ಭಾರಿ ವಾಹನ ಚಾಲಕರ ಪರವಾನಗಿ ಜಿಲ್ಲಾ ಕೇಂದ್ರದಲ್ಲಿಯೇ ನವೀಕರಿಸಿ : ಚಾಲಕರ ಕ್ಷೇಮಾಭಿವೃದ್ದಿ ಒಕ್ಕೂಟ ಮನವಿ

1 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜೂನ್. 20 : ಭಾರಿ ವಾಹನ ಚಾಲಕರುಗಳಿಗೆ ಜಿಲ್ಲಾ ಕೇಂದ್ರದಲ್ಲಿಯೇ ಪರವಾನಗಿ ನವೀಕರಿಸುವಂತೆ ಜಿಲ್ಲಾ ಚಾಲಕರ ಕ್ಷೇಮಾಭಿವೃದ್ದಿ ಒಕ್ಕೂಟದಿಂದ ಪ್ರಾದೇಶಿಕ ಸಾರಿಗೆ ಅಧಿಕಾರಿ ಮೂಲಕ ಸಾರಿಗೆ ಸಚಿವ ರಾಮಲಿಂಗರೆಡ್ಡಿರವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

ಪ್ರತಿ ಐದು ವರ್ಷಕ್ಕೊಮ್ಮೆ ಬಸ್ಸು, ಲಾರಿ ಭಾರಿ ವಾಹನ ಚಾಲಕರುಗಳು ಪರವಾನಗಿಯನ್ನು ನವೀಕರಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಂಗಳೂರು, ಧಾರವಾಡ, ಮಂಗಳೂರು ಹಾಗೂ ಕಲ್ಬುರ್ಗಿಯಲ್ಲಿ ಮಾತ್ರ ಅವಕಾಶ ಕಲ್ಪಿಸಿವೆ. ಜಿಲ್ಲೆಯಲ್ಲಿ ಐದು ಸಾವಿರಕ್ಕೂ ಹೆಚ್ಚು ಭಾರಿ ವಾಹನ ಚಾಲಕರುಗಳಿದ್ದು, ದೂರದ ಜಿಲ್ಲೆಗಳಿಗೆ ಹೋಗಿ ಪರವಾನಗಿ ನವೀಕರಿಸಿಕೊಳ್ಳುವುದು ಕಷ್ಟವಾಗುತ್ತದೆ. ಅದಕ್ಕಾಗಿ ಜಿಲ್ಲಾ ಕೇಂದ್ರದಲ್ಲಿಯೇ ಪರವಾನಗಿ ನವೀಕರಿಸಿಕೊಳ್ಳಲು ಅವಕಾಶ ನೀಡುವಂತೆ ಚಾಲಕರ ಕ್ಷೇಮಾಭಿವೃದ್ದಿ ಒಕ್ಕೂಟದ ಅಧ್ಯಕ್ಷ ಮಂಜುನಾಥ್ ಹೆಚ್. ಪ್ರಾದೇಶಿಕ ಸಾರಿಗೆ ಅಧಿಕಾರಿಯನ್ನು ಒತ್ತಾಯಿಸಿದರು.

ಚಾಲಕರುಗಳು ಕುಟುಂಬ ನಿಭಾಯಿಸುವುದೇ ಕಷ್ಟವಾಗಿರುವ ಈಗಿನ ಕಾಲದಲ್ಲಿ ದೂರದ ಜಿಲ್ಲೆಗಳಿಗೆ ಹೋಗಿ ಪರವಾನಗಿ ನವೀಕರಿಸಿಕೊಂಡು ಬರಬೇಕಾದರೆ ಊಟ ವಸತಿ ಸೇರಿದಂತೆ ಮೂರರಿಂದ ನಾಲ್ಕು ಸಾವಿರ ರೂ.ಗಳಷ್ಟು ವೆಚ್ಚವಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊರಡಿಸಿರುವ ಈ ಆದೇಶವನ್ನು ರದ್ದುಪಡಿಸಿ ಆಯಾ ಜಿಲ್ಲೆಗಳಲ್ಲಿಯೇ ಪರವಾನಗಿ ನವೀಕರಿಸಿಕೊಳ್ಳಲು ಅನುಮತಿಸುವಂತೆ ವಿನಂತಿಸಿದರು.

ಜಿಲ್ಲಾ ಚಾಲಕರ ಕ್ಷೇಮಾಭಿವೃದ್ದಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪರಮೇಶ್ವರಪ್ಪ ಆರ್. ಖಜಾಂಚಿ ರಾಘವೇಂದ್ರ ಕೆ.ಟಿ. ಕುಮಾರ್, ಶಾನ್‍ನವಾಜ್ ಹಾಗೂ ಯುವ ನ್ಯಾಯವಾದಿ ಓ.ಪ್ರತಾಪ್‍ಜೋಗಿ ಈ ಸಂದರ್ಭದಲ್ಲಿದ್ದರು.

Share This Article
Leave a Comment

Leave a Reply

Your email address will not be published. Required fields are marked *