಿಂಗಳ ಒಳಗಾಗಿ ಸರ್ಕಾರದಿಂದ ಹಣ ಬಿಡುಗಡೆ ಮಾಡಿಸಿ ಕಾಮಗಾರಿ ಶುರು ಮಾಡುತ್ತವೆ ಅವಶ್ಯಕತೆ ಇದ್ದಲ್ಲಿ ನಿಮ್ಮ ನಿಯೋಗವನ್ನು ಕರೆದುಕೊಂಡು ಸರ್ಕಾರದೊಂದಿಗೆ ಸಭೆ ನಡೆಸುತ್ತೇನೆ ನನ್ನ ಮಾತಿನ ಮೇಲೆ ಭರವಸೆ ಇಟ್ಟು ಉಪವಾಸ ಸತ್ಯಾಗ್ರಹ ಕೈ ಬಿಡಿ ಎಂದು ಮನವಿ ಮಾಡಿದರು ಅವರ ಮಾತಿಗೆ ಸ್ಪಂದಿಸಿ ಧರಣಿ ಉಪವಾಸ ಸತ್ಯಾಗ್ರಹಣ ಹಿಂತೆಗೆದುಕೊಳ್ಳಲಾಯಿತು. ಸಣ್ಣ ನೀರಾವರಿ ಇಲಾಖೆಯಿಂದ ಹಣ ಬಿಡುಗಡೆಗೆ ಕಳೆದ ಬಜೆಟ್ ನಲ್ಲಿ ಕಾಯ್ದಿರಿಸಲಾಗಿದೆ. ಆದರೆ ವಾಣಿ ವಿಲಾಸ ಜಲಾಶಯದಿಂದ ನೀರಿನ ಹಂಚಿಕೆ ಆಗದಿರುವುದರಿಂದ ಮತ್ತೆ ಕಾಮಗಾರಿ ನೆನೆಗುದಿಗೆ ಬಿಳುವಂತಾಗಿದೆ. ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ನೀರಿನ ಹಂಚಿಕೆ ಮಾಡಿಸಿ ಕಾಮಗಾರಿ ಆರಂಭ ಮಾಡಬೇಕು ಇಲ್ಲದಿದ್ದರೆ ಜೂಲೈ 7ರಂದು ಮತ್ತೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಕೆಟಿ ತಿಪ್ಪೇಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಆಲೂರು ಸಿದ್ದರಾಮಣ್ಣ, ಜೆಜಿ ಹಳ್ಳಿ ಹೋಬಳಿ ಅಧ್ಯಕ್ಷ ಈರಣ್ಣ ಇತರರು ಮಾತನಾಡಿದರು. ಈ ಸಂದರ್ಭದಲ್ಲಿ ಎಂಆರ್. ಈರಣ್ಣ, ಕೆಆರ್. ಹಳ್ಳಿ ರಾಜಪ್ಪ, ರಾಜು ಕುಮಾರ, ಚಂದ್ರಪ್ಪ, ತಿಮ್ಮಣ್ಣ, ತಿಪ್ಪೇಸ್ವಾಮಿ, ಮಹಾಲಿಂಗಪ್ಪ, ಜಯರಾಮಣ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.




