ಬೆಂಗಳೂರು; ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಯಡಿಯೂರಪ್ಪ ಕುಟುಂಬಸ್ಥರ ನಡುವೆ ಇರುವ ಆಂತರಿಕ ಯುದ್ಧ ಇರೋದು ಎಲ್ಲರಿಗೂ ಗೊತ್ತು. ಅದರಲ್ಲೂ ವಿಜಯೇಂದ್ರ ಅವರನ್ನ ಹೇಗಾದರೂ ಮಾಡಿ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು ಎಂಬ ಎಲ್ಲಾ ಯೋಜನೆಗಳನ್ನ ಮಾಡಿದ್ದಾರೆ. ನೇರಾ ನೇರವಾಗಿಯೇ ಅವರ ಕುಟುಂಬದ ಮೇಲೆ ಆಕ್ರೋಶ ಹೊರ ಹಾಕುತ್ತಾ ಇರುತ್ತಾರೆ. ಇದೀಗ ಲಿಂಗಾಯತರ ಸಭೆ ನಡೆಸಿದ್ದು, ಬಿವೈ ವಿಜಯೇಂದ್ರ ಅವರ ಪರ ನಿಂತ ಲಿಂಗಾಯತರಿಗೆ ಟಾಂಟ್ ಕೊಟ್ಟಂತೆ ಇದೆ.
ಇಂದು ಶಾಸಕ ಯತ್ನಾಳ್ ಅವರು ಖಾಸಗಿ ಹೊಟೇಲ್ ನಲ್ಲಿ ಲಿಂಗಾಯತರ ಸಭೆಯನ್ನ ನಡೆಸಿದ್ದಾರೆ. ಈ ಸಭೆಯಲ್ಲಿ ಜಿ.ಎಂ.ಸಿದ್ದೇಶ್ವರ್, ಶಾಸಕ ಬಿ.ಪಿ ಹರೀಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಈ ಸಭೆಯಲ್ಲಿ ಬಿಜೆಪಿ ನಾಯಕತ್ವ, ರಾಜ್ಯಾಧ್ಯಕ್ಷ ಸ್ಥಾನದ ಬದಲಾವಣೆಯ ವಿಚಾರ ಚರ್ಚೆಯಾಗಿದೆ ಎನ್ನಲಾಗಿದೆ. ದೆಹಲಿಗೆ ಲಿಂಗಾಯತ ನಿಯೋಗವನ್ನ ಕೊಂಡೊಯ್ಯುವ ಬಗ್ಗೆಯೂ ಸಮಾಲೋಚನೆಯನ್ನು ನಡೆಸಲಾಗಿದೆ.

ಈ ಹಿಂದೆ ಕೂಡ ಲಿಂಗಾಯತ ನಾಯಕರ ಪರವಾಗಿ ಲಿಂಗಾಯತ ನಾಯಕರ ಸಭೆ ನಡೆಸಲಾಗಿತ್ತು. ಮಾಜಿ ಸಚಿವ ರೇಣುಕಾಚಾರ್ಯ ನೇತೃತ್ವದಲ್ಲಿ ಈ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ಯತ್ನಾಳ್ ಬಣಕ್ಕೆ ಟಾಂಗ್ ಕೊಡುವಂತ ಚರ್ಚೆಗಳು ನಡೆದಿತ್ತು. ಈ ಸಭೆಯಲ್ಲಿ ಯಡಿಯೂರಪ್ಪ ಫ್ಯಾಮಿಲಿಯ ಪರವಾದ ಚರ್ಚೆಗಳು ನಡೆದಿದೆ. ವಿಜಯೇಂದ್ರ ಅವರನ್ನು ಯಾವುದೇ ಕಾರಣಕ್ಕೂ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬಾರದು, ಯಡಿಯೂರಪ್ಪ ಪರವಾಗಿ ಲಿಂಗಾಯತ ನಾಯಕರು ಇದ್ದೇವೆ ಎಂಬುದನ್ನು ಪ್ರೂವ್ ಮಾಡಬೇಕು ಎಂಬ ಉದ್ದೇಶದಿಂದ ಈ ಸಭೆ ನಡೆಸಲಾಗಿತ್ತು. ಇದೀಗ ಅದಕ್ಕೆ ವಿರುದ್ಧವಾಗಿಯೇ ಯತ್ನಾಳ್ ಬಣ ಮತ್ತೆ ಸಭೆ ನಡೆಸಿದೆ.















