ದಾವಣಗೆರೆ: ಪಂಚಮಸಾಲಿ ಪೀಠದಲ್ಲಿ ಬಿಗ್ ಅಪ್ಡೇಟ್ ಒಂದು ಸಿಕ್ಕಿದೆ. ವಚನಾನಂದ ಶ್ರೀಗಳನ್ನೇ ಪೀಠದಿಂದ ಉಚ್ಛಾಟನೆ ಮಾಡಿದ್ದಾರೆ. ಲೆಕ್ಕಕೊಡಿ ಅಭಿಯಾನ ದೊಡ್ಡ ಮಟ್ಟದಲ್ಲಿಯೇ ನಡೆದಿದೆ. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಈ ಅಭಿಯಾನ ಆರಂಭಗೊಂಡಿತ್ತು. ಈ ಬೆನ್ನಲ್ಲೇ ಟ್ರಸ್ಟಿಗಳೆಲ್ಲಾ ಸೇರಿ, ವಚನಾನಂದ ಶ್ರೀಗಳನ್ನೇ ಪದಚ್ಯುತಿಗೊಳಿಸಿದ್ದಾರೆ.
ಮಠದ ಮುಂದೆ ದೊಡ್ಡಮಟ್ಟದಲ್ಲಿ ಪ್ರತಿಭಟನೆ ಶುರುವಾದ ಕಾರಣ, ಮಠದ ಒಟ್ಟು 15 ಟ್ರಸ್ಟಿಗಳ ಪೈಕಿ 13 ಮಂದಿ ಇಂದು ತುರ್ತು ಸಭೆ ನಡೆಸಿದರು. ಅದರಲ್ಲಿ 13 ಮಂದಿ ಸಭೆಯಲ್ಲಿ ಭಾಗವಹಿಸಿ ಸ್ವಾಮೀಜಿಗಳನ್ನು ಪೀಠದಿಂದ ಕೆಳಗಿಳಿಸಲು ಒಮ್ಮತದ ತೀರ್ಮಾನವನ್ನು ತೆಗೆದುಕೊಂಡರು. ಈ ವಿವಾದಕ್ಕೆ ಮುಖ್ಯ ಕಾರಣವಾಗಿದ್ದು, 2008ರಿಂದಾನೂ ಸರ್ಕಾರದಿಂದ ಬಂದಿರುವ ಹಾಗೂ ಭಕ್ತರು ನೀಡಿರುವ ದೇಣಿಗೆ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ.

ಪ್ರಧಾನ ಧರ್ಮದರ್ಶಿ ಬಿ ಸಿ ಉಮಾಪತಿ ಹಾಗೂ ಚಂದ್ರಶೇಖರ್ ಪೂಜಾರ್ ಸೇರಿದಂತೆ ಹಲವು ಟ್ರಸ್ಟಿಗಳ ವಿರುದ್ಧ ಹಣ ದುರ್ಬಳಕೆಯ ಗಂಭೀರ ಆರೋಪಗಳಿವೆ. ಕಳೆದ ಸಭೆಯಲ್ಲಿ ಲೆಕ್ಕ ಕೇಳಿದ್ದಕ್ಕಾಗಿ ಮಠದ ಆಡಳಿತಾಧಿಕಾರಿ ರಾಜ್ ಕುಮಾರ್ ಅವರ ಮೇಲೆ ಹಲ್ಲೆ ನಡೆದಿರುವುದು ಕೂಡ ವಿವಾದಕ್ಕೆ ತುಪ್ಪ ಸುರಿದಂತೆ ಆಗಿದೆ. ಅಂದಿನಿಂದ ಭಕ್ತರು ಲೆಕ್ಕ ಕೊಡಿ ಎಂದು ಕೇಳುತ್ತಿದ್ದರು. ಸಭೆಯ ಹಿನ್ನಲೆಯಲ್ಲಿ ಇಂದು ಮಠದ ಮುಂದೆ ನೂರಾರು ಭಕ್ತರು ಜಮಾಯಿಸಿ, ಲೆಕ್ಕಪತ್ರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಪರಿಸ್ಥಿತಿ ನಿಯಂತ್ರಣ ತಪ್ಪುವ ಎಲ್ಲಾ ಲಕ್ಷಣಗಳು ಕಾಣುತ್ತಿದ್ದ ಕಾರಣಕ್ಕೆ ಅಲ್ಲಿನ ತಹಶಿಲ್ದಾರರು ನಿಷೇಧಾಜ್ಞೆಯನ್ನು ಕೂಡ ಜಾರಿಗೊಳಿಸಿದ್ದರು. ಸದ್ಯ ಸಭೆಯಲ್ಲಿ ಎಲ್ಲಾ ರೀತಿಯ ಚರ್ಚೆಗಳ ಬಳಿಕ ಸ್ವಾಮೀಜಿಯನ್ನು ಉಚ್ಛಾಟನೆ ಮಾಡಿದ್ದಾರೆ.












