ಸುದ್ದಿಒನ್,ಮಂಡ್ಯ,ಮೇ.19: ಮಕ್ಕಳನ್ನು ಸಣ್ಣ ವಿಷಯಕ್ಕೆ ಗದರಿಸುವ ಮುನ್ನ ಪೋಷಕರು ನೂರು ಬಾರಿ ಯೋಚಿಸಬೇಕಾದ ಆಘಾತಕಾರಿ ಘಟನೆಯೊಂದು ಮಂಡ್ಯ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ತಾಯಿ ಬೈದಿದ್ದಕ್ಕೆ ತೀವ್ರ ಬೇಸರಗೊಂಡ ಇಬ್ಬರು ಅಪ್ರಾಪ್ತ ಸಹೋದರಿಯರು ಕಣ್ಣೀರಿನ ವಿದಾಯದ ಪತ್ರ ಬರೆದಿಟ್ಟು ಮನೆಯಿಂದ ದಿಢೀರ್ ನಾಪತ್ತೆಯಾಗಿದ್ದಾರೆ. ಈ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕಾಳೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕಾಳೇನಹಳ್ಳಿ ನಿವಾಸಿ ರಾಮಚಂದ್ರ ಎಂಬುವರ ಪುತ್ರಿಯರಾದ ಸುಜಾತಾ (16) ಮತ್ತು ರುಕ್ಮಿಣಿ (14) ಕಾಣೆಯಾದ ದುರ್ದೈವಿಗಳಾಗಿದ್ದಾರೆ. ಇಬ್ಬರೂ ಅಪ್ರಾಪ್ತ ವಯಸ್ಸಿನವರಾಗಿದ್ದು, ತಾಯಿಯ ಕೋಪಕ್ಕೆ ನೊಂದು ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ಮನೆ ಬಿಟ್ಟು ಹೊರಡುವ ಮುನ್ನ ಈ ಅಕ್ಕ-ತಂಗಿ ತಮ್ಮ ಹೆತ್ತವರಿಗೆ ಬರೆದಿಟ್ಟಿರುವ ಪತ್ರ ಈಗ ಎಲ್ಲರ ಕಣ್ಣಲ್ಲಿ ನೀರು ತರಿಸುತ್ತಿದೆ. ಅಮ್ಮ-ಅಪ್ಪ ನಮ್ಮನ್ನು ಕ್ಷಮಿಸಿಬಿಡಿ ನಿಮ್ಮ ಕಣ್ಣೆದುರೇ ನಮಗೆ ಪ್ರಾಣ ಬಿಡಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿಯೇ ನಾವು ನಿಮ್ಮಿಂದ ತುಂಬಾ ದೂರ ಹೋಗಿ ಸಾಯುತ್ತಿದ್ದೇವೆ, ದಯವಿಟ್ಟು ಕ್ಷಮಿಸಿ ಎಂದು ಪತ್ರದಲ್ಲಿ ಬರೆದಿದ್ದಾರೆ.
ಕೈಗೆ ಸಿಕ್ಕ ಮಕ್ಕಳ ಡೆತ್ನೋಟ್ ನೋಡಿ ಪೋಷಕರ ತಲೆಮೇಲೆ ಆಕಾಶವೇ ಉರುಳಿಬಿದ್ದಂತಾಗಿದೆ. ಮಕ್ಕಳ ಜೀವಕ್ಕೆ ಏನಾದರೂ ಅಪಾಯ ಸಂಭವಿಸಿರಬಹುದು ಎಂಬ ಭಯದಿಂದ ತಕ್ಷಣವೇ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಗೆ ಧಾವಿಸಿದ್ದಾರೆ. ಹೆಣ್ಣುಮಕ್ಕಳನ್ನು ಹೇಗಾದರೂ ಮಾಡಿ ಹುಡುಕಿಕೊಡಿ ಎಂದು ಪೊಲೀಸರ ಮುಂದೆ ಪೋಷಕರು ಕಣ್ಣೀರು ಹಾಕಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ನಾಪತ್ತೆಯಾಗಿರುವ ಅಪ್ರಾಪ್ತ ಸಹೋದರಿಯರ ಪತ್ತೆಗಾಗಿ ವಿಶೇಷ ತಂಡ ರಚಿಸಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.















