ಬೆಂಗಳೂರು: ರಾಜ್ಯದಲ್ಲಿ ಆರಿದ್ರ ಮಳೆ ಆರಂಭವಾಗಿದೆ. ಆರಂಭದಲ್ಲಿಯೇ ಬಾರೀ ಅನಾಹುತವನ್ನು ಸೃಷ್ಟಿ ಮಾಡಿದೆ. ಅದರಲ್ಲೂ ಪಶ್ಚಿಮಘಟ್ಟದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದೆ. ಇದರಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಬೆಳಗಾವಿ, ಚಿಕ್ಕಮಗಳೂರು, ಕಾರವಾರ, ಉಡುಪಿ, ಮಂಗಳೂರು, ಕೊಡಗು ಜಿಲ್ಕೆಯಲ್ಲಿ ಅವಾಂತರ ಸೃಷ್ಟಿ ಮಾಡಿದೆ. ಕೊಡಗು ಜಿಲ್ಲೆಯಲ್ಲಿ ಮಳೆಯಿಂದಾಗಿ ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಶಿವಮೊಗ್ಗದ ಹೊಸನಗರ ತಾಲೂಕಿನಲ್ಲೂ ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಬಳ್ಳಾರಿಯ ತುಂಗಾ ಭದ್ರಾ ಡ್ಯಾಂಗೆ ಸಾಕಷ್ಟು ನೀರು ಹರಿದು ಬರುತ್ತಿದೆ. ಸುಮಾರು 105 ಟಿಎಂಸಿ ನೀರಿನ ಸಂಗ್ರಹದ ಸಾಮರ್ಥ್ಯ ಹೊಂದಿರುವ ತುಂಗಾ ಭದ್ರಾ ಡ್ಯಾಂ ಈಗಾಗಲೇ 50 ಟಿಎಂಸಿಗಿಂತ ಹೆಚ್ಚಿನ ನೀರು ಸಂಗ್ರಹವಾಗಿದೆ. ಸಮುದ್ರದ ಅಲೆಗಳ ರೀತಿಯಲ್ಲಿ ಈಗ ತುಂಗಾ ಭದ್ರಾ ಡ್ಯಾಂನ ದೃಶ್ಯ ವೈಭವ ಕಾಣಿಸ್ತಾ ಇದೆ. ಸಾಕಷ್ಟು ಪ್ರವಾಸಿಗರು ಈಗಾಗಲೇ ಡ್ಯಾಂನಲ್ಲಿ ಹರಿಯುತ್ತಿರುವ ನೀರು ನೋಡಲು ನೆರೆದಿದ್ದಾರೆ. ಸುತ್ತಮುತ್ತ ಅಂದ್ರೆ ಬಳ್ಳಾರಿ, ಕೊಪ್ಪಳ, ರಾಯಚೂರು, ವಿಜಯನಗರ ಭಾಗದ ಜಮೀನುಗಳಿಗೆ ಇಲ್ಲಿಂದಾನೇ ನೀರು ಹರಿಯುತ್ತದೆ.
ಹಾಗೇ ಬೆಳಗಾವಿಯ ಮಲಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ಇದರ ಪರಿಣಾಮ ಹಬ್ಬನಾಟಿ ಗ್ರಾಮ, ನದಿ ತಟದಲ್ಲಿರುವ ದೇವಸ್ಥಾನಗಳು ಮುಳುಗಡೆಯಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಲ್ಲಿನ ಜನರ ಜೀವನ ಅಸ್ತವ್ಯಸ್ತವಾಗಿದೆ. ಬೆಳಗಾವಿಯಲ್ಲಿ ಮಳೆ ಜೋರಾದ ಕಾರಣ ಶಾಲಾ ಕಾಲೇಜುಗಳಿಗೂ ರಜೆ ಘೋಷಣೆ ಮಾಡಲಾಗಿದೆ. ಕೃಷ್ಣಾ ನದಿ ಸೇರಿದಂತೆ ಸಪ್ತ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಮಳೆಗಾಲ ಜೋರಾಗಿರುವ ಕಾರಣ ಪ್ರಕೃತಿ ಸೌಂದರ್ಯ ಹೆಚ್ಚಾಗಿರುತ್ತದೆ. ನದಿ, ಸಮುದ್ರದ ಕಡೆ ಪ್ರವಾಸ ಹೋಗುವವರು ಕೊಂಚ ಎಚ್ಚರದಿಂದ ಇರುವುದು ತುಂಬಾ ಒಳ್ಳೆಯದು.




