ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ನಟ ದರ್ಶನ್ ತೂಗುದೀಪ ಅವರು ಮತ್ತೊಮ್ಮೆ ಜಾಮೀನು ಕೋರಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಹಿರಿಯ ವಕೀಲ ರಂಜಿತ್ ರೋಹ್ಟಗಿ ಮೂಲಕ ಜಾಮೀನು ಅರ್ಜಿ ಸಲ್ಲಿಸಿರುವುದಾಗಿ ಮಾಹಿತಿ ಲಭ್ಯವಾಗಿದೆ.ಈ ಪ್ರಕರಣದಲ್ಲಿ ದರ್ಶನ್ ಈಗಾಗಲೇ ಹಲವು ಬಾರಿ ಜಾಮೀನುಗಾಗಿ ಅರ್ಜಿ ಸಲ್ಲಿಸಿದ್ದು, ಅವರ ಕಾನೂನು ಹೋರಾಟ ಮುಂದುವರಿದಿದೆ.
2024ರ ಜೂನ್ 11ರಂದು ಮೈಸೂರಿನಲ್ಲಿ ಮೊದಲ ಬಾರಿಗೆ ಬಂಧಿಸಲ್ಪಟ್ಟ ದರ್ಶನ್ ಅವರನ್ನು ಜಿಮ್ನಿಂದ ವಶಕ್ಕೆ ಪಡೆದು ನಂತರ ಬೆಂಗಳೂರಿಗೆ ಕರೆತರಲಾಗಿತ್ತು.ಅಕ್ಟೋಬರ್ 2024ರಲ್ಲಿ ಆರೋಗ್ಯ ಕಾರಣ ನೀಡಿ ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ ಅವರು, ಡಿಸೆಂಬರ್ನಲ್ಲಿ ಜಾಮೀನು ಪಡೆಯಲು ಯಶಸ್ವಿಯಾಗಿದ್ದರು. ಆದರೆ ರಾಜ್ಯ ಸರ್ಕಾರ ಈ ಜಾಮೀನನ್ನು ಪ್ರಶ್ನಿಸಿದ ಹಿನ್ನೆಲೆ, 2025ರಲ್ಲಿ ಸುಪ್ರೀಂಕೋರ್ಟ್ ಜಾಮೀನನ್ನು ರದ್ದುಗೊಳಿಸಿತ್ತು. ಇದರಿಂದ ದರ್ಶನ್ ಮತ್ತೆ ಜೈಲು ಸೇರಬೇಕಾಯಿತು.

ಸುಪ್ರೀಂ ಆದೇಶದಂತೆ 2025ರ ಆಗಸ್ಟ್ 14ರಂದು ಮತ್ತೆ ಬಂಧನಕ್ಕೊಳಗಾದ ದರ್ಶನ್ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು. ಈ ನಡುವೆ, ಜಾಮೀನು ಅವಧಿಯಲ್ಲಿ ತಮ್ಮ ‘ಡೆವಿಲ್’ ಸಿನಿಮಾದ ಚಿತ್ರೀಕರಣವನ್ನು ಅವರು ಪೂರ್ಣಗೊಳಿಸಿದ್ದರು ಎನ್ನಲಾಗಿದೆ.ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸುಮಾರು ಎಂಟೂವರೆ ತಿಂಗಳಿನಿಂದ ಇದ್ದ ದರ್ಶನ್, ಮತ್ತೆ ಜಾಮೀನು ಪಡೆಯಲು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಮೇ 4ರಂದು ಈ ಅರ್ಜಿ ವಿಚಾರಣೆಗೆ ಬರಲಿದೆ. ಜಾಮೀನಿಗೆ ಸಂಬಂಧಿಸಿದ ಅವರ ಅರ್ಜಿಯ ವಿವರಗಳು ಇನ್ನಷ್ಟೇ ಬಹಿರಂಗವಾಗಬೇಕಿದೆ. ದರ್ಶನ್ ಅವರ ಮುಂದಿನ ಕಾನೂನು ಹಾದಿ ಏನೆಂಬುದು ಮೇ 4ರ ವಿಚಾರಣೆಯ ಬಳಿಕ ಸ್ಪಷ್ಟವಾಗಲಿದೆ.



















