ಬರೇಲಿ. ಜೂನ್.24 :ಉತ್ತರ ಪ್ರದೇಶದ ಬರೇಲಿ ಸೆಂಟ್ರಲ್ ಜೈಲಿನಿಂದ ಅತ್ಯಾಚಾರ ಪ್ರಕರಣದ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿಯೊಬ್ಬ ಪರಾರಿಯಾಗಿದ್ದಾನೆ. ಕಾವಲು ಕಾಯಬೇಕಾಗಿದ್ದ ಪೊಲೀಸರು ಮೊಬೈಲ್ ನಲ್ಲಿ ‘ರೀಲ್ಸ್’ ನೋಡುವುದರಲ್ಲಿ ಮುಳುಗಿದ್ದಾಗ, ಇದನ್ನು ಬಳಸಿಕೊಂಡ ಕೈದಿ ಜೈಲಿನ ಗೋಡೆ ಹತ್ತಿ ಓಡಿಹೋಗಿದ್ದಾನೆ ಎಂದು ವರದಿ ವರದಿಯಾಗಿದೆ.
ಪರಾರಿಯಾದ ಕೈದಿಯನ್ನು ಅಮ್ರೋಹಾ ಮೂಲದ 22 ವರ್ಷದ ದಿನೇಶ್ ಎಂದು ಗುರುತಿಸಲಾಗಿದೆ. ಈತ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ದೋಷಿಯಾಗಿದ್ದನು.
ಗಂಭೀರ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಜೈಲಿನ 11 ಸಿಬ್ಬಂದಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಮಹಾನಿರ್ದೇಶಕರು (ಜೈಲುಗಳು) ಪಿ.ಸಿ. ಮೀನಾ ಅವರು ಜೈಲರ್ ನೀರಜ್ ಕುಮಾರ್ ಮತ್ತು ಡೆಪ್ಯುಟಿ ಜೈಲರ್ ವಂದನಾ ಚೌಧರಿ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಅಲ್ಲದೆ, ಹಿರಿಯ ಜೈಲು ಅಧೀಕ್ಷಕ ಅವಿನಾಶ್ ಗೌತಮ್ ವಿರುದ್ಧ ಕಠಿಣ ಇಲಾಖಾ ಕ್ರಮಕ್ಕೆ ಶಿಫಾರಸು ಮಾಡಲಾಗಿದ್ದು, ಇತರ 7 ಕೆಳಹಂತದ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.ಕರ್ತವ್ಯ ಲೋಪ ಎಸಗಿದ ಸಿಬ್ಬಂದಿ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ,” ಎಂದು ಡಿಜಿ ಪಿ.ಸಿ. ಮೀನಾ ತಿಳಿಸಿದ್ದಾರೆ.
ದಿನೇಶ್ ಸೇರಿದಂತೆ 45 ಕೈದಿಗಳನ್ನು ಜೈಲಿಗೆ ಹೊಂದಿಕೊಂಡಿರುವ ಕೃಷಿ ಭೂಮಿಯಲ್ಲಿ ಕೆಲಸ ಮಾಡಲು ಕರೆದೊಯ್ಯಲಾಗಿತ್ತು. ಇವರ ಮೇಲೆ ನಿಗಾ ಇಡಲು 10 ಕಾವಲುಗಾರರನ್ನು ನಿಯೋಜಿಸಲಾಗಿತ್ತು. ಆದರೆ, ಕರ್ತವ್ಯದ ಅವಧಿಯಲ್ಲಿ ಕಾವಲುಗಾರರು ತಮ್ಮ ಮೊಬೈಲ್ಗಳಲ್ಲಿ ಸಾಮಾಜಿಕ ಜಾಲತಾಣಗಳ ‘ರೀಲ್ಸ್’ ವೀಕ್ಷಿಸುತ್ತಾ ಸಂಪೂರ್ಣ ಮೈಮರೆತಿದ್ದರು. ಇದೇ ಭದ್ರತಾ ಲೋಪವನ್ನು ಬಂಡವಾಳ ಮಾಡಿಕೊಂಡ ದಿನೇಶ್, ಜೈಲಿನ ಗೋಡೆ ಹತ್ತಿ ಅಲ್ಲಿಂದ ಪರಾರಿಯಾಗಿದ್ದಾನೆ. ಸದ್ಯ ಪೊಲೀಸರು ಆತನ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿದ್ದು, ಅಮ್ರೋಹಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಬರೇಲಿ ಸೆಂಟ್ರಲ್ ಜೈಲಿನಲ್ಲಿ ಇಂತಹ ಘಟನೆ ನಡೆಯುತ್ತಿರುವುದು ಇದು ಎರಡನೇ ಬಾರಿಯಾಗಿದೆ. 2024ರ ಅಕ್ಟೋಬರ್ನಲ್ಲೂ ಹರ್ಪಾಲ್ ಎಂಬ ಕೊಲೆ ಆರೋಪಿ ಇದೇ ರೀತಿ ಕೃಷಿ ಭೂಮಿಯಲ್ಲಿ ಕೆಲಸ ಮಾಡುತ್ತಿದ್ದಾಗ ಜೈಲಿನಿಂದ ತಪ್ಪಿಸಿಕೊಂಡಿದ್ದನು.
ಅತ್ಯಂತ ಕುಖ್ಯಾತ ಹಾಗೂ ಹೈಪ್ರೊಫೈಲ್ ಅಪರಾಧಿಗಳನ್ನು ಇರಿಸಲಾಗಿರುವ ಈ ಹೈ-ಸೆಕ್ಯುರಿಟಿ ಜೈಲಿನಲ್ಲಿ ಸಿಸಿಟಿವಿ ಕ್ಯಾಮೆರಾಗಳು ಮತ್ತು ಪೊಲೀಸ್ ಚೌಕಿಗಳಿದ್ದರೂ, ಪದೇ ಪದೇ ಇಂತಹ ಘಟನೆಗಳು ಮರುಕಳಿಸುತ್ತಿರುವುದು ಜೈಲು ಇಲಾಖೆಯ ಭದ್ರತಾ ವ್ಯವಸ್ಥೆಯನ್ನು ಸಾರ್ವಜನಿಕವಾಗಿ ನಗೆಪಾಟಲಿಗೀಡು ಮಾಡಿದೆ. ಘಟನೆಯ ಕುರಿತು ಸುದೀರ್ಘ ತನಿಖೆ ಮುಂದುವರಿದಿದ್ದು, ವರದಿ ಬಂದ ಬಳಿಕ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











