ತುಮಕೂರು: ಜಿಲ್ಲೆಯ ತೆಂಗು ಬೆಳೆಗಾರರಿಗೆ ಇತ್ತೀಚೆಗೆ ದೊಡ್ಡಮಟ್ಟದ ಖುಷಿ ಕೊಟ್ಟಿದ್ದು, ಉಂಡೆ ಕೊಬ್ಬರಿಯ ದರ. ದಾಖಲೆಯ ಮಟ್ಟಕ್ಕೆ ಮಾರಾಟವಾಗಿದೆ. ಇಷ್ಟೊಂದು ಬೆಲೆಗೆ ಮಾರಾಟವಾಗುವುದಕ್ಕೆ ಕಾರಣವೂ ಇದೆ. ಉತ್ತರ ಭಾರತದ ಪ್ರಮುಖ ನಗರದಲ್ಲೂ ತಿಪಟೂರು ಕೊಬ್ಬರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಹಾಗೇ ಕೊಬ್ಬರಿಯ ಕೊರತೆ ಇರುವ ಕಾರಣ ಬೆಲೆ ಜಾಸ್ತಿಯಾಗಿದೆ ಎನ್ನಲಾಗಿದೆ.
ಸದ್ಯ ಮಾರುಕಟ್ಟೆಯಲ್ಲಿ 38,018 ರೂಪಾಯಿ ಬೆಲೆ ಇದ್ದು, ಮುಂದಿನ ದಿನಗಳಲ್ಲಿ 40 ಸಾವಿರ ದಾಟುವ ನಿರೀಕ್ಷೆ ಇದೆ. ತಿಪಟೂರು ಕೊಬ್ಬರಿಯು ತನ್ನ ವಿಶಿಷ್ಟ ರುಚಿ, ಗಾತ್ರ ಮತ್ತು ಬಣ್ಣಕ್ಕೆ ದೇಶಾದ್ಯಂತ ಪ್ರಸಿದ್ಧಿಯಾಗಿದೆ. ಪ್ರಸ್ತುತ ಉತ್ತರ ಭಾರತದ ರಾಜ್ಯಗಳಿಂದ ತಿಪಟೂರು ಕೊಬ್ಬರಿಗೆ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ. ತಿಪಟೂರು ಕೊಬ್ಬರಿ ಗುಣಮಟ್ಟವನ್ನು ಉಳಿಸಿಕೊಂಡಿದೆ.
ಕೇವಲ ಕರ್ನಾಟಕ ಮಾತ್ರವಲ್ಲದೆ ತಮಿಳುನಾಡು ಮತ್ತು ಕೇರಳದ ವ್ಯಾಪಾರಿಗಳು ಕೂಡ ತಿಪಟೂರು ಮಾರುಕಟ್ಟೆಯಲ್ಲಿ ಕೊಬ್ಬರು ಕೊಂಡುಕೊಳ್ಳಲು ಮುಗಿಬೀಳುತ್ತಿದ್ದಾರೆ. ಹೀಗೆ ಇಲ್ಲಿನ ಕೊಬ್ಬರಿಗಾಗಿ ವ್ಯಾಪಾರಿಗಳ ನಡುವೆ ಪೈಪೋಟಿ ಏರ್ಪಟ್ಟಿರುವುದು ದರ ಹೆಚ್ಚಳಕ್ಕೆ ಪುಷ್ಟಿ ನೀಡಿದಂತಾಗಿದೆ. ಇದೀಗ ಬಿಸಿಲಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆ ತೆಂಗು ಬೆಳೆಗಾರರು ಕೊಬ್ಬರಿ ಆಗುವವರೆಗೂ ಬಿಡುವುದಿಲ್ಲ. ಬದಲಾಗಿ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳದೆ ಎಳನೀರು ಇರುವಾಗಲೇ ವರ್ತಕರಿಗೆ ಮಾರಾಟ ಮಾಡುತ್ತಿದ್ದಾರೆ. ಇದು ಕೂಡ ಕೊಬ್ಬರಿ ಬೆಲೆ ಏರಿಕೆಗೆ ಕಾರಣವಾಗಿದೆ.
















