ಸುದ್ದಿಒನ್, ಚಿತ್ರದುರ್ಗ, ಮೇ. 10 : ಸುಮಾರು 35 ವರ್ಷಗಳ ಅವಿರತ ಹೋರಾಟದಿಂದ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಜಾರಿ ಮಾಡುತ್ತಿರುವ ಹಿನ್ನಲೆಯಲ್ಲಿ ಈಗ ಜಾತಿಯ ಮಾಹಿತಿ ಸಂಗ್ರಹ ನಡೆಯುತ್ತಿರುವುದರಿಂದ ಜನಾಂಗದ ಬಂಧುಗಳು ಮಾದಿಗ ಜಾತಿಯ ಹೆಸರನ್ನು ನಮೂದಿಸುವಂತೆ ನಗರದಲ್ಲಿ ಅಂಬೇಡ್ಕರ್ ನಗರದಲ್ಲಿ ಸೇರಿದ್ದ ಜನಾಂಗದ ಸಭೆಯಲ್ಲಿ ಗ್ಯಾರಂಟಿ ಯೋಜನೆ ಉಪಾಧ್ಯಕ್ಷರು ಹಾಗೂ ಮಾಜಿ ನಗರಸಭಾ ಅಧ್ಯಕ್ಷರಾದ ಡಿ.ಎನ್.ಮೈಲಾರಪ್ಪ ಮನವಿ ಮಾಡಿದರು.
ನಂತರ ಸಭೆಯಲ್ಲಿ ಮಾತನಾಡಿ, ಮಾದಿಗ ಸಮುದಾಯದ ಬಾಂಧವರು ನಿಖರವಾದ ಮಾಹಿತಿ ನೀಡಬೇಕು ನೀವು ನೀಡುವ ಮಾಹಿತಿ ಆಧಾರದ ಮೇಲೆ ಓಳ ಮೀಸಲಾತಿ ಜಾರಿಯಾಗಲಿದೆ, ಸಮುದಾಯ ಕುಟುಂಬದಲ್ಲಿ ಅನಕ್ಷರಸ್ಥರು ಹೆಚ್ಚಿದ್ದು ಅಂತವರ ಬಳಿಗೆ ಹೋಗಿ ಮಾಹಿತಿ ನೀಡಿ ಮಾದಿಗ ಉಪ ಜಾತಿಯ ಹೆಸರು ನೊಂದಾಯಿಸುವಂತೆ ಜನಾಂಗದ ಮುಖಂಡರು ಶ್ರಮಿಸಬೇಕಾಗಿದೆ.
ಈ ಭಾಗದಲ್ಲಿ ಮಾದಿಗ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಅಂಬೇಡ್ಕರ್ ನಗರದಲ್ಲಿ ಸಮೀಕ್ಷೆಯ ಸಂದರ್ಭದಲ್ಲಿ ಡಿ.ಎನ್.ಮೈಲಾರಪ್ಪ ಹಾಗೂ ಸ್ಥಳೀಯ ಮುಖಂಡರು ಮನೆ ಮನೆಗೆ ತೆರಳಿ ಮಾದಿಗ ಜಾತಿ ಎಂದು ಬರೆಸಲು ಅಲ್ಲಿಯ ಜನತೆಗೆ ನೆರವಾದರು. ಮಾದಿಗರು ಯಾವುದೇ ಕಾರಣಕ್ಕೂ ಆದಿಕರ್ನಾಟಕ ಆದಿದ್ರಾವಿಡ ಎಂದು ನಮೂದಿಸಬಾರದು ಸಮಾಜಿಕ ಶೈಕ್ಷಣಿಕ ಆರ್ಥಿಕ ರಾಜಕೀಯವಾಗಿ ಹಿಂದುಳಿದವರ ಈ ಸಮಾಜ ಜಾತಿಗಣತಿಯಲ್ಲಿ ಮಾದಿಗ ಎಂದು ನಮೂದಿಸದಿದ್ದರೆ ಇಡೀ ಜನಾಂಗ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು.











