ಬೆಂಗಳೂರು.ಜೂನ್.20ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಅನರ್ಹರ ಪಾಲಾಗುತ್ತಿರುವುದನ್ನು ತಡೆಯಲು ಮತ್ತು ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಈಗ ನಿಯಮಗಳ ಮರುಪರಿಶೀಲನೆಗೆ ಬಿಗ್ ಪ್ಲಾನ್ ರೂಪಿಸಲಾಗಿದೆ. ಯೋಜನೆಗಳ ದುರುಪಯೋಗವನ್ನು ತಪ್ಪಿಸಿ, ಕೇವಲ ಅರ್ಹರಿಗೆ ಮಾತ್ರ ಇದರ ಸೌಲಭ್ಯ ಸಿಗುವಂತೆ ಮಾಡಲು ಸರ್ಕಾರ ಕಟ್ಟುನಿಟ್ಟಿನ ಕ್ರಮಗಳಿಗೆ ಮುಂದಾಗಿದೆ.
ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗಳ ಫಲಾನುಭವಿಗಳ ದಾಖಲೆಗಳನ್ನು ಮರುಪರಿಶೀಲಿಸಲು ಅಧಿಕಾರಿಗಳು ನೇರವಾಗಿ ಮನೆ ಮನೆಗೆ ತೆರಳಿ ಸರ್ವೆ ನಡೆಸಲಿದ್ದಾರೆ.

ಫಲಾನುಭವಿಗಳು ತಮ್ಮ ರೇಷನ್ ಕಾರ್ಡ್, ಆಧಾರ್, ವೋಟರ್ ಐಡಿ, ಇ-ಕೆವೈಸಿ ಆಗಿರುವ ಬ್ಯಾಂಕ್ ಪಾಸ್ ಬುಕ್, ಆದಾಯ ಪ್ರಮಾಣ ಪತ್ರ ಹಾಗೂ ಐಟಿ/ಜಿಎಸ್ಟಿ ಪಾವತಿಯ ವಿವರಗಳೂ ಸೇರಿದಂತೆ ಒಟ್ಟು 10 ಪ್ರಮುಖ ಅಂಶಗಳ ಮಾಹಿತಿಯನ್ನು ಒದಗಿಸಬೇಕು. ತಾವು ನೀಡಿದ ಮಾಹಿತಿ ಸುಳ್ಳಾಗಿದ್ದರೆ ಕಾನೂನು ಕ್ರಮಕ್ಕೆ ಬದ್ಧರಾಗಿರುವುದಾಗಿ ಸ್ವಯಂ ಘೋಷಣೆ ಮಾಡಿಕೊಳ್ಳಬೇಕಾಗುತ್ತದೆ.
ಹೊರರಾಜ್ಯದ ಮತದಾರರು ಹಾಗೂ ಶ್ರೀಮಂತರು ಈ ಯೋಜನೆಗಳ ಲಾಭ ಪಡೆಯುವುದನ್ನು ತಡೆಯಲಾಗುವುದು. ಈಗಾಗಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಆರ್ಥಿಕವಾಗಿ ಸಬಲರಾಗಿರುವವರು ಸ್ವಯಂಪ್ರೇರಿತರಾಗಿ ಗ್ಯಾರಂಟಿ ಯೋಜನೆಗಳನ್ನು ಬಿಟ್ಟುಕೊಡಬೇಕೆಂದು ಕರೆ ನೀಡಿದ್ದಾರೆ.
ಉಚಿತ ಬಸ್ ಪ್ರಯಾಣದ ದುರುಪಯೋಗ ತಡೆಯಲು ಸ್ಮಾರ್ಟ್ ಕಾರ್ಡ್ ಹಾಗೂ ಸ್ಕ್ಯಾನಿಂಗ್ ವ್ಯವಸ್ಥೆಯನ್ನು ತರಲು ಆಲೋಚಿಸಲಾಗುತ್ತಿದೆ. ಪ್ರವಾಸ ಹಾಗೂ ದೇವಸ್ಥಾನಗಳಿಗೆ ಅನಗತ್ಯವಾಗಿ ಅಲೆಯುವವರಿಗಿಂತ ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು ಮತ್ತು ಗಾರ್ಮೆಂಟ್ಸ್ ನೌಕರರಂತಹ ನೈಜ ದುಡಿಯುವ ವರ್ಗಕ್ಕೆ ಇದರ ಸೌಲಭ್ಯ ಸಿಗಬೇಕು ಎಂಬ ಒತ್ತಾಯ ಕೇಳಿಬಂದಿದೆ. ಯೋಜನೆಗಳನ್ನು ದಿಢೀರನೆ ರದ್ದುಗೊಳಿಸಿದರೆ ಸಾರ್ವಜನಿಕ ಆಕ್ರೋಶ ಎದುರಾಗಬಹುದು ಎಂಬ ಕಾರಣಕ್ಕೆ, ಸರ್ಕಾರವು ಅತ್ಯಂತ ಜಾಗರೂಕತೆಯಿಂದ ಮರುಪರಿಶೀಲನೆ ಪ್ರಕ್ರಿಯೆಯ ಮೂಲಕ ಅನರ್ಹರನ್ನು ಪಟ್ಟಿಯಿಂದ ಹೊರಹಾಕಲು ಸಜ್ಜಾಗಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












