ಹುಬ್ಬಳ್ಳಿ; ಮುಂಗಾರು ಮಳೆ ಆರಂಭವಾಗಿದೆ. ಈ ಮಳೆಗಾಲ ಶುರುವಾದಾಗ ಒಂದಷ್ಟು ಅವಾಂತರಗಳು ಸೃಷ್ಟಿಯಾಗುತ್ತವೆ. ಹುಬ್ಬಳ್ಳಿ, ಧಾರವಾಡದ ಭಾಗದಲ್ಲಿ ಶುರುವಾದ ಮಳೆಯಿಂದಾಗಿ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಮಳೆಯಿಂದಾಗಿ ವ್ಯಕ್ತಿಯೊಬ್ಬ ಕೊಚ್ಚುಕೊಂಡು ಹೋಗಿರುವ ಘಟನೆ ನಡೆದಿದೆ. ಹುಬ್ಬಳ್ಳಿಯ ಬೀರಬಂದ ಓಣಿಯಲ್ಲಿ ವ್ಯಕ್ತಿ ಕೊಚ್ಚಿ ಹೋಗಿದ್ದಾರೆ. ರಾತ್ರಿ 3 ಗಂಟೆಯವರೆಗೂ ಮಳೆ ಬಂದಿದೆ.
ಹೀಗೆ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಹುಬ್ಬಳ್ಳಿಯ ಉಣಕಲ್ ಸಂಪೂರ್ಣ ಜಲಾವೃತಗೊಂಡಿದೆ. ಮಳೆಯಿಂದಾಗಿ ಯಮನೂರು ಗ್ರಾಮ ಕೂಡ ಕೆರೆಯಂತಾಗಿದೆ. ಮನೆಗಳಿಗೆ ನೀರು ನುಗ್ಗಿದೆ. ಮೊಣಕಾಲಿನವರೆಗೂ ನೀರು ಇರುವ ಕಾರಣ ಜನ ಓಡಾಡುವುದಕ್ಕೂ ಸಾಧ್ಯವಾಗ್ತಾ ಇಲ್ಲ. ಜನ ಜೀವನ ಅಸ್ತವ್ಯಸ್ತತೆಯ ಪರಿಸ್ಥಿತಿ ತಲುಪಿದೆ. ಮಳೆ ಜೋರಾಗಿರುವ ಕಾರಣ ಚರಂಡಿಯಲ್ಲೆಲ್ಲಾ ನೀರು ತುಂಬಿದೆ. ತುಂಬಿ ಹರಿಯುತ್ತಿರೋ ಚರಂಡಿಗೆ ವ್ಯಕ್ತಿಯೊಬ್ಬ ಕೊಚ್ಚಿಕೊಂಡು ಹೋಗಿದ್ದಾನೆ.
ನೇಕಾರ ನಗರದ ಹುಸೇನ ಸಾಬ ಕಳಸದ ಕೊಚ್ಚಿ ಹೋಗಿರುವ ವ್ಯಕ್ತಿ. ಕಸಬಾ ಪೇಟ ಪೊಲೀಸ್ ಠಾಣೆ ವ್ಯಾಪ್ತಿ ಬೆಳಗಲಿ ರಸ್ತೆಯಲ್ಲಿ ಈಘಟನೆ ನಡೆದಿದ್ದು, ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ. ಪಾಲಿಕೆ ಕಮಿಷನರ್ ರುದ್ರೇಶ ಘಾಳಿ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ವ್ಯಕ್ತಿಯ ಮನೆಯವರೆಲ್ಲರು ಸೇರಿ ಹುಡುಕಾಡುತ್ತಿದ್ದಾರೆ. ಮಳೆಯ ನೀರು ರಭಸದಿಂದ ಹರಿಯುತ್ತಿದ್ದಿ, ವ್ಯಕ್ತಿ ಎಲ್ಲಿಯ ತನಕ ಕೊಚ್ಚಿಕೊಂಡು ಹೋಗಿರಬಹುದು ಎಂಬ ಆತಂಕ ಮನೆಯವರಲ್ಲಿ ಕಾಡುತ್ತಿದೆ.
ಮಳೆ ಜೋರಾದ ಹಿನ್ನೆಲೆ ಧಾರವಾಡ ಜಿಲ್ಲೆಯಾದ್ಯಂತ ರೆಡ್ ಅಲರ್ಟಗ ಘೋಷಣೆಯಾಗಿದೆ. ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ. ಇನ್ನು ಇಂದು ಕೂಡ ಜೋರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.






