ದೇಶದ ರಾಜಧಾನಿ ದೆಹಲಿಯ ಅತ್ಯಂತ ಭದ್ರತಾ ವಲಯಗಳಲ್ಲಿ ಒಂದಾದ ದೆಹಲಿ ವಿಧಾನಸಭೆಯಲ್ಲಿ ಭಾರೀ ಭದ್ರತಾ ಲೋಪ ಬೆಳಕಿಗೆ ಬಂದಿದೆ. ಸೋಮವಾರ ಅಪರಿಚಿತ ಕಾರೊಂದು ವಿಧಾನಸಭೆಯ ಮುಖ್ಯ ಗೇಟ್ಗೆ ಡಿಕ್ಕಿ ಹೊಡೆದು ಒಳನುಗ್ಗಿ, ಬಳಿಕ ಯಾರಿಗೂ ಸಿಗದಂತೆ ಪರಾರಿಯಾಗಿದೆ.ಘಟನೆ ವೇಳೆ ಕಾರಿನಲ್ಲಿ ಇದ್ದ ವ್ಯಕ್ತಿಗಳು ವಿಧಾನಸಭೆ ಆವರಣದಲ್ಲಿ ನಿಲ್ಲಿಸಿದ್ದ ಸ್ಪೀಕರ್ ವಾಹನಕ್ಕೆ ಕಪ್ಪು ಮಸಿ ಬಳಿದಿರುವುದು ಮತ್ತಷ್ಟು ಆತಂಕ ಮೂಡಿಸಿದೆ.
ಈ ಘಟನೆ ಆಡಳಿತ ಯಂತ್ರ ಹಾಗೂ ಭದ್ರತಾ ಸಿಬ್ಬಂದಿಯಲ್ಲಿ ಗಂಭೀರ ಚಿಂತೆ ಹುಟ್ಟಿಸಿದೆ.ಪ್ರತ್ಯಕ್ಷದರ್ಶಿಗಳ ಪ್ರಕಾರ, ವೇಗವಾಗಿ ಬಂದ ಕಾರು ಮುಖ್ಯ ದ್ವಾರವನ್ನು ಭೇದಿಸಿ ಒಳಪ್ರವೇಶಿಸಿದ್ದು, ಕೆಲಕಾಲ ಆವರಣದಲ್ಲಿ ಸಂಚರಿಸಿ ಯಾವುದೇ ಅಡ್ಡಿಯಿಲ್ಲದೆ ಹೊರಟಿದೆ. ಅತ್ಯಂತ ಸೂಕ್ಷ್ಮ ಪ್ರದೇಶವಾಗಿರುವ ವಿಧಾನಸಭೆಯಲ್ಲಿ ಇಂತಹ ಘಟನೆ ಸಂಭವಿಸಿರುವುದು ಭದ್ರತಾ ವ್ಯವಸ್ಥೆಯ ಮೇಲೆ ಪ್ರಶ್ನೆಗಳನ್ನು ಎಬ್ಬಿಸಿದೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಸಮಗ್ರ ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಘಟನೆ ಸಮಯದಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಯನ್ನು ವಿಚಾರಣೆ ನಡೆಸಲಾಗುತ್ತಿದೆ.ಇದರಿಂದ ವಿಧಾನಸಭೆಯ ಭದ್ರತಾ ವ್ಯವಸ್ಥೆಯಲ್ಲಿನ ದೋಷಗಳು ಬಹಿರಂಗವಾಗಿದ್ದು, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.















