ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 20 : ಟಿಪ್ಪರ್ ಲಾರಿ ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳನ್ನು ಚಳ್ಳಕೆರೆ ಪೊಲೀಸರು ಬಂಧಿಸಿ ಅವರಿಂದ 05 ಲಕ್ಷ ನಗದು ಮತ್ತು 02 ಲಕ್ಷ 50 ಸಾವಿರ ಮೌಲ್ಯದ ಲಾರಿಯ ಬಿಡಿ ಭಾಗಗಳು ಮತ್ತು 08 ಲಕ್ಷ ಮೌಲ್ಯದ ಕಾರು ವಶಪಡಿಸಿಕೊಂಡಿದ್ದಾರೆ.
ಮೈಸೂರು ಮತ್ತು ಚಾಮರಾಜನಗರ ಮೂಲದ ಸಯೀಂ ಪಾಷ, ರಶೀದ್ ಖಾನ್, ನಂದೀಶ್ ಕುಮಾರ್ ಮತ್ತು ಮೊಹಮದ್ ಮುಬಾರಕ್ ಬಂಧಿತರು.

ಘಟನೆ ಹಿನ್ನೆಲೆ :
ದಿನಾಂಕ :06.12.2025 ರಂದು ರಾತ್ರಿ ಚಳ್ಳಕೆರೆ ಟೌನ್ ಬಳ್ಳಾರಿ ರಸ್ತೆಯಲ್ಲಿ ಗೋವರ್ಧನ ವೆಲ್ಡಿಂಗ್ ಶಾಪ್ ಬಳಿ ನಿಲ್ಲಿಸಿದ್ದ ಕರುಣಪ್ರಸಾದ್ ರವರ ಟಿಪ್ಪರ್ ಲಾರಿಯನ್ನು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ, ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರಂಜಿತ್ ಕುಮಾರ್ ಭಂಡಾರು,ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಡಾ.
ಶಿವಕುಮಾರ್.ಆರ್ ರವರು ಮತ್ತು ಸತ್ಯನಾರಾಯಣರಾವ್ ಎಂ.ಜಿ ಪೊಲೀಸ್ ಉಪಾಧೀಕ್ಷಕರು, ಚಳ್ಳಕೆರೆ ಉಪವಿಭಾಗ ರವರ ಮಾರ್ಗದರ್ಶನದಲ್ಲಿ, ಪೊಲೀಸ್ ನಿರೀಕ್ಷಕರಾದ ಕುಮಾರ್.ಕೆ ರವರ ನೇತೃತ್ವದಲಿ., ಪಿಎಸ್ಐ ಶಿವರಾಜ್.ಜೆ ಮತ್ತು ಸಿಬ್ಬಂದಿಯವರ ತಂಡವನ್ನು ನೇಮಿಸಿರುತ್ತಾರೆ.
ಈ ತಂಡವು ತನಿಖೆ ಮಾಡಿ ನಾಲ್ವರು ಆರೋಪಿಗಳನ್ನು ಪತ್ತೆ ಮಾಡಿ ವಿಚಾರಣೆ ನಡೆಸಿದಾಗ ಚಿತ್ರದುರ್ಗ ಕೋಟೆ ಠಾಣೆ ವ್ಯಾಪ್ತಿಯಲ್ಲಿ,-01, ದಾವಣಗೆರೆ ಆರ್.ಎಂ.ಸಿ ಠಾಣಾ -02, ಬಳ್ಳಾರಿ ಎಪಿಎಂಸಿ ಠಾಣಾ ವ್ಯಾಪ್ತಿಯಲ್ಲಿ 01, ರಾಣೆಬೆನ್ನೂರು ನಗರ ಠಾಣಾ ವ್ಯಾಪ್ತಿಯಲ್ಲಿ 01 ಪ್ರಕರಣಗಳಲ್ಲಿ ಇವರು ಭಾಗಿಯಾಗಿದ್ದರೆಂದು ತಿಳಿದುಬಂದಿದೆ. ಇವರಿಂದ 05 ಲಕ್ಷ ನಗದು ಹಣ, ಅಂದಾಜು 02 ಲಕ್ಷ 50 ಸಾವಿರ ಮೌಲ್ಯದ ಲಾರಿಯ ಬಿಡಿ ಭಾಗಗಳು, ಮತ್ತು ಕೃತ್ಯಕ್ಕೆ ಉಪಯೋಗಿಸಿದ Xylo ಕಾರು ಅಂದಾಜು ಬೆಲೆ 08 ಲಕ್ಷ, ಇವೆಲ್ಲವುಗಳ ಒಟ್ಟು ಮೊತ್ತ 15,50,000/- ಮೌಲ್ಯದ ನಗದು ಮತ್ತು ಕಾರನ್ನು ವಶಕ್ಕೆ ಪಡೆದಿರುತ್ತಾರೆ.
ಪೊಲೀಸ್ ಅಧೀಕ್ಷಕರು ಚಳ್ಳಕೆರೆ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ.

















