ಹಾಪರ್ (ಉತ್ತರ ಪ್ರದೇಶ).ಜುಲೈ.12 :ಕುಡಿಯಲು ನೀರು ಎಂದು ತಿಳಿದು ಆಸಿಡ್ ಸೇವಿಸಿದ ಮಹಿಳೆಯೊಬ್ಬರು ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದ ಹಾಪರ್ ಜಿಲ್ಲೆಯಲ್ಲಿ ನಡೆದಿದೆ.
ಶುಕ್ರವಾರ ಸಂಜೆ ಅರ್ಜುನ್ ನಗರ ಪ್ರದೇಶದ ಜ್ಯುವೆಲ್ಲರಿ (ಚಿನ್ನದ) ಅಂಗಡಿಯೊಂದಕ್ಕೆ ಮಹಿಳೆಯೊಬ್ಬರು ಒಡವೆ ಖರೀದಿಸಲು ಹೋಗಿದ್ದರು. ಈ ವೇಳೆ ಅವರಿಗೆ ತೀವ್ರ ಬಾಯಾರಿಕೆಯಾಗಿದ್ದರಿಂದ ಅಂಗಡಿಯವರ ಬಳಿ ಕುಡಿಯಲು ನೀರು ಕೇಳಿದ್ದಾರೆ. ತಕ್ಷಣವೇ ಜ್ಯುವೆಲ್ಲರಿ ಅಂಗಡಿಯ ನೌಕರನೊಬ್ಬ ಪಕ್ಕದಲ್ಲೇ ಇದ್ದ ಬೇಕರಿಯಿಂದ ಸೀಲ್ ಮಾಡಿದ ವಾಟರ್ ಬಾಟಲ್ ಒಂದನ್ನು ತಂದುಕೊಟ್ಟಿದ್ದಾನೆ.
ಮಹಿಳೆ ಆ ಬಾಟಲ್ನಲ್ಲಿ ನೀರಿದೆ ಎಂದು ಭಾವಿಸಿ, ಸೀಲ್ ತೆಗೆದು ತಕ್ಷಣವೇ ಒಂದು ಗುಟುಕು ಕುಡಿದಿದ್ದಾರೆ. ಆದರೆ ಅದರಲ್ಲಿ ನೀರಿರಲಿಲ್ಲ, ಬದಲಿಗೆ ತೀವ್ರ ತರಹದ ಆಸಿಡ್ ಇತ್ತು! ಆಸಿಡ್ ಬಾಯಿಗೆ ಹೋಗುತ್ತಿದ್ದಂತೆ ಮಹಿಳೆ ನೋವಿನಿಂದ ಕಿರುಚಾಡುತ್ತಾ, ಅದನ್ನು ಉಗುಳಲು ಅಂಗಡಿಯಿಂದ ಹೊರಗೆ ಓಡಿ ಬಂದಿದ್ದಾರೆ. ಈ ಸಂಪೂರ್ಣ ದೃಶ್ಯ ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಆಸಿಡ್ ಸೇವನೆಯಿಂದಾಗಿ ಮಹಿಳೆಯ ಆರೋಗ್ಯ ಸ್ಥಿತಿ ತೀವ್ರವಾಗಿ ಕ್ಷೀಣಿಸಿದ್ದು, ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಬೇಕರಿ ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ ಆ ಬೇಕರಿಯಿಂದ ಕೆಲವು ಆಸಿಡ್ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ.
ನಮಗೆ ತಿಳಿದ ಮಟ್ಟಿಗೆ ಆ ಬಾಟಲ್ ಸಂಪೂರ್ಣವಾಗಿ ಸೀಲ್ ಆಗಿತ್ತು. ಬೇಕರಿಯ ಫ್ರಿಡ್ಜ್ನಿಂದ ತಂದುಕೊಟ್ಟ ಬಾಟಲಿಯನ್ನು ನಾವು ಹಾಗೆಯೇ ಗ್ರಾಹಕರಿಗೆ ನೀಡಿದ್ದೆವು” ಎಂದು ಜ್ಯುವೆಲ್ಲರಿ ಅಂಗಡಿಯ ಮಾಲೀಕ ಧೇನು ತಿಳಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.







