ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 10 : ಭಾರತದ ಅನೇಕ ಭಾಗಗಳಲ್ಲಿ ದಿನನಿತ್ಯವೂ ಒಂದಲ್ಲ ಒಂದು ರೀತಿಯ ಅಪರಾಧಗಳು ನಡೆಯುತ್ತಿವೆ. ಮಹಿಳೆಯರ ಮೇಲಿನ ದೌರ್ಜನ್ಯ, ಶೋಷಣೆ, ಕಿರುಕುಳ, ಅತ್ಯಾಚಾರದ ವಿರುದ್ದ ಜನತೆಯಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಜಾಗ್ಥೆ ರಹೋ ಭಾರತ್ ಯಾತ್ರಾ ಕೈಗೊಂಡಿರುವ ಯಾತ್ರಾರ್ಥಿಗಳಿಗೆ ಚಿತ್ರದುರ್ಗದ ಹೊರ ವಲಯದ ಧಮ್ಮ ಕೇಂದ್ರದಲ್ಲಿ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು.
ಜಾಗ್ಥೆ ರಹೋ ಭಾರತ್ ಯಾತ್ರಾ ಮುಖ್ಯಸ್ಥ ರಾಜೇಂದ್ರಕುಮಾರ್ ಮಾತನಾಡಿ ಮಾ. 8 ರಂದು ಮೌಂಟ್ ಅಬುವಿನಿಂದ ಹೊರಟರುವ ಯಾತ್ರೆ ಜೂ. 8 ಕ್ಕೆ ದೆಹಲಿ ತಲುಪಲಿದೆ. ಹರಿಯಾಣ, ಗಾಂಧಿಯನ್ ಸೊಸೈಟಿ ನವದೆಹಲಿ, ಇನ್ನರ್ವೀಲ್ಹ್ ಕ್ಲಬ್ ಮೌಂಟ್ ಅಬು ಇವುಗಳ ಸಂಯುಕ್ತಾಶ್ರಯದಲ್ಲಿ ಜಾಗ್ಥೆ ರಹೋ ಭಾರತ್ ಯಾತ್ರೆಯನ್ನು ಕೈಗೊಳ್ಳಲಾಗಿದ್ದು, ನೂರು ದಿನಗಳ ಈ ಯಾತ್ರೆ 21 ಸಾವಿರ ಕಿ.ಮೀ. ಸಂಚರಿಸಲಿದೆ. 21 ನೇ ಶತಮಾನದಲ್ಲಿದ್ದರೂ ಕೂಡ ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯ, ಶೋಷಣೆ, ದಬ್ಬಾಳಿಕೆ, ಲೈಂಗಿಕ ಅತ್ಯಾಚಾರ ನಡೆಸುವ ಮೂಲಕ ಸ್ತ್ರೀಯನ್ನು ಅಭದ್ರತೆಯಲ್ಲಿ ಇಡಲಾಗಿರುವುದು ನಿಜಕ್ಕೂ ಸಮಾಜ ನಾಚಿಕೆಯಿಂದ ತಲೆ ತಗ್ಗಿಸಬೇಕಾಗಿದೆ. ಇಂತಹ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸಲು ಭಾರತದ ಎಲ್ಲಾ ರಾಜ್ಯಗಳಲ್ಲೂ ಜಾಗ್ಥೆ ರಹೋ ಭಾರತ್ ಯಾತ್ರೆಯನ್ನು ಕೈಗೊಳ್ಳಲಾಗಿದೆ ಎಂದು ರಾಜೇಂದ್ರಕುಮಾರ್ ತಿಳಿಸಿದರು.
ಈಗಾಗಲೆ ದೇಶಾದ್ಯಂತ ಜಾಗೃತಿ ಕಾರ್ಯವನ್ನು ನಡೆಸಿಕೊಂಡು ಬರಲಾಗಿದ್ದು, ದೇಶದ ವಿವಿಧ ಸಂಘ ಸಂಸ್ಥೆಗಳು, ಎನ್.ಜಿ.ಓ.ಗಳು ವ್ಯಾಪಕವಾಗಿ ಸ್ವಾಗತ ನೀಡಿ ಬೆಂಬಲಿಸಿದ್ದು, ಜೂ.8 ರಂದು ದೆಹಲಿಯಲ್ಲಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳಲಿದ್ದಾರೆಂದು ಹೇಳಿದರು.
ಜಾಗ್ಥೆ ರಹೋ ಭಾರತ್ ಯಾತ್ರೆಯ ಉದ್ದಕ್ಕೂ ಝಾನ್ಸಿರಾಣಿ ಲಕ್ಷ್ಮಿಬಾಯಿ, ಜ್ಯೋತಿ ಬಾಪುಲೆ, ಕಿತ್ತೂರಾಣಿಚೆನ್ನಮ್ಮ, ಒನಕೆ ಓಬವ್ವ ಇವರುಗಳ ಹೆಸರುಗಳನ್ನು ನಿರಂತರವಾಗಿ ಸ್ಮರಣೆ ಮಾಡಲಾಗಿದ್ದು, ಮಹಿಳೆಯರು ಮತ್ತು ದೇಶದ ಪರ ಹೋರಾಡಿ ತ್ಯಾಗ, ಬಲಿದಾನಗೈದಿರುವವರಿಗೆ ನಮನಗಳನ್ನು ಸಲ್ಲಿಸಲಾಗಿದೆ ಎಂದು ನುಡಿದರು.
ಕರ್ನಾಟಕ ಶಾಂತಿ ಮತ್ತು ಸೌಹಾರ್ಧ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್ಕುಮಾರ್ ಮಾತನಾಡಿ ಜಾಗ್ಥೆ ರಹೋ ಭಾರತ ಯಾತ್ರೆಯಂತಹ ಜಾಗೃತಿ ಯಾತ್ರೆಗಳು ದೇಶದ ಬಗ್ಗೆ ಕಳಕಳಿ ಹೊಂದಿರುವಂತಹ ಜನರನ್ನು ಸದಾ ಎಚ್ಚರಿಸುತ್ತಿದೆ. ಹಾಗೆಯೆ ಮತ್ತಷ್ಟು ಕೆಲಸ ಮಾಡಲು ಹುರಿದುಂಬಿಸುತ್ತದೆ. ಭಾರತ ಯಾತ್ರೆಯಂತಹ ಜನಜಾಗೃತಿ ಯಾತ್ರೆಗಳು ದೇಶದಲ್ಲಿ ಹೆಚ್ಚು ಹೆಚ್ಚು ನಡೆಯಬೇಕಾದ ಅಗತ್ಯವಿದೆ. ಎಷ್ಟೆಲ್ಲಾ ಕಾನೂನು ಮತ್ತು ಸಂವಿಧಾನದ ಬಿಗಿ ಕಾವಲುಗಳಿದ್ದರು ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ನಿಜಕ್ಕೂ ಮನುಕುಲ ತಲೆತಗ್ಗಿಸುವಂತದ್ದು, ಇತ್ತೀಚೆಗೆ ಉತ್ತರಪ್ರದೇಶದಲ್ಲಿ ಹತ್ತೊಂಬತ್ತು ವರ್ಷದ ಬಾಲಕಿಯೋರ್ವಳ ಮೇಲೆ ಪೈಶಾಚಿಕ ಕೃತ್ಯವೆಸಗಿರುವ ಮಾನವ ರೂಪದ ನರ ರಾಕ್ಷಸರು ದೇಶದಲ್ಲಿ ಹೆಚ್ಚಳವಾಗಲು ಬೇರೆ ಬೇರೆ ಶಕ್ತಿಗಳ ಕೈವಾಡವಿದ್ದು, ಇಂತಹವರ ಕೃತ್ಯಗಳನ್ನು ನಿಯಂತ್ರಿಸಲು ಸಜ್ಜನರು
ಜಾಗೃತಿ ಜಾಥಾಗಳನ್ನು ನಡೆಸುವ ಮೂಲಕ ಮಹಿಳಾ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಬುದ್ದ, ಬಸವ, ಅಂಬೇಡ್ಕರ್, ಗಾಂಧಿಯಂತಹ ಶಾಂತಿ ಸೌಹಾರ್ಧತೆಯನ್ನು ಬೆಳೆಸಿ ಉಳಿಸಿದಂತಹ ಭಾರತದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಕೃತ್ಯಗಳು ಮಾನವ ಸಮಾಜ ಅವಮಾನದಿಂದ ತಲೆ ತಗ್ಗಿಸಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಹಿಳೆಯರ ಶೋಷಣೆ ವಿರುದ್ದ ರಾಜೇಂದ್ರಕುಮಾರ್, ಜಮುನಾಭಿ, ಜಲಂಧರ್ನಾಥ್, ವಿಕ್ರಂ ಇವರುಗಳ ನೇತೃತ್ವದಲ್ಲಿ ಭಾರತ ಯಾತ್ರೆ ಕೈಗೊಂಡಿರುವುದು ಪ್ರಸ್ತುತ ಸಂದರ್ಭದಲ್ಲಿ ಅನಿವಾರ್ಯ ಮತ್ತು ಸಂದರ್ಭೋಚಿತವಾಗಿದೆ ಎಂದರು.
ವಿಮುಕ್ತಿ ವಿದ್ಯಾಸಂಸ್ಥೆಯ ನಿರ್ದೇಶಕ ಆರ್.ವಿಶ್ವಸಾಗರ್ ಭಾರತ ಯಾತ್ರಿಗಳನ್ನು ಗೌರವಿಸಿ ಶಾಂತಿ ಯಾತ್ರೆಗಳಿಂದ ಸಮಾಜದಲ್ಲಿ ನೆಮ್ಮದಿ ಉಂಟಾಗುತ್ತದೆಂದು ಹೇಳಿದರು.
ಸ್ಪೀಚ್ ಸಂಸ್ಥೆಯ ಅಧ್ಯಕ್ಷರಾದ ಶೇಷಣ್ಣ ಮಾತನಾಡಿ ಯಾವುದೇ ಪ್ರತಿಫಲವಿಲ್ಲದೆ ಜಾಗ್ಥೆ ರಹೋ ಭಾರತ್ ಯಾತ್ರಾ ದೇಶಾದ್ಯಂತ ಸಂಚರಿಸುತ್ತಿರುವುದು ಶೋಷಣೆ, ದಬ್ಬಾಳಿಕೆ, ಅತ್ಯಾಚಾರಕ್ಕೆ ಒಳಗಾಗುತ್ತಿರುವ ಮಹಿಳೆಯರಲ್ಲಿ ಧೈರ್ಯ, ಆತ್ಮವಿಶ್ವಾಸ ತುಂಬಿದಂತಾಗಿದೆ. ಮಹಿಳೆಯರ ಮೇಲಾಗುವ ಶೋಷಣೆ ನಿಲ್ಲಬೇಕೆಂಬ ಉದ್ದೇಶದಿಂದ ಕೈಗೊಂಡಿರುವ ಯಾತ್ರೆ ಯಶಸ್ವಿಯಾಗಲಿ ಎಂದು ಹಾರೈಸಿದರು.
ವಿಮುಕ್ತಿ ವಿದ್ಯಾಸಂಸ್ಥೆ ಅಧ್ಯಕ್ಷೆ ಅನ್ನಪೂರ್ಣ, ಸಂಯೋಜಕಿ ನಾಗರತ್ನ, ಬೀಬಿಜಾನ್, ಅರಣ್ಯಸಾಗರ್ ಮತ್ತು ಸುತ್ತಮುತ್ತಲ ಗ್ರಾಮದ ಮೂವತ್ತಕ್ಕೂ ಹೆಚ್ಚು ಬಾಲಕಿಯರು ಈ ಸಂದರ್ಭದಲ್ಲಿ ಹಾಜರಿದ್ದರು.





















