ಸುದ್ದಿಒನ್,ಬೆಂಗಳೂರು,ಜೂ.1: ದೀರ್ಘಾವಧಿಯ ಬೇಸಿಗೆ ರಜೆಯ ಮಜಾ ಮುಗಿಸಿ, ಮೊಬೈಲ್-ಟಿವಿ ಲೋಕದಿಂದ ಹೊರಬಂದಿರುವ ವಿದ್ಯಾರ್ಥಿಗಳಿಗೆ ಇಂದಿನಿಂದ ಮತ್ತೆ ‘ಶಾಲೆ’ಯ ಸಂಭ್ರಮ ಶುರುವಾಗಿದೆ.
ರಾಜ್ಯಾದ್ಯಂತ 2026-27ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಇಂದಿನಿಂದಲೇ ಅಧಿಕೃತ ಚಾಲನೆ ಸಿಕ್ಕಿದ್ದು, ಸರ್ಕಾರಿ ಶಾಲೆಗಳ ಅಂಗಳದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಸ್ಕೂಲ್ಗೆ ಹೆಜ್ಜೆ ಇಟ್ಟ ಮಕ್ಕಳನ್ನು ಶಿಕ್ಷಕರು ಹೂವು ಕೊಟ್ಟು, ಸಿಹಿ ತಿನಿಸಿ ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ.
ಇಷ್ಟು ದಿನ ಮನೆಯಲ್ಲೇ ಕಾಲ ಕಳೆದಿದ್ದ ಪುಟಾಣಿಗಳಿಗೆ ಶಾಲೆಯ ಬಗ್ಗೆ ಇರುವ ಭಯವನ್ನು ಹೋಗಲಾಡಿಸಲು ಶಿಕ್ಷಣ ಇಲಾಖೆ ಈ ಬಾರಿ ವಿಶೇಷ ಪ್ಲಾನ್ ಮಾಡಿದೆ. ಶಾಲಾ ಆವರಣವನ್ನು ಸುಂದರವಾಗಿ ಸಿಂಗರಿಸಿ, ತೋರಣಗಳನ್ನು ಕಟ್ಟಿ ಇಂದಿನ ಮೊದಲ ದಿನವನ್ನು “ಮಕ್ಕಳ ಹಬ್ಬ” ಎಂದು ಆಚರಿಸಲಾಗುತ್ತಿದೆ. ಶಾಲೆಗೆ ಬಂದ ಮೊದಲ ದಿನವೇ ವಿದ್ಯಾರ್ಥಿಗಳಿಗೆ ನೆಚ್ಚಿನ ವಿಶೇಷ ಬಿಸಿಯೂಟದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

ಈ ಬಾರಿ ಶೈಕ್ಷಣಿಕ ವರ್ಷದ ಆರಂಭದಲ್ಲೇ ಮಕ್ಕಳಿಗೆ ಪುಸ್ತಕ ಸಿಗುವಂತೆ ಮಾಡಲು ಸರ್ಕಾರ ರಾಕೆಟ್ ವೇಗದಲ್ಲಿ ಕೆಲಸ ಮಾಡಿದೆ. ಕರ್ನಾಟಕ ಪಠ್ಯಪುಸ್ತಕ ಸಂಘದ ಮಾಹಿತಿ ಪ್ರಕಾರ ಒಟ್ಟು ಬೇಡಿಕೆ: 9.34 ಕೋಟಿ ಪಠ್ಯಪುಸ್ತಕಗಳು, ಈಗಾಗಲೇ ವಿತರಣೆಯಾಗಿರುವುದು: 8.50 ಕೋಟಿಗೂ ಅಧಿಕ (ಶೇ. 90.77) ಪುಸ್ತಕಗಳು ಮೊದಲ ಭಾಗದ ಪುಸ್ತಕಗಳು ಈಗಾಗಲೇ ರಾಜ್ಯದ ಬಹುತೇಕ ಎಲ್ಲಾ ಶಾಲೆಗಳನ್ನು ತಲುಪಿವೆ. ಕೇವಲ ಅಲ್ಪಸಂಖ್ಯಾತ ಶಾಲೆಗಳ ಹಾಗೂ ಎರಡನೇ ಭಾಗದ ಕೆಲವು ಪುಸ್ತಕಗಳ ವಿತರಣೆ ಮಾತ್ರ ಬಾಕಿ ಇದೆ ಎಂದು ಸಂಘದ ವ್ಯವಸ್ಥಾಪಕ ನಿರ್ದೇಶಕರಾದ ಮಾದೇಗೌಡರು ಮಾಹಿತಿ ನೀಡಿದ್ದಾರೆ.
ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಮೊದಲ ದಿನವೇ ಒಂದು ಜೊತೆ ಹೊಸ ಸಮವಸ್ತ್ರವನ್ನು (Uniform) ನೀಡಲಾಗುತ್ತಿದೆ. ಕಳೆದ ವರ್ಷದ ವಿದ್ಯಾರ್ಥಿಗಳ ಸಂಖ್ಯೆಯನ್ನು ಆಧರಿಸಿ ಈಗಾಗಲೇ ಬಟ್ಟೆಗಳನ್ನು ಪೂರೈಸಲಾಗಿದೆ. ಆದರೆ, ಶೂ ಮತ್ತು ಸಾಕ್ಸ್ ವಿತರಣೆಗೆ ಸಂಬಂಧಿಸಿದಂತೆ ಸರ್ಕಾರದ ಅಧಿಕೃತ ಆದೇಶ ಇನ್ನೂ ಬರಬೇಕಿರುವುದರಿಂದ, ಅವುಗಳಿಗಾಗಿ ವಿದ್ಯಾರ್ಥಿಗಳು ಇನ್ನೂ ಕೆಲವು ದಿನ ಕಾಯಬೇಕಾಗಬಹುದು ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















