ಕೊಪ್ಪಳ.ಆಗಸ್ಟ್.15 : ಬಡವರ ಬದುಕಿಗೆ ಬೆಳಕಾದ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿ. ಅಭಿವೃದ್ಧಿಯ ಜನಪರ ಆಡಳಿತಕ್ಕೆ ಎಲ್ಲೆಡೆ ಅಭೂತಪೂರ್ವ ಮೆಚ್ಚುಗೆ ದೊರೆತಿದೆ. ಜಿಡಿಪಿಗೂ ಭರಪೂರ ಕೊಡುಗೆ ನೀಡಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಹೇಳಿದರು.
ಶನಿವಾರದಂದು ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ 80ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.ಗ್ಯಾರಂಟಿ ಯೋಜನೆಗಳು ಸರ್ಕಾರದ ಜನಪರ ಆಡಳಿತಕ್ಕೆ ಸಾಕ್ಷಿಯಾಗಿದ್ದು, ದಾಖಲೆಗಳ ಸರದಾರ ಎಂದೇ ಪ್ರಖ್ಯಾತಿ ಪಡೆದಿದ್ದ ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರಥ್ಯದ ಕರ್ನಾಟಕ ಸರ್ಕಾರವು ತನ್ನ ಆಡಳಿತಾವಧಿಯ ಯಶಸ್ವಿ ಮೂರು ವರ್ಷಗಳನ್ನು ಪೂರೈಸಿದೆ. ಭರ್ಜರಿ ಬಹುಮತದೊಂದಿಗೆ 2023ರಲ್ಲಿ ಅಧಿಕಾರ ಹಿಡಿದಿದ್ದ ಸರ್ಕಾರ, ಇದೀಗ ಮೂರು ವರ್ಷಗಳ ಮೈಲಿಗಲ್ಲನ್ನು ಪೂರೈಸಿದೆ. ಈ ಅವಧಿಯನ್ನು `ಸಾರ್ಥಕ ಪಯಣ’ ಮತ್ತು `ಜನಪರ ಆಡಳಿತ’ ಎಂದು ಇದನ್ನು ಬಣ್ಣಿಸಬಹುದು ಎಂದು ಅವರು ಹೇಳಿದರು.
ಬಡತನ ನಿರ್ಮೂಲನೆ, ಸಾಮಾಜಿಕ ನ್ಯಾಯ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಆರ್ಥಿಕ ಶಕ್ತಿಯಾಗಿ ರಾಜ್ಯವನ್ನು ರೂಪಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಪ್ರಮುಖ ನಿರ್ಧಾರಗಳು, ಐದು ಐತಿಹಾಸಿಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಕೈಗಾರಿಕಾ ಪ್ರಗತಿ ಯೋಜನೆಗಳು ಪ್ರಮುಖ ಸಾಕ್ಷಿಗಳಾಗಿ ಜಾರಿಗೊಂಡಿವೆ. ಪ್ರಸ್ತುತ ಅವಧಿಯ ಸರ್ಕಾರದ ಮೂರು ವರ್ಷಗಳ ಆಡಳಿತದ ಅತಿ ದೊಡ್ಡ ಯಶಸ್ಸು ಎಂದರೆ ಚುನಾವಣೆಗೂ ಮುನ್ನ ಘೋಷಿಸಿದ್ದ ಐದು ಪ್ರಮುಖ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಚಾಲನೆಯಲ್ಲಿಟ್ಟಿರುವುದು. ವಾರ್ಷಿಕ ಸರಿಸುಮಾರು 50,000 ಕೋಟಿ ರೂಪಾಯಿಗಳಿಗೂ ಅಧಿಕ ವೆಚ್ಚದಲ್ಲಿ ಅನುಷ್ಠಾನಗೊಳ್ಳುತ್ತಿರುವ ಈ ಯೋಜನೆಗಳು ಕೋಟ್ಯಂತರ ಕುಟುಂಬಗಳ ಆರ್ಥಿಕ ಸ್ಥಿತಿಯನ್ನು ಸುಧಾರಿಸಿವೆ. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಘನತೆಯ ಜೀವನವನ್ನು ಸಾಗಿಸಬೇಕು ಎಂಬ ಆಶಯದೊಂದಿಗೆ ಆರ್ಥಿಕ ಮತ್ತು ಸಾಮಾಜಿಕವಾಗಿ ದುರ್ಬಲರನ್ನೂ ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿ ಮಾಡಿದ ಪಂಚ ಗ್ಯಾರಂಟಿ ಯೋಜನೆಗಳು ಕರ್ನಾಟಕದಲ್ಲಿ ಯಶಸ್ವಿಯಾಗಿವೆ. ಐದು ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಈವರೆಗೆ ಒಟ್ಟು 1.34 ಲಕ್ಷ ಕೋಟಿ ರೂಪಾಯಿ ವೆಚ್ಚ ಮಾಡಿದೆ. ಈ ಗ್ಯಾರಂಟಿಗಳನ್ನು ದೇಶದ ವಿವಿಧ ರಾಜ್ಯಗಳು ಅನುಸರಿಸುತ್ತಿರುವುದು ಹೆಗ್ಗಳಿಕೆ ಎಂದು ಸಚಿವರು ಹೆಮ್ಮೆ ವ್ಯಕ್ತಪಡಿಸಿದರು.










