ದೇಶಾದ್ಯಂತ ತೀವ್ರ ಬಿಸಿಲಿನಿಂದ ಬಳಲುತ್ತಿರುವ ಜನತೆಗೆ ಹವಾಮಾನ ಇಲಾಖೆಯಿಂದ ಸ್ವಲ್ಪ ಮಟ್ಟಿನ ಹಿತವಾದ ಸುದ್ದಿ ಲಭ್ಯವಾಗಿದೆ. ಈ ಬಾರಿ ನೈರುತ್ಯ ಮುಂಗಾರು ಸಾಮಾನ್ಯಕ್ಕಿಂತ ಮುಂಚಿತವಾಗಿ ಪ್ರವೇಶಿಸುವ ಸಾಧ್ಯತೆ ಇದ್ದು, ಮೇ 14ರಿಂದ 16ರೊಳಗೆ ಅಂಡಮಾನ್-ನಿಕೋಬಾರ್ ದ್ವೀಪ ಪ್ರದೇಶಕ್ಕೆ ಮುಂಗಾರು ತಲುಪಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಸಾಮಾನ್ಯವಾಗಿ ಜೂನ್ 1ರ ವೇಳೆಗೆ ಕೇರಳ ಪ್ರವೇಶಿಸುವ ಮುಂಗಾರು, ಈ ಬಾರಿ ಮೇ ತಿಂಗಳ ಕೊನೆಯ ವಾರದಲ್ಲೇ ಕೇರಳ ತಲುಪುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ಮೇ ತಿಂಗಳಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ನಿರೀಕ್ಷೆ ವ್ಯಕ್ತವಾಗಿದೆ.ಈಶಾನ್ಯ, ಕೇಂದ್ರ ಮತ್ತು ಪೂರ್ವ ಭಾರತದ ಹಲವು ಪ್ರದೇಶಗಳಲ್ಲಿ ತಾಪಮಾನ ತಗ್ಗುವ ಸಾಧ್ಯತೆ ಇದ್ದರೂ, ಹಿಮಾಲಯದ ಪರ್ವತ ಪ್ರದೇಶಗಳ ಸುತ್ತಮುತ್ತ ಉಷ್ಣ ಮಾರುತಗಳು ಹೆಚ್ಚು ಬೀಸುವ ಸಾಧ್ಯತೆ ಇದೆ. ಜೊತೆಗೆ, ದೇಶದ ಹಲವು ಭಾಗಗಳಲ್ಲಿ ಉಷ್ಣಾಂಶ ಸಾಮಾನ್ಯಕ್ಕಿಂತ ಹೆಚ್ಚಾಗಿಯೇ ಮುಂದುವರಿಯುವ ಸಾಧ್ಯತೆ ಇರುವುದಾಗಿ ಇಲಾಖೆ ತಿಳಿಸಿದೆ.

ಇದರ ನಡುವೆ, ಪೆಸಿಫಿಕ್ ಸಾಗರದ ಮೇಲ್ಮೈ ನೀರು ಹೆಚ್ಚಾಗಿ ಬಿಸಿಯಾಗುವುದರಿಂದ ಉಂಟಾಗುವ ಎಲ್ ನಿನೊ ಪರಿಸ್ಥಿತಿ ಮುಂಗಾರು ಮಳೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ಒಟ್ಟಾರೆ ಮಳೆಯ ಪ್ರಮಾಣ ವಾಡಿಕೆಗಿಂತ ಕಡಿಮೆಯಾಗುವ ಆತಂಕವೂ ವ್ಯಕ್ತವಾಗಿದೆ.



















