ಸರ್ವಾನುಮತದಿಂದ NDA ಪಕ್ಷದ ನಾಯಕರಾಗಿ ನರೇಂದ್ರ ಮೋದಿ ಆಯ್ಕೆ :  ಚಂದ್ರಬಾಬು, ನಿತೀಶ್ ಬೇಡಿಕೆ ಏನು ?

ಸುದ್ದಿಒನ್, ನವದೆಹಲಿ, ಜೂ.05 : ದೇಶದಲ್ಲಿ ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಹೊಸ ಸರ್ಕಾರ ರಚನೆಯ ಕಸರತ್ತು ಜೋರಾಗಿ ನಡೆಯುತ್ತಿದೆ. ಇದಕ್ಕಾಗಿ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟ ಮತ್ತು ಪ್ರತಿಪಕ್ಷ ಇಂಡಿಯಾ ಮೈತ್ರಿಕೂಟ ಸಭೆಗಳನ್ನು ನಡೆಸುತ್ತಿದ್ದು ಗದ್ದುಗೆ ಏರಲು ತಯಾರಿ ನಡೆಸುತ್ತಿವೆ.

ಎನ್‌ಡಿಎ ಮೈತ್ರಿಕೂಟಕ್ಕೆ ಸಂಪೂರ್ಣ ಬಹುಮತವಿದ್ದರೂ ಎನ್‌ಡಿಎ ಮೈತ್ರಿಕೂಟದ ಯಾವುದಾದರೂ ಪಕ್ಷಗಳು ತಮ್ಮ ಮೈತ್ರಿಕೂಟಕ್ಕೆ ಬಂದು ಸೇರಬಹುದು ಎಂದು ಇಂಡಿಯಾ ಮೈತ್ರಿಕೂಟ ಆಸೆ ಕಂಗಳಿಂದ ಎದುರು ನೋಡುತ್ತಿದೆ. ದೆಹಲಿಯ ನರೇಂದ್ರ ಮೋದಿ ನಿವಾಸದಲ್ಲಿ ಎನ್ ಡಿಎ ಮೈತ್ರಿಕೂಟದ ನಾಯಕರ ಜತೆ ಮಹತ್ವದ ಸಭೆ ನಡೆಯಿತು . ಈ ಸಭೆಯ ನಂತರ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಎನ್‌ಡಿಎ ಪಕ್ಷದ ನಾಯಕರನ್ನಾಗಿ ಮೈತ್ರಿಕೂಟದ ನಾಯಕರು ಆಯ್ಕೆ ಮಾಡಿದರು. ಒಟ್ಟಾಗಿ ಸರ್ಕಾರ ರಚಿಸಲು ರಾಷ್ಟ್ರಪತಿಯವರನ್ನು ಆಹ್ವಾನಿಸುವಂತೆ ಮನವಿ ಮಾಡಲಿದ್ದಾರೆ.

ಪ್ರಧಾನಿ ನಿವಾಸದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಎನ್‌ಡಿಎ ಮೈತ್ರಿಕೂಟದ ಪಕ್ಷಗಳ ಸಭೆ ಕೊನೆಗೂ ಅಂತ್ಯಗೊಂಡಿದೆ. ಈ ಸಭೆಯಲ್ಲಿ ಕೇಂದ್ರದಲ್ಲಿ ಸರ್ಕಾರ ರಚನೆ ಕುರಿತು ಚರ್ಚೆ ನಡೆಸಲಾಯಿತು. ಎನ್‌ಡಿಎ ಮೈತ್ರಿಕೂಟದ 21 ಪಕ್ಷಗಳ ನಾಯಕರು ನರೇಂದ್ರ ಮೋದಿ ಅವರನ್ನು ಎನ್‌ಡಿಎ ಪಕ್ಷದ ನಾಯಕರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಈ 21 ನಾಯಕರಲ್ಲಿ ಹೆಚ್.ಡಿ. ಕುಮಾರ ಸ್ವಾಮಿ,  ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು, ಜೆಡಿಯು ನಾಯಕ ನಿತೀಶ್ ಕುಮಾರ್ ಮತ್ತು ಜನಸೇನಾ ಅಧ್ಯಕ್ಷ ಪವನ್ ಕಲ್ಯಾಣ್ ಸೇರಿದ್ದಾರೆ . ಇಂದು ರಾತ್ರಿ ಅಥವಾ ನಾಳೆ ಬೆಳಿಗ್ಗೆ ಎಲ್ಲರೂ ಒಟ್ಟಾಗಿ ಸರ್ಕಾರ ರಚಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲಿದ್ದಾರೆ. ಆದರೆ ನರೇಂದ್ರ ಮೋದಿ ಅವರು ಇದೇ ತಿಂಗಳ 8ರಂದು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಊಹಾಪೋಹಗಳು ಈ ಹಿಂದೆ ಇದ್ದವು. ಆದರೆ ಅದಕ್ಕೂ ಮುನ್ನ ಜೂನ್ 7ರ ಸಂಜೆ ಪ್ರಮಾಣ ವಚನ ಸ್ವೀಕಾರ ನಡೆಯಲಿದೆಯಂತೆ.

ಬಿಜೆಪಿಗೆ ಸ್ವಂತವಾಗಿ ಸರ್ಕಾರ ರಚಿಸಲು ಸಾಕಷ್ಟು ಸ್ಥಾನಗಳಿಲ್ಲದ ಕಾರಣ, ಎನ್‌ಡಿಎ ಮೈತ್ರಿಕೂಟದ ಇತರ ಪಕ್ಷಗಳ ಬೆಂಬಲ ಈಗ ಆ ಪಕ್ಷಕ್ಕೆ ನಿರ್ಣಾಯಕವಾಗಿದೆ. ಈ ನಿಟ್ಟಿನಲ್ಲಿ ಮೈತ್ರಿಕೂಟದಲ್ಲಿ ಹೆಚ್ಚು ಸ್ಥಾನ ಪಡೆದಿರುವ ಬಿಜೆಪಿ, ಟಿಡಿಪಿ, ಜೆಡಿಯು ಪಕ್ಷಗಳು ಇದೀಗ ಕಿಂಗ್ ಮೇಕರ್ ಗಳಾಗಿ ಮಾರ್ಪಟ್ಟಿವೆ. ಇದರೊಂದಿಗೆ ಬಾಬು ಮತ್ತು ನಿತೀಶ್ ನೇತೃತ್ವದ ಟಿಡಿಪಿ ಮತ್ತು ಜೆಡಿಯು ಪಕ್ಷಗಳನ್ನು ತೃಪ್ತಿಪಡಿಸಲು ಬಿಜೆಪಿ ಹೈಕಮಾಂಡ್ ಸರ್ವಪ್ರಯತ್ನ ನಡೆಸುತ್ತಿದೆ. 16 ಸ್ಥಾನಗಳನ್ನು ಹೊಂದಿರುವ ತೆಲುಗು ದೇಶಂ ಪಕ್ಷವು ಲೋಕಸಭೆಯ ಸ್ಪೀಕರ್ ಹುದ್ದೆ, 3 ಕ್ಯಾಬಿನೆಟ್ ಸ್ಥಾನಗಳು ಮತ್ತು ಎರಡು ಸ್ವತಂತ್ರ ಸಚಿವ ಸ್ಥಾನಗಳಿಗೆ ಬೇಡಿಕೆಯಿಟ್ಟಿದೆ. 12 ಸ್ಥಾನಗಳ ಮೈತ್ರಿಕೂಟದ ಮತ್ತೊಬ್ಬ ಪ್ರಮುಖ ನಾಯಕ ನಿತೀಶ್ ಕುಮಾರ್ ಕೇಂದ್ರದಲ್ಲಿ ಮೂರು ಕ್ಯಾಬಿನೆಟ್ ಸ್ಥಾನಗಳ ಜತೆಗೆ ಬಿಹಾರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ ಎಂದು ವರದಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *