Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಭಗತ್‍ಸಿಂಗ್ ದೇಶದ ಜನರಲ್ಲಿ ಧೀರ ಹುತಾತ್ಮರಾಗಿ ಅಚ್ಚಳಿಯದೆ ಉಳಿದಿದ್ದಾರೆ‌: ಕಾ|| ಕೃಷ್ಣ

Facebook
Twitter
Telegram
WhatsApp

 

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.28. “ಭಗತ್‍ಸಿಂಗ್ ಎಂಬ ಹೆಸರು ಕೇಳಿದೊಡನೆ ನಮ್ಮ ಮೈ ನವಿರೇಳುತ್ತದೆ. ಬ್ರಿಟಿಷರ ಎದೆಯಲ್ಲಿ ನಡುಕ ಹುಟ್ಟಿಸಿದ, ಸಾವೇ ನಾಚುವಂತೆ ನಗುನಗುತಾ ನೇಣು ಕುಣಿಕೆಗೆ ಮುತ್ತಿಟ್ಟ, ಜನಸಾಮಾನ್ಯರ ಹೃದಯದಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿರುವ ಪ್ರಭಾವಶಾಲಿ ವ್ಯಕ್ತಿತ್ವದ ಅವರದು. ಇಂತಹ ಆದರ್ಶಪ್ರಾಯ ವ್ಯಕ್ತಿತ್ವಗಳನ್ನು ಹಾಗೂ ಉನ್ನತ ಮೌಲ್ಯಗಳನ್ನು ಅಳವಡಿಸಿಕೊಂಡು ಇಂದಿನ ಅನ್ಯಾಯ ಮತ್ತು ಅಕ್ರಮಗಳ ವಿರುದ್ಧ ಧ್ವನಿ ಎತ್ತುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಎಐಡಿವೈಓ ರಾಜ್ಯ ಉಪಾಧ್ಯಕ್ಷರಾದ ಕಾ|| ಕೃಷ್ಣ ಹೇಳಿದರು.

ನಗರದ ಭಗತ್‍ಸಿಂಗ್ ಉದ್ಯಾನವನದಲ್ಲಿ
ಭಗತ್‍ಸಿಂಗ್ ರ 117ನೇ ಜನ್ಮ ದಿನಾಚರಣೆಯ ಪ್ರಯುಕ್ತ ಸಾರ್ವಜನಿಕ ಸಭೆ ಮತ್ತು ಸಿನಿಮಾ ಪ್ರದರ್ಶನ ಭಾಗವಹಿಸಿ ಅವರು ಮಾತನಾಡಿದರು.

ಚಿಕ್ಕ ವಯಸ್ಸಿನಲ್ಲಿಯೇ ಭಗತ್‍ರಲ್ಲಿ ಸ್ವಾತಂತ್ರ್ಯದ ಕನಸಿನ ಬೀಜ ಮೊಳಕೆ ಹೊಡೆದಿತ್ತು. ಜಲಿಯನ್ ವಾಲಾ ಬಾಗ್ ಘಟನೆ ಅವರ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಿತು. ಬ್ರಿಟಿಷರ ದಬ್ಬಾಳಿಕೆ ವಿರುದ್ಧ ಅವರ ಮನಸ್ಸು ಸಿಡಿದು ನಿಂತಿತು. ದಿನಗಳುರುಳಿದಂತೆ ಸ್ವಾತಂತ್ರ್ಯದ ಬಗೆಗಿನ ಅವರ ಪರಿಕಲ್ಪನೆಗಳು ಪಕ್ವಗೊಳ್ಳುತ್ತಾ ಸಾಗಿತು. ತಾವು ಸಂಪೂರ್ಣವಾಗಿ ಸ್ವಾತಂತ್ರ್ಯ ಚಳುವಳಿಯಲ್ಲಿ ತೊಡಗಿಸಿಕೊಳ್ಳಬೇಕೆಂದು ನಿರ್ಧರಿಸಿದರು. ಅಂದು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಪಣತೊಟ್ಟ ರಾಜರಹಿತ ಪಂಥದ ಕ್ರಾಂತಿಕಾರಿಗಳು ಒಂದೆಡೆಯಾದರೆ, ಬ್ರಿಟಿಷರನ್ನು ಬೇಡುತ್ತಾ, ಓಲೈಸುತ್ತಾ ಕೇವಲ ರಾಜಕೀಯ ಸ್ವಾತಂತ್ರ್ಯವನ್ನು ಮಾತ್ರ ಬಯಸಿದ್ದ ರಾಜಿಪರ ಪಂಥದವರು ಮತ್ತೊಂದೆಡೆ ಇದ್ದರು. ಹೀಗಿದ್ದ ವಿಷಮ ಪರಿಸ್ಥಿತಿಯಲ್ಲಿ ಭಗತ್‍ಸಿಂಗ್ ‘ಹಿಂದೂಸ್ಥಾನ್ ರಿಪಬ್ಲಿಕನ್ ಆರ್ಮಿ’ಯನ್ನು ಸೇರಿದರು.

ಜಗತ್ತಿನ ವಿವಿಧ ದೇಶಗಳ ಕ್ರಾಂತಿಗಳ ಬಗ್ಗೆ ಅಧ್ಯಯನ ನಡೆಸಿ ‘ಸರ್ವರಿಗೂ ಸಮಾನತೆಯನ್ನು ಕೊಡಬಲ್ಲ ಸಮಾಜವಾದಿ ಸಮಾಜದ ಸ್ಥಾಪನೆಯೇ ನಮ್ಮ ಗುರಿ’ ಎಂದು ಪ್ರತಿಪಾದಿಸಿದರು. ತಮ್ಮ ಗುರಿಯನ್ನು ಸಾಧಿಸಲು ಬಿಡುವಿಲ್ಲದೆ ಶ್ರಮಿಸಿದರು.

ಭಯಭೀತಗೊಂಡ ಬ್ರಿಟಿಷರು ಭಗತ್‍ಸಿಂಗ್‍ರನ್ನು ‘ಸ್ಯಾಂಡರ್ಸ್ ಕೊಲೆ ಪ್ರಕರಣ’ದ ನೆಪ ಮಾಡಿ ಕೇವಲ 23ರ ವಯಸ್ಸಿನ ಭಗತ್‍ಸಿಂಗ್ ಮತ್ತವರ ಸಹಯೋಧರಾದ ಸುಖದೇವ್, ರಾಜ್‍ಗುರು ಅವರನ್ನು ಗಲ್ಲಿಗೇರಿಸಿದರು. ಭಗತ್‍ಸಿಂಗ್‍ರ ಸಾವಿನ ಸುದ್ದಿ ಇಡೀ ದೇಶದ ಜನರ ಅಂತಃಸಾಕ್ಷಿಯನ್ನು ಬಡಿದೆಬ್ಬಿಸಿತು. ಸ್ವಾತಂತ್ರ್ಯ ಚಳುವಳಿಗೆ ಧುಮುಕುವಂತೆ ಸಾವಿರಾರು ಯುವಜನರನ್ನು ಪ್ರೇರೇಪಿಸಿತು.

ಒಟ್ಟಾರೆಯಾಗಿ ಭಗತ್‍ಸಿಂಗ್ ಹೊತ್ತಿಸಿದ ಹೋರಾಟದ ಕಿಡಿ ಇಡೀ ದೇಶದ ತುಂಬಾ ಜ್ವಾಲೆಯಾಗಿ ಹಬ್ಬಿತು. ಅಂದಿನಿಂದ ಅವರು ಜನರೆದೆಯಲಿ ‘ಧೀರ ಹುತಾತ್ಮ’ನಾಗಿ ಅಚ್ಚಳಿಯದೆ ಉಳಿದಿದ್ದಾರೆ.” ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಎಐಯುಟಿಯುಸಿ ಮುಖಂಡರಾದ ಕಾ|| ರವಿಕುಮಾರ್ ಅವರು “ನಮ್ಮ ದೇಶ ಸ್ವತಂತ್ರಗೊಂಡು 76 ವರ್ಷಗಳು ಕಳೆದರೂ ಕಿತ್ತು ತಿನ್ನುವ ಬಡತನ, ಅನಕ್ಷರತೆ, ದುಬಾರಿ ಆರೋಗ್ಯ ವೆಚ್ಚ, ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರ, ಪ್ರಜಾತಾಂತ್ರಿಕ ಹಕ್ಕುಗಳ ದಮನ ಮುಂತಾದ ಸಮಸ್ಯೆಗಳಿಂದ ಜನರು ನಲುಗುತ್ತಿದ್ದಾರೆ. ಈ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಬೇಕಾದ ಯುವಜನರನ್ನು ಸದಾ ಮದ್ಯ ಮಾದಕ ವ್ಯಸನಗಳು ಮತ್ತು ಜಾತಿ ಧರ್ಮದಂತಹ ನಶೆಯಲ್ಲಿ ಮುಳುಗಿಸಲಾಗುತ್ತಿದೆ.

ಇನ್ನೊಂದೆಡೆ ಮಾನಸಿಕ ಖಿನ್ನತೆಯಿಂದ ಯುವಜನರ ಆತ್ಮಹತ್ಯೆ ಪ್ರಕರಣಗಳೂ ಸಹ ಹೆಚ್ಚುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಯುವ ಮನಸ್ಸುಗಳನ್ನು ಕೆಟ್ಟ ಪ್ರಭಾವಗಳಿಂದ ಹೊರ ತರಲು, ಉದಾತ್ತ ಮೌಲ್ಯಗಳು ಮತ್ತು ಆದರ್ಶಗಳನ್ನು ಅವರಲ್ಲಿ ಬೆಳೆಸಿ ಅವರಲ್ಲಿ ಒಂದು ಗಟ್ಟಿ ವ್ಯಕ್ತಿತ್ವ ಕಟ್ಟಿಕೊಡಲು ಭಗತ್‍ಸಿಂಗ್‍ರಂತಹ ಮಹಾನ್ ವ್ಯಕ್ತಿಗಳ ವಿಚಾರಗಳು ನಮಗೆ ದಾರೀದೀಪವಾಗಿವೆ.

ಆದ್ದರಿಂದ ನಮ್ಮ ಎಐಡಿವೈಓ ಯುವಜನ ಸಂಘ ಇಂದು ಎಲ್ಲೆಡೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಈ ಕಾರ್ಯಕ್ರಮದಲ್ಲಿ ಭಗತ್‍ಸಿಂಗ್‍ರನ್ನು ನೆನೆಯಲು, ಅವರ ವಿಚಾರಗಳಿಂದ ಸ್ಫೂರ್ತಿ ಪಡೆಯಲು, ಅಪೂರ್ಣಗೊಂಡಿರುವ ಅವರ ಕನಸನ್ನು ಈಡೇರಿಸಲು ನಾವೆಲ್ಲರೂ ಸಂಕಲ್ಪ ಕೈಗೊಳ್ಳೋಣ” ಎಂದರು.

ಈ ಸಂದರ್ಭದಲ್ಲಿ ನೆರೆದಿದ್ದ ನೂರಾರು ಮಂದಿ ಭಗತ್‍ಸಿಂಗ್‍ರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಅನಂತರ ಎಐಡಿವೈಓ ಕಚೇರಿಯಲ್ಲಿ ಭಗತ್‍ಸಿಂಗ್‍ರ ಜೀವನಾಧಾರಿತ “ದಿ ಲೆಜೆಂಡ್ ಆಫ್ ಭಗತ್‍ಸಿಂಗ್” ಸಿನಿಮಾ ಪ್ರದರ್ಶನ ನಡೆಸಲಾಯಿತು.

ಸಿನಿಮಾದ ನಂತರ ನಡೆದ ಸಂವಾದವನ್ನು ಎಐಡಿವೈಓ ನ ರಾಜ್ಯ ಉಪಾಧ್ಯಕ್ಷರಲ್ಲೊಬ್ಬರಾದ ಕಾ|| ವಿಜಯ್‍ಕುಮಾರ್ ನಡೆಸಿ ಕೊಟ್ಟರು. ಪವನ್, ಲೋಹಿತ್, ಪ್ರಸನ್ನ, ಆಂಜನೇಯ, ಪದ್ಮಶ್ರೀ, ಸುಷ್ಮಿತಾ, ಬಸವರಾಜು, ಅಭಿ, ವಿಶ್ವನಾಥ್ ಹಾಗೂ ಹಿರಿಯರಾದ ರಾಮಚಂದ್ರ ರಾವ್, ರಾಮಲಿಂಗಪ್ಪ, ಸೋಮಶೇಖರ್, ತಿಪ್ಪೇಸ್ವಾಮಿ, ಮೊದಲಾದವರು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಚಲಪತಿ ನಿಧನ

  ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 28 :ನಗರದ ತುರುವನೂರು ರಸ್ತೆ ನಿವಾಸಿ, ಶಿಕ್ಷಣ ಇಲಾಖೆ ನಿವೃತ್ತ ನೌಕರ ಚಲಪತಿ (66) ಅನಾರೋಗ್ಯದಿಂದ ಶನಿವಾರ ರಾತ್ರಿ ನಿಧನರಾದರು. ಮೃತರು ಪತ್ನಿ, ವಿಜಯಕರ್ನಾಟಕ ಚಿತ್ರದುರ್ಗ ಜಿಲ್ಲಾ ಪ್ರಸರಾಂಗ

ಮನು ಕುಲದ ಆಯಸ್ಸನ್ನು ಹೆಚ್ಚಿಸಿದ್ದು ವೈದ್ಯರು: ಸಿ.ಎಂ.ಸಿದ್ದರಾಮಯ್ಯ ಪ್ರಶಂಸೆ

ಮೈಸೂರು ಸೆ 28 : ವೈದ್ಯರು ಮತ್ತು ವೈದ್ಯಕೀಯ ಕ್ಷೇತ್ರ ಮನುಕುಲದ ಆಯಸ್ಸನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ ಎಂದು ಸಿ.ಎಂ.ಸಿದ್ದರಾಮಯ್ಯ ಪ್ರಶಂಸೆ ವ್ಯಕ್ತಪಡಿಸಿದರು.   ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಶತಮಾನೋತ್ಸವದ ಸಮಾರೋಪ

ಈ ಬಾರಿಯ ಬಿಗ್ ಬಾಸ್ ಗೆ ಹೋಗ್ತಿದ್ದಾರೆ ಈ ಸ್ಟಾರ್ ಗಳು : ಕನ್ಫರ್ಮ್ ಸುದ್ದಿ ಇದು..!

ಬೆಂಗಳೂರು : ಬಿಗ್ ಬಾಸ್ ಕನ್ನಡ‌ ಸೀಸನ್ 11ಗೆ ಕ್ಷಣಗಣನೆ ಶುರುವಾಗಿದೆ. ಬಿಗ್ ಬಾಸ್ ಮನೆಯೊಳಗೆ ಹೋಗೋದು ಯಾರು ಎಂಬ ಕುತೂಹಲ ಇಡೀ ಕರ್ನಾಟಕದ ಜನತೆಗೆ ಇದೆ. ಇಂದು ಸಂಜೆ ಅದಕ್ಕೆ ಕೊಂಚ ತೆರೆ

error: Content is protected !!