ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 18 : ನಗರಸಭೆ ಉಪಾಧ್ಯಕ್ಷೆ ಶ್ರೀದೇವಿ ಚಕ್ರವರ್ತಿ ಅವರು ಬೇಸರ ವ್ಯಕ್ತಪಡಿಸಿ ಕೌನ್ಸಿಲ್ ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿ ಹೊರನಡೆದ ಘಟನೆ ನಡೆಯಿತು.
ಇಂದು (ಫೆ. 18) ಬೆಳಿಗ್ಗೆ ನಗರಸಭೆಯ ಕೌನ್ಸಿಲ್ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷೆ ಬಿ.ಎನ್.ಸುಮಿತ ಅವರ ಅಧ್ಯಕ್ಷತೆಯಲ್ಲಿ ಕೌನ್ಸಿಲ್ ಸಾಮಾನ್ಯ ಸಭೆ ನಡೆಯಿತು.
ಸಭೆ ಆರಂಭದಲ್ಲಿಯೇ ಎದ್ದುನಿಂತ ಉಪಾಧ್ಯಕ್ಷೆ ಶ್ರೀದೇವಿ ಚಕ್ರವರ್ತಿ, ನನ್ನ ವಾರ್ಡ್ನಲ್ಲಿ ಯಾವುದೇ ಕಾಮಗಾರಿ, ಕೆಲಸಗಳು ಆಗುತ್ತಿಲ್ಲ. ಜೊತೆಗೆ ಆಗುತ್ತಿರುವ ಕಾಮಗಾರಿಗಳು ನನ್ನ ಗಮನಕ್ಕೆ ಅಧಿಕಾರಿಗಳು ತರುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಆಡಳಿತ ಪಕ್ಷದಿಂದ ಉಪಾಧ್ಯಕ್ಷೆಯಾಗಿರುವ ನನಗೆ ಅಧಿಕಾರಿಗಳು ಯಾವುದೇ ಮಾಹಿತಿ ನೀಡದೆ ನಿರ್ಲಕ್ಷ್ಯ ಮಾಡುತ್ತಿರುವುದು ಮನಸ್ಸಿಗೆ ಬೇಸರ ತರಿಸಿದೆ.
ಸಭೆಯಲ್ಲಿ ಇದ್ದರೆಷ್ಟು ಇಲ್ಲದಿದ್ದರೆಷ್ಟು ಏನು ಬದಲಾವಣೆ ಆಗುವುದಿಲ್ಲ. ನೀವುಗಳೇ ಸಭೆ ಮಾಡಿಕೊಳ್ಳಿ, ನಿಮ್ಮಿಷ್ಟದಂತೆ ಆಡಳಿತ ನಡೆಸಿ ಎಂದು ಆಕ್ರೋಶ ವ್ಯಕ್ತಪಡಿಸಿ ಬಜೆಟ್ ಸಭೆಯನ್ನು ಬಹಿಷ್ಕರಿಸಿ ಹೊರಟರು.
ತಕ್ಷಣ ಮಧ್ಯ ಪ್ರವೇಶಿಸಿದ ಆಡಳಿತ ಪಕ್ಷದ ಸದಸ್ಯರು, ನಾವು ಗೌರವ ಕೊಟ್ಟು ಉಪಾಧ್ಯಕ್ಷೆಯನ್ನಾಗಿ ಮಾಡಿದ್ದೇವೆ. ಆದರೆ, ಈ ರೀತಿ ಸಭೆ ಬಹಿಷ್ಕರಿಸುವುದು ತಪ್ಪು ಎಂದು ಹೇಳಿದರು. ಇದಕ್ಕೆ ನನ್ನಿಂದ ನಿಮಗೆ ಗೌರವ ಬಂದಿರುವುದು ಎಂದು ತಿರುಗೇಟು ನೀಡಿ ಹೊರನಡೆದರು. ಈ ವೇಳೆ ವಿಪಕ್ಷ ಸದಸ್ಯರು, ನೋಡ್ರಿ ಸದಸ್ಯರಿಗೆ ಯಾವ ರೀತಿ ಗೌರವ ಇದೆ ಎಂಬುದನ್ನು ಉಪಾಧ್ಯಕ್ಷೆ ಅವರೇ ಬಹಿರಂಗ ಪಡಿಸಿದ್ದಾರೆ. ಇನ್ನೂ ನಮ್ಮಂತಹ ಸದಸ್ಯರ ಪಾಡೇನು. ಆಡಳಿತ ನಡೆಸುವವರು ಅರಿತುಕೊಳ್ಳಬೇಕು ಎಂದು ಹೇಳಿದರು.
















