ಬೆಂಗಳೂರು: ಇಂದಿನಿಂದ ಹೊಸ ವರ್ಷ ಪ್ರಾರಂಭವಾಗಿದೆ. ಪ್ರತಿವರ್ಷ ಕೂಡ ರಾತ್ರಿ 12 ಗಂಟೆಗೆ ಎಲ್ಲೆಡೆ ಸೆಲೆಬ್ರೇಷನ್ ಜೋರಾಗಿ ಇರುತ್ತದೆ. ಆದರೆ ಆ ಸಂದರ್ಭದಲ್ಲಿ ಸೆಕ್ಯೂರಿಟಿ ಕೊಡುವುದು ಬಹಳ ಮುಖ್ಯ. ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕಾಗಿರುತ್ತದೆ. ಈ ಸಂಬಂಧ ನಮ್ಮ ರಾಜ್ಯದ ಪೊಲೀಸರು ಅಚ್ಚುಕಟ್ಟಾಗಿ ಭದ್ರತೆಯನ್ನ ಒದಗಿಸಿದ್ದರು. ಈ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಪೊಲೀಸ್ ಇಲಾಖೆಯ ವತಿಯಿಂದ ಹಾಗೂ ನನ್ನ ವೈಯಕ್ತಿಕವಾಗಿ 2026ನೇ ವರ್ಷದ ಶುಭಾಶಯಗಳು. ಎಲ್ಲರಿಗೂ ಭಗವಂತ ಒಳ್ಳೆಯದು ಮಾಡಲಿ. ಹೊಸ ವರ್ಷದ ಆಚರಣೆ ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಆಚರಣೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ನಾವೂ ನಿರೀಕ್ಷೆ ಮಾಡಿದ್ದು, ಇನ್ನು ಹೆಚ್ಚಿನ ಜನ ಭಾಗವಹಿಸುತ್ತಾರೆ ಎಂದುಕೊಂಡಿದ್ದೆವು. ಸದ್ಯ 7-8 ಲಕ್ಷ ಜನ ಭಾಗವಹಿಸಿದ್ದಾರೆ ಅಂತೇಳಿ ನಮ್ಮ ಇಲಾಖೆಯವರು ಹೇಳ್ತಾ ಇದ್ದಾರೆ. ನಾನು ಕೂಡ ಕಮಾಂಡ್ ಸೆಂಟರ್ ನಲ್ಲಿ ಕೂತು ವೀಕ್ಷಣೆ ಮಾಡಿದ್ದೇನೆ ಎಂದಿದ್ದಾರೆ.
ಇದೇ ವೇಳೆ ಕೇಂದ್ರ ಸರ್ಕಾರದ ಬಗ್ಗೆ ಮಾತನಾಡಿ, ನಮ್ಮ ಇಲಾಖೆಯಲ್ಲಿ ಮೊದಲ ಬಾರಿಗೆ ಇಷ್ಟೊಂದು ಅಧಿಕಾರಿಗಳನ್ನ, ಡಿಐಜಿ, ಐಜಿಗಳಿಗೆಲ್ಲಾ ಪ್ರಮೋಷನ್ ಕೊಡುವಂತದ್ದು ಒಟ್ಟಿಗೆ ಕೊಡುವಂತಹದ್ದು ಯಾವತ್ತು ಆಗಿರಲಿಲ್ಲ. 30 ಕ್ಕೂ ಹೆಚ್ಚು ಸಿಬ್ಬಂದಿಗೆ ಪ್ರಮೋಷನ್ ನೀಡಲಾಗಿದೆ. ಅವರೆಲ್ಲರಿಗೂ ಜವಬ್ದಾರಿಯನ್ನು ನೀಡಲಾಗಿದೆ. ರಾಜ್ಯಕ್ಕೆ ಅವರೆಲ್ಲರೂ ಒಳ್ಳೆಯ ಕೆಲಸ ಮಾಡುತ್ತಾರೆ. ಜೊತೆಗೆ ಕೇಂದ್ರ ಸರ್ಕಾರದಿಂದ ಮೊದಲ ಬಾರಿಗೆ 350 ಕೋಟಿ ರೂಪಾಯಿ ನಮ್ಮ ಇಲಾಖೆಗೆ ಹಣ ಸಂದಾಯವಾಗಿದೆ. ಇದಕ್ಕೆ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.


