ಸುದ್ದಿಒನ್,ಬೆಂಗಳೂರು,ಮೇ.11: ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ಭೇಟಿಯ ಸಂದರ್ಭದಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿರುವ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ (NIA) ತನಿಖೆ ನಡೆಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿಗಳು ಸಂಚರಿಸುವ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿ ಹಾಗೂ ವೈಯರ್ಗಳು ಪತ್ತೆಯಾಗಿರುವುದು ಆತಂಕಕಾರಿ. ಅಲ್ಲಿ ಸರಿಯಾದ ತಪಾಸಣೆ (Briskning) ಏಕೆ ನಡೆದಿಲ್ಲ? ಯಾರು ಇದನ್ನು ತಂದಿಟ್ಟರು ಎಂಬ ಬಗ್ಗೆ ಸರ್ಕಾರ ಉತ್ತರಿಸಬೇಕು ಎಂದರು.

ಪ್ರಧಾನಿ ಭೇಟಿಯಂತಹ ತುರ್ತು ಸಮಯದಲ್ಲಿ 100ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಅಗತ್ಯವೇನಿತ್ತು? ಇಂತಹ ನಿರ್ಧಾರಗಳು ಪೊಲೀಸ್ ಇಲಾಖೆಯನ್ನು ದುರ್ಬಲಗೊಳಿಸುತ್ತವೆ ಮತ್ತು ಅಧಿಕಾರಿಗಳಲ್ಲಿ ಗೊಂದಲ ಮೂಡಿಸುತ್ತವೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ಸರ್ಕಾರವು ಪ್ರಧಾನಿಯವರನ್ನು ಕೇವಲ ಒಂದು ಪಕ್ಷದ ನಾಯಕರಂತೆ ನೋಡುತ್ತಿದೆಯೇ ಹೊರತು ದೇಶದ ಪ್ರಧಾನಿ ಎಂದು ಗೌರವಿಸುತ್ತಿಲ್ಲ, ವಿಶ್ವದಲ್ಲೇ ಅತಿ ಹೆಚ್ಚು ರಿಸ್ಕ್ ಇರುವ ನಾಯಕ ನರೇಂದ್ರ ಮೋದಿ ಅವರು. ಬೇರೆ ದೇಶಗಳು ಅವರ ಭದ್ರತೆಗೆ ಅಷ್ಟೊಂದು ಕಾಳಜಿ ವಹಿಸುವಾಗ, ನಮ್ಮದೇ ರಾಜ್ಯ ಸರ್ಕಾರಕ್ಕೆ ಅವರ ರಕ್ಷಣೆ ಬಗ್ಗೆ ಕಾಳಜಿ ಇಲ್ಲವೇ?” ಎಂದು ಅವರು ಪ್ರಶ್ನಿಸಿದರು.


















