Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ: ‘’ರಾಜಕೀಯವೇ ಸಾಕೆಂದಿದ್ದ ಸಿದ್ದರಾಮಯ್ಯಗೆ ಧೈರ್ಯ ತುಂಬಿದವರು ದೇವೇಗೌಡ”

---Advertisement---

ಬೆಂಗಳೂರು : ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 1999ರ ಚುನಾವಣೆಯ ಸೋಲಿನ ನಂತರ ಸಿದ್ದರಾಮಯ್ಯ ರಾಜಕೀಯದಿಂದ ದೂರವಾಗುವ ಬಗ್ಗೆ ನಿರ್ಧರಿಸಿದ್ದಾಗ, ತಮ್ಮ ತಂದೆ ಎಚ್ ಡಿ ದೇವೆಗೌಡ ಅವರು ಅವರನ್ನು ಸಮಾಧಾನಪಡಿಸಿದ್ದ ಘಟನೆನ್ನು ಅವರು ನೆನಪಿಸಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಕುಮಾರಸ್ವಾಮಿ, “1999ರಲ್ಲಿ ನಾವು ಎಲ್ಲರೂ ಸೋತಾಗ ಸಿದ್ದರಾಮಯ್ಯ ಹಾಗೂ ಡಾ. ಎಚ್.ಸಿ. ಮಹದೇವಪ್ಪ ದೇವೇಗೌಡರ ಮನೆಗೆ ಬಂದಿದ್ದರು. ಆ ವೇಳೆ ಸಿದ್ದರಾಮಯ್ಯ ರಾಜಕೀಯವೇ ಸಾಕೆಂದು ಕಣ್ಣೀರಿಟ್ಟಿದ್ದರು. ಅವರಿಗೆ ಧೈರ್ಯ ತುಂಬಿ ಮುಂದಿನ ದಾರಿ ತೋರಿಸಿದ್ದು ದೇವೇಗೌಡರು” ಎಂದು ಹೇಳಿದರು.ಮುಂದುವರಿದು, “ಅಂದು ಅವರ ಕಣ್ಣೀರು ಬಕೆಟ್ಟೇ ತುಂಬುವಷ್ಟು ಇತ್ತು. ಆ ಘಟನೆಯ ಸಾಕ್ಷಿ ನಾನೇ” ಎಂದು ತಿಳಿಸಿದರು.

2006ರ ರಾಜಕೀಯ ಬೆಳವಣಿಗೆಗಳನ್ನು ಉಲ್ಲೇಖಿಸಿದ ಅವರು, “ಅಹಿಂದ ಹೆಸರಿನಲ್ಲಿ ನಮ್ಮ ಪಕ್ಷಕ್ಕೆ ಸಿದ್ದರಾಮಯ್ಯ ಚೂರಿ ಹಾಕಿದರು. ಅವರು ಪಕ್ಷ ಬಿಟ್ಟಾಗ ಕೇವಲ 8 ಮಂದಿ ಮಾತ್ರ ಜೊತೆಗಿದ್ದರು. ಈ ಎಲ್ಲವೂ ಅವರಿಗೆ ಈಗ ನೆನಪಿಲ್ಲವೇ?” ಎಂದು ಪ್ರಶ್ನಿಸಿದರು.
“ತಮ್ಮನ್ನು ಅಹಿಂದ ಚಾಂಪಿಯನ್ ಎಂದು ಕರೆಸಿಕೊಳ್ಳುವ ಸಿದ್ದರಾಮಯ್ಯ, ಕಾಂಗ್ರೆಸ್ ಬಿಟ್ಟು ಹೊರಬಂದು ಕೆಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಲಿ ನೋಡೋಣ” ಎಂದು ಸವಾಲು ಹಾಕಿದರು.

“ಕಾಂಗ್ರೆಸ್‌ಗೆ ಕೊನೆಯ ಮೊಳೆ ಹೊಡೆಯುವವರು ಸಿದ್ದರಾಮಯ್ಯನೇ” ಎಂದು ಟೀಕಿಸಿದರು.ಇನ್ನೂ, “ಅವರನ್ನು ಕಂಡು ನಮಗೆ ಅಸೂಯೆ ಇಲ್ಲ. ಕಾಂಗ್ರೆಸ್ ಒಳಗೇ ಕೆಲವರಿಗೆ ಹೊಟ್ಟೆಕಿಚ್ಚು ಇದೆ” ಎಂದು ವ್ಯಂಗ್ಯವಾಡಿದರು.ರಾಜ್ಯದ ಅಭಿವೃದ್ಧಿ ಕುರಿತು ಪ್ರತಿಕ್ರಿಯಿಸಿದ ಅವರು, “ರಾಜ್ಯ ಸರ್ಕಾರ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಕರ್ನಾಟಕಕ್ಕೆ ಹೆಚ್ಚಿನ ಕೈಗಾರಿಕೆಗಳನ್ನು ತರಲು ಸಿದ್ಧನಿದ್ದೇನೆ” ಎಂದರು.
ಮುಖ್ಯಮಂತ್ರಿ ಸ್ಥಾನ ಕುರಿತು ಮಾತನಾಡಿದ ಕುಮಾರಸ್ವಾಮಿ, “ಸಿದ್ದರಾಮಯ್ಯ ಸಿಎಂ ಸ್ಥಾನ ಬಿಡುವುದಿಲ್ಲ. ಅವರ ಸ್ವಭಾವ ನನಗೆ ಗೊತ್ತಿದೆ. ಸಿಎಂ ಸ್ಥಾನಕ್ಕಾಗಿ ಕೆಲವರು ದೇವರ ಮೊರೆ ಹೋಗುತ್ತಿದ್ದಾರೆ. ಆದರೆ ಸ್ವಾರ್ಥಕ್ಕಾಗಿ ಬೇಡಿಕೊಂಡರೆ ದೇವರು ಫಲ ಕೊಡಲ್ಲ” ಎಂದು ಹೇಳಿದರು.

ತಮ್ಮ ರಾಜಕೀಯ ಜೀವನದ ಕುರಿತು ಮಾತನಾಡಿದ ಅವರು, “ನಾನು ಮುಖ್ಯಮಂತ್ರಿಯಾದದ್ದು ದೇವರ ಕೃಪೆಯಿಂದ. ಬಹುಮತವಿಲ್ಲದೇ ಎರಡು ಬಾರಿ ಸಿಎಂ ಆಗಿದ್ದೇನೆ. ಮುಂದೆಯೂ ದೇವರ ಅನುಗ್ರಹ ಇದ್ದರೆ ಆಗುತ್ತೇನೆ” ಎಂದು ಹೇಳಿದರು.ಕುಟುಂಬ ರಾಜಕಾರಣದ ಬಗ್ಗೆ ಟೀಕಿಸಿದ ಅವರು, “ಸಿದ್ದರಾಮಯ್ಯ ಹಣ ವಸೂಲಿಗಾಗಿ ತಮ್ಮ ಮಗನನ್ನು ರಾಜಕೀಯಕ್ಕೆ ತಂದಿದ್ದಾರೆ. ಆದರೆ ನಾನು ನನ್ನ ಮಗ ನಿಖಿಲ್ ಅವರನ್ನು ಜನರ ಆಶಯದ ಮೇರೆಗೆ ರಾಜಕೀಯಕ್ಕೆ ತಂದಿದ್ದೇನೆ” ಎಂದು ಹೇಳಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now