ಚಿಕ್ಕೋಡಿ.ಜುಲೈ.10: ಆಟವಾಡುತ್ತಿದ್ದಾಗ ಸಂಭವಿಸಿದ ಘೋರ ದುರಂತವೊಂದರಲ್ಲಿ ಸೀರೆಯ ಜೋಕಾಲಿ ಕುತ್ತಿಗೆಗೆ ಬಿಗಿದು 14 ವರ್ಷದ ಶಾಲಾ ಬಾಲಕಿಯೊಬ್ಬಳು ಅಸುನೀಗಿರುವ ಹೃದಯವಿದ್ರಾವಕ ಘಟನೆ ನಿಪ್ಪಾಣಿ ತಾಲೂಕಿನ ಕೊಡನಿ ಗ್ರಾಮದಲ್ಲಿ ಜರುಗಿದೆ.
ಕೊಡನಿ ಗ್ರಾಮದ ನಿವಾಸಿಯಾದ 8ನೇ ತರಗತಿ ವಿದ್ಯಾರ್ಥಿನಿ ಶುಭ್ರಾ ಯುವರಾಜ್ ರಾವುತ್ ಪಾಟೀಲ್ ದುರ್ಮರಣಕ್ಕೀಡಾದ ದುರ್ದೈವಿ. ಮನೆಯಲ್ಲಿ ಸೀರೆಯಿಂದ ಕಟ್ಟಲಾಗಿದ್ದ ಜೋಕಾಲಿಯಲ್ಲಿ ಆಡುತ್ತಿದ್ದಾಗ ಆಕಸ್ಮಿಕವಾಗಿ ಸೀರೆ ಕುತ್ತಿಗೆಗೆ ಸಿಲುಕಿಕೊಂಡಿದ್ದೇ ಈ ಭೀಕರ ಅವಘಡಕ್ಕೆ ಕಾರಣ ಎನ್ನಲಾಗಿದೆ.
ಮಗಳನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದ್ದು, ಈ ಕರುಣಾಜನಕ ಘಟನೆಯಿಂದಾಗಿ ಇಡೀ ಕೊಡನಿ ಗ್ರಾಮವೇ ಕಣ್ಣೀರಿನಲ್ಲಿ ಮುಳುಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಈ ಕುರಿತು ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.









