ಹುಬ್ಬಳ್ಳಿ : ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ಕೂಡ ಅಪರಾಧಿ ಎಂದು ಸಾಬೀತಾಗಿದ್ದು, ಶಿಕ್ಷೆಯ ಪ್ರಮಾಣವನ್ನಷ್ಟೇ ಪ್ರಕಟಿಸಬೇಕಿದೆ. ಈ ಹಿನ್ನೆಲೆ ಮೃತ ಯೋಗೀಶ್ ಗೌಡ ಸಹೋದರಿಯರು ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ಹೋರಾಟಕ್ಕೆ 10 ವರ್ಷದ ಬಳಿಕ ಗೆಲುವು ಸಿಕ್ಕಿದೆ. ನನ್ನ ತಮ್ಮನ ಆತ್ಮಕ್ಕೆ ಶಾಂತಿ ಸಿಕ್ಕಿದೆ. ಇದರಿಂದ ದೇವರು ನಮ್ಮ ಪರ ಇದ್ದಾನೆ ಅನ್ನೋದು ಗೊತ್ತಾಗ್ತಿದೆ ಎಂದಿದ್ದಾರೆ.
ಕೊಲೆಗಾರ ವಿನಯ್ ಗೆ ಜೀವಾವಧಿ ಶಿಕ್ಷೆಯಾಗಬೇಕು. ಈಗ ಮಾಡಿದ್ದನ್ನ ಬಸವರಾಜ ಮುತ್ತಗಿ ಆಗಲೇ ಮಾಡಬೇಕಿತ್ತು. ಹಾಗೇ ಮಾಡಿದ್ದರೆ ನನ್ನ ಸಹೋದರ ಜೀವಂತವಾಗಿ ಆದ್ರೂ ಇರ್ತಾ ಇದ್ದ. ನಮ್ಮ ಪರ ದೇವರಿದ್ದಾನೆ. ತಮ್ಮನುಗೆ ಶಾಂತಿ, ನ್ಯಾಯ ಸಿಕ್ಕಿದೆ. ನಮ್ಮ ತಾಯಿ ಅಪೀಲ್ ಮಾಡಿದ್ದಳು. ಕಾನೂನು ಇದೆ. ನಾನು ಅಪರಾಧ ಮಾಡಿಲ್ಲ ಅಂತ ಹೇಳಿದ್ದರು, ಕಾನೂನು ಇಂದು ಶಿಕ್ಷೆ ಕೊಟ್ಟಿದೆ. ಅಧಿಕಾರವಿದ್ದ ಕಾರಣ ಎಲ್ಲವನ್ನು ಮುಚ್ಚಿ ಹಾಕ್ತಾ ಇದ್ದರು. ಅವನಿಗೆ ಜೀವಾವಧಿ ಶಿಕ್ಷೆ ಆಗಲಿ ಅಂತ ಕೇಳಿಕೊಳ್ತೇವೆ ಎಂದು ಅಕ್ಕಮಹಾದೇವಿ ಹೇಳಿದ್ದಾರೆ.

ಬಸವರಾಜ್ ಮುತ್ತಗಿ ಮೊದಲೇ ಕ್ಲೂ ಕೊಟ್ಟಿದ್ದರೆ ನನ್ನ ತಮ್ಮ ಬದುಕ್ತಾ ಇದ್ದ. ನಮಗೇನು ಜೀವ ಬೆದರಿಕೆ ಏನು ಇಲ್ಲ. ನಾವೇನು ಅನ್ಯಾಯ ಮಾಡಿಲ್ಲ. ಅನ್ಯಾಯ ಮಾಡಿದವರಿಗೆ ಶಿಕ್ಷೆ ಆಗಿಯೇ ಆಗುತ್ತೆ. ಕೋರ್ಟ್ ಇದೆ ಕಾನೂನು ಇದೆ. ನ್ಯಾಯಾಲಯದ ಮೇಲೆ ಭರವಸೆ ಇಟ್ಟಿದ್ದೆವು. ಈಗ ನ್ಯಾಯ ಸಿಕ್ಕಿದೆ ಎಂದಿದ್ದಾರೆ. ಇನ್ನೊಬ್ಬ ಸಹೋದರಿ ಜಗದೀಶ್ವರಿ ಮಾತನ್ನಾಡಿ, ನಮ್ಮಂತೆಯೇ ಕೇಸ್ ಆಗಿದೆ. ನಮಗೆ ನ್ಯಾಯ ಕೊಡಿಸೋದಕ್ಕೆ ಓಡಾಡಿದ ಎಲ್ಲರಿಗೂ ನಾವೂ ಧನ್ಯವಾದ ತಿಳಿಸುತ್ತೇವೆ ಎಂಬ ಮಾತನ್ನ ಹೇಳಿದ್ದಾರೆ.















