ಪ್ರೇಮಿಗಳಿಬ್ಬರು ತುಂಗಭದ್ರ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ನಡೆದಿದೆ. ಅನ್ಯಧರ್ಮದ ಪ್ರೇಮಕ್ಕೆ ಕುಟುಂಬದವರಿಂದ ವಿರೋಧ ವ್ಯಕ್ತವಾದ ಹಿನ್ನೆಲೆ, ಬೇಸರಗೊಂಡುಈ ಕಾರ್ಯ ಮಾಡಿದ್ದಾರೆ ಎನ್ನಲಾಗುತ್ತಿದೆ.ಆದರೆ ಅಗ್ನಿಶಾಮಕ ದಳದ ಸಿಬ್ಬಂದಿ ಇಬ್ಬರನ್ನೂ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಾವಣಗೆರೆ ನಗರದ ಬಾಡಾ ಕ್ರಾಸ್ ಪ್ರದೇಶದ ಯುವಕ ಮತ್ತು ಯುವತಿ ಪರಸ್ಪರ ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದೆ.ಆದರೆ ಈ ಜೋಡಿ ಬೇರೆ ಬೇರೆ ಧರ್ಮಗಳಿಗೆ ಸೇರಿದವರಾಗಿದ್ದರಿಂದ, ಇವರ ಪ್ರೇಮ ಸಂಬಂಧಕ್ಕೆ ಇಬ್ಬರ ಕುಟುಂಬಗಳಲ್ಲೂ ತೀವ್ರ ವಿರೋಧ ವ್ಯಕ್ತವಾಗಿತ್ತು.ಹುಡುಗಿ ಹಿಂದೂ ಧರ್ಮದವರಾಗಿದ್ದು, ಯುವಕ ಮುಸ್ಲಿಂ ಧರ್ಮದವರಾಗಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದಾಗಿ ಮನೆಯವರು ಇವರ ಮದುವೆಗೆ ಒಪ್ಪಿಗೆ ನೀಡಲು ನಿರಾಕರಿಸಿದ್ದರು. ಕುಟುಂಬದ ಒತ್ತಡ ಮತ್ತು ವಿರೋಧದಿಂದ ಬೇಸರಗೊಂಡ ಪ್ರೇಮಿಗಳಿಬ್ಬರೂ ಆತ್ಮಹತ್ಯೆಗೆ ಯತ್ನಿಸಲು ನಿರ್ಧರಿಸಿದ್ದರೆಂದು ಹೇಳಲಾಗುತ್ತಿದೆ.
ಇಬ್ಬರೂ ಹೊನ್ನಾಳಿ ಪಟ್ಟಣದ ತುಂಗಭದ್ರ ನದಿ ಸೇತುವೆ ಬಳಿ ಹೋಗಿ ಅಲ್ಲಿಂದ ನದಿಗೆ ಹಾರಿದ್ದಾರೆ. ಸೇತುವೆಯಿಂದ ನದಿಗೆ ಹಾರಿದ ನಂತರ ಇಬ್ಬರೂ ಸ್ವಲ್ಪ ದೂರ ಈಜಿ ಹೋಗಿದ್ದಾರೆ ಎಂದು ತಿಳಿದುಬಂದಿದೆ. ನಂತರ ನೀರಿನ ಮಧ್ಯಭಾಗದಲ್ಲಿ ಇದ್ದ ಮರಳು ಪ್ರದೇಶದ ಬಳಿ ಕುಳಿತುಕೊಂಡು ಸಹಾಯಕ್ಕಾಗಿ ಕಾಯುತ್ತಿದ್ದರು ಎನ್ನಲಾಗಿದೆ.
ಈ ಘಟನೆ ಸ್ಥಳೀಯರ ಗಮನಕ್ಕೆ ಬಂದ ತಕ್ಷಣ, ಅವರು ತಕ್ಷಣವೇ ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಸಿಕ್ಕ ತಕ್ಷಣವೇ ಹೊನ್ನಾಳಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.
ನದಿಯ ಮಧ್ಯಭಾಗದಲ್ಲಿ ಕುಳಿತಿದ್ದ ಪ್ರೇಮಿಗಳಿಬ್ಬರನ್ನು ರಕ್ಷಿಸಲು ಸಿಬ್ಬಂದಿ ದೋಣಿ ಬಳಸಿ ಕಾರ್ಯಾಚರಣೆ ನಡೆಸಿದರು. ನಂತರ ಇಬ್ಬರನ್ನೂ ಸುರಕ್ಷಿತವಾಗಿ ದೋಣಿಗೆ ಕರೆತಂದು ನದಿತೀರಕ್ಕೆ ತಲುಪಿಸಿದರು.
ಪ್ರೇಮಿಗಳಿಬ್ಬರನ್ನೂ ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಕುಟುಂಬದವರಿಗೂ ಈ ಕುರಿತು ಮಾಹಿತಿ ನೀಡಲಾಗಿದೆ. ಈ ಸಂಬಂಧ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.






