ಕಾರಕಾಸ್: ವೆನೆಜುವೆಲಾದಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ಎರಡು ಭೀಕರ ಭೂಕಂಪಗಳು ಇಡೀ ದೇಶವನ್ನೇ ಬೆಚ್ಚಿಬೀಳಿಸಿವೆ. ಕೇವಲ ಕೆಲವೇ ನಿಮಿಷಗಳ ಅಂತರದಲ್ಲಿ ಸಂಭವಿಸಿದ ಈ ಪ್ರಬಲ ನಡುಕಕ್ಕೆ ನೂರಾರು ಕಟ್ಟಡಗಳು ನೆಲಸಮವಾಗಿದ್ದು, ದೊಡ್ಡ ಮಟ್ಟದ ಜೀವಹಾನಿಯಾಗಿರುವ ಆತಂಕ ಎದುರಾಗಿದೆ. ನಿರಂತರವಾಗಿ 20ಕ್ಕೂ ಹೆಚ್ಚು ಆಫ್ಟರ್ಶಾಕ್ಗಳು (ನಂತರದ ಕಂಪನಗಳು) ವರದಿಯಾಗುತ್ತಿರುವುದರಿಂದ ಜನರು ಮನೆಗಳಿಂದ ಹೊರಗೆ ಓಡಿಬಂದು ರಸ್ತೆಗಳಲ್ಲೇ ಆಶ್ರಯ ಪಡೆದಿದ್ದಾರೆ. ಪ್ರಸ್ತುತ ಪರಿಸ್ಥಿತಿಯನ್ನು ಎದುರಿಸಲು ತಾತ್ಕಾಲಿಕ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರು ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.
ಅಮೆರಿಕದ ಭೂಗರ್ಭ ಸಮೀಕ್ಷಾ ಸಂಸ್ಥೆ (USGS) ನೀಡಿರುವ ವರದಿಯ ಪ್ರಕಾರ, ರಾಜಧಾನಿ ಕಾರಕಾಸ್ನ ಪಶ್ಚಿಮಕ್ಕೆ ಸುಮಾರು 160 ಕಿಲೋಮೀಟರ್ ದೂರದಲ್ಲಿ ಮೊದಲಿಗೆ 7.2 ತೀವ್ರತೆಯ ಭೂಕಂಪ ದಾಖಲಾಗಿತ್ತು. ಇದರ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ ಅದೇ ಭಾಗದಲ್ಲಿ ಮತ್ತೊಮ್ಮೆ 7.5 ತೀವ್ರತೆಯ ಮಹಾ ಕಂಪನ ಸಂಭವಿಸಿ ವಿನಾಶ ಸೃಷ್ಟಿಸಿದೆ.
ಭೂಕಂಪದ ಭೀಕರತೆಗೆ ಹಲವು ಬಹುಮಹಡಿ ಕಟ್ಟಡಗಳು ಧರೆಗುರುಳಿವೆ. ಅವಶೇಷಗಳ ಅಡಿಯಲ್ಲಿ ನೂರಾರು ಜನರು ಸಿಲುಕಿಕೊಂಡಿರುವ ಶಂಕೆ ಇದ್ದು, ತುರ್ತು ರಕ್ಷಣಾ ಸಿಬ್ಬಂದಿ ಜೆಸಿಬಿ ಹಾಗೂ ಆಧುನಿಕ ಉಪಕರಣಗಳೊಂದಿಗೆ ಸತತ ಶೋಧ ಕಾರ್ಯ ನಡೆಸುತ್ತಿದ್ದಾರೆ. ಮೃತರ ಹಾಗೂ ಗಾಯಾಳುಗಳ ನಿಖರ ಸಂಖ್ಯೆಯನ್ನು ಸರ್ಕಾರ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲವಾದರೂ, ಸಾವಿನ ಪ್ರಮಾಣ ಭಾರೀ ಸಂಖ್ಯೆಯಲ್ಲಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಯುಎಸ್ಜಿಎಸ್ನ ಪ್ರಾಥಮಿಕ ಅಂದಾಜಿನ ಪ್ರಕಾರ ಈ ದುರಂತದಲ್ಲಿ 10 ಸಾವಿರದಿಂದ 1 ಲಕ್ಷದವರೆಗೆ ಸಾವು-ನೋವು ಸಂಭವಿಸಿರಬಹುದು ಎನ್ನಲಾಗಿದೆ.
ಭೂಕಂಪದ ಧಾಳಿಗೆ ಮೈಕ್ವೆಟಿಯಾದಲ್ಲಿರುವ ಪ್ರಮುಖ ‘ಸಿಮೋನ್ ಬೊಲಿವರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ’ ತೀವ್ರವಾಗಿ ಹಾನಿಗೊಳಗಾಗಿದೆ. ಈ ಹಿನ್ನೆಲೆಯಲ್ಲಿ ರನ್ವೇ ಹಾಗೂ ಕಟ್ಟಡಗಳ ದುರಸ್ತಿಗಾಗಿ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇನ್ನು ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ದೇಶದ ಎಲ್ಲಾ ಶಾಲೆಗಳಿಗೆ ಮುಂದಿನ ಕೆಲವು ದಿನಗಳವರೆಗೆ ರಜೆ ಸಾರಲಾಗಿದೆ.
La presidenta (E) de la República, Delcy Rodríguez (@delcyrodriguezv), ofrece declaraciones sobre el potente sismo de 7 grados que sacudió el Distrito Capital, y otras zonas del país, la tarde de este miércoles. pic.twitter.com/1BejJzlM5W
— Yvan Gil (@yvangil) June 25, 2026
ದೇಶ ತೀವ್ರ ಸಂಕಷ್ಟ ಎದುರಿಸುತ್ತಿರುವ ಈ ಸಂದರ್ಭದಲ್ಲಿ ವೆನೆಜುವೆಲಾದ ಮಾಜಿ ಅಧ್ಯಕ್ಷ ನಿಕೋಲಸ್ ಮಡುರೊ ಅವರು ಜನತೆಯಲ್ಲಿ ಧೈರ್ಯ ತುಂಬಿದ್ದಾರೆ. ದೇಶದ ನಾಗರಿಕರು ಪರಸ್ಪರ ಸಹಕಾರ ಮತ್ತು ಐಕ್ಯತೆಯಿಂದ ಇರಬೇಕು ಎಂದು ಮನವಿ ಮಾಡಿರುವ ಅವರು, ಸ್ವಯಂಪ್ರೇರಿತರಾಗಿ ರಕ್ಷಣಾ ಮತ್ತು ಪರಿಹಾರ ಕಾರ್ಯಗಳಲ್ಲಿ ಕೈಜೋಡಿಸುವಂತೆ ಕರೆ ನೀಡಿದ್ದಾರೆ. ಆಫ್ಟರ್ಶಾಕ್ಗಳು ಮುಂದುವರಿದಿರುವುದರಿಂದ ಈಗಾಗಲೇ ಬಿರುಕು ಬಿಟ್ಟಿರುವ ಕಟ್ಟಡಗಳು ಕುಸಿಯುವ ಅಪಾಯವಿದ್ದು, ಸಾರ್ವಜನಿಕರು ಸುರಕ್ಷಿತ ಸ್ಥಳಗಳಲ್ಲೇ ಇರುವಂತೆ ಎಚ್ಚರಿಕೆ ನೀಡಲಾಗಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.













