ದಾವಣಗೆರೆ: ಲೆಕ್ಕಕೊಡಿ ಅಭಿಯಾನ ಶುರುವಾದ ಮೇಲೆ ಪಂಚಮಸಾಲಿ ಮಠದಲ್ಲಿ ಏನೇನೋ ಬೆಳವಣಿಗೆಗಳು ನಡೆದಿವೆ. ಪೀಠಾಧ್ಯಕ್ಷರಾದ ವಚನಾನಂದ ಶ್ರೀಗಳನ್ನೇ ಟ್ರಸ್ಟಿಗಳು ಉಚ್ಛಾಟನೆ ಮಾಡಿದ್ದಾರೆ. ಇಂದು ಕೂಡ ಈ ಲೆಕ್ಕದ ವಿಚಾರಕ್ಕೇನೆ ಸಾಕಷ್ಟು ಗಲಾಟೆಯಾಗಿದೆ. ಮಠದ ಆವರಣದಲ್ಲಿ ನಡೆದ ಹೈಡ್ರಾಮಾ ತಪ್ಪಿಸಲು ಪೊಲೀಸರು ಹರಸಾಹಸ ಪಡುವಂತೆ ಆಗಿದೆ. ಮಠದ ಆಡಳಿತ ಮಂಡಳಿಯು ಭಕ್ತರ ದೇಣಿಗೆ ಮತ್ತು ಸರ್ಕಾರ್ ಅನುದಾನದಲ್ಲಿ ಭಾರಿ ಅವ್ಯವಹಾರ ನಡೆಸಿದೆ ಎಂದು ವಚನಾನಂದ ಸ್ವಾಮೀಜಿಗಳು ಗಂಭೀರ ಆರೋಪ ಮಾಡಿದ್ದಾರೆ.
ಸ್ವಾಮೀಜಿಗಳ ಆರೋಪಕ್ಕೆ ಪ್ರತಿಯಾಗಿ ಟ್ರಸ್ಟ್ ನ ಪ್ರಧಾನ ಧರ್ಮದರ್ಶು ಬಿ ಸಿ ಉಮಾಪತಿ ಅವರು 2008ರಿಂದ 2026ರವರೆಗಿನ ಸಂಪೂರ್ಣ ಲೆಕ್ಕಪತ್ರಗಳ ಬ್ಯಾಗ್ ಹಿಡಿದು ಮಠಕ್ಕೆ ಆಗಮಿಸಿದರು. ನಾವೂ ಪಾರದರ್ಶಕವಾಗಿದ್ದೇವೆ. ಶ್ರೀಗಳು ಉಚ್ಛಾಟನೆಯ ವಿಷಯವನ್ನು ದಾರಿ ತಪ್ಪಿಸಲು ಲೆಕ್ಕದ ನಾಟಕವಾಡುತ್ತಿದ್ದಾರೆ. ಈಗ ಲೆಕ್ಕ ನೀಡದ್ದೇವೆ. ಶ್ರೀಗಳು ಕೂಡಲೇ ಮಠವನ್ನು ಬಿಟ್ಟು ಹೋಗಲಿ ಎಂದು ಗುಡುಗಿದರು. ಟ್ರಸ್ಟ್ ನವರೆಲ್ಲ ಸೇರಿ ಶ್ರೀಗಳನ್ನ ಉಚ್ಛಾಟನೆ ಮಾಡಿದ್ದರು ಸಹ ವಚನಾನಂದ ಶ್ರೀಗಳು ಮಾತ್ರ ಮಠ ಬಿಟ್ಟು ಅಲುಗಾಡಿಲ್ಲ. ಹೀಗಾಗಿ ಹೈಡ್ರಾಮವೇ ಶುರುವಾಗಿದೆ.

ಟ್ರಸ್ಟ್ ಸದಸ್ಯರು ಲೆಕ್ಕ ನೀಡಲು ಆಗಮಿಸುತ್ತಿದ್ದಂತೆಯೇ ವಚನಾನಂದ ಶ್ರೀಗಳ ಬೆಂಬಲಿಗರು ಮತ್ತು ಟ್ರಸ್ಟಿಗಳ ಬೆಂಬಲಿಗರ ನಡುವೆ ಘೋಷಣೆ ಯುದ್ಧ ನಡೆಯಿತು. ಉಭಯ ಗುಂಪುಗಳು ಮುಖಾಮುಖಿಯಾಗಿದ್ದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ನಾನು ಮಠವನ್ನು ಬಿಟ್ಟು ಹೋಗುವುದಿಲ್ಲ. ಇಲ್ಲಿ ನಡೆದಿರುವ ಲೂಟಿಯ ತನಿಖೆಯಾಗಲಿ ಎಂದು ವಚನಾನಂದ ಶ್ರೀಗಳು ಪಟ್ಟು ಹಿಡಿದಿದ್ದಾರೆ. ರಾಜ್ಯ ಸರ್ಕಾರದಿಂದ ವಸತಿ ಗೃಹ, ಹಾಸ್ಟೆಲ್, ಸಮುದಾಯ ಭವನದ ನಿರ್ಮಾಣಕ್ಕಾಗಿ ಬಂದಿದ್ದ 10 ಕೋಟಿ ರೂಪಾಯಿ ಅನುದಾನದಲ್ಲಿ ಗೋಲ್ಮಾಲ್ ನಡೆದಿದೆ ಎಂದು ಶ್ರೀಗಳು ವಾದಿಸಿದ್ದಾರೆ.



















